ಬೆಂಗಳೂರಿನಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕ ಬಲಿ
ಅನಸ್ತೇಶಿಯಾ ಓವರ್ ಡೋಸ್ ನಿಂದಾಗಿ ನಿನ್ನೆ ರಾತ್ರಿ ಸಾವನ್ನಪ್ಪಿದ ಸಂತೋಷ್ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.
ಬೆಂಗಳೂರು, ಏಪ್ರಿಲ್ 22: ಅನಸ್ತೇಶಿಯಾ ಓವರ್ ಡೋಸ್ ನಿಂದಾಗಿ ಸಂತೋಷ್ ಎಂಬ 6 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟಿನಲ್ಲಿ ನಿನ್ನೆ (ಏಪ್ರಿಲ್ 21) ರಾತ್ರಿ ನಡೆದಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮಗುವಿನ ಪೋಷಕರು ಆಸ್ಪತ್ರೆ ವೈದ್ಯರ ವಿರದ್ಧ ದೂರು ನೀಡಿದ್ದಾರೆ.
ನಗರದ ಈಜಿಪುರ ನಿವಾಸಿ ನಿತ್ಯಾನಂದ ಎಂಬುವವರ ಪುತ್ರ ಸಂತೋಷ್ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದು, ಇಲ್ಲಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿರುವ ಅಣ್ಣಯ್ಯ ಆಸ್ಪತ್ರೆ ವಿರುದ್ಧ ದೂರು ದಾಖಲಿಸಲಾಗಿದೆ.[ಕ್ಯಾನ್ಸರ್ ಚಿಕಿತ್ಸೆಗೆ 5 ಲಕ್ಷದವರೆಗೆ ಬಡ್ಡಿರಹಿತ ಸಾಲ]
ಬಾಲಕ ಸಂತೋಷ್ ಮೂಗಿನಲ್ಲಿ ದುರ್ಮಾಂಸ ಬೆಳೆದಿದ್ದು, ಆಪರೇಷನ್ ಮಾಡಿಸಲು ಅಣ್ಣಯ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ನಡುವೆ ಅಪರೇಷನ್ ಗಾಗಿ ಬಾಲಕನಿಗೆ ಅನಸ್ತೇಶಿಯಾ ನೀಡಿ ಆಪರೇಷನ್ ಮಾಡಿದ ವೈದ್ಯರು ಪರಿಸ್ಥಿತಿ ಕೈ ಮೀರಿದಾಗ, ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು. [ಬೆಂಗಳೂರು : ವೈದ್ಯನ ನಿರ್ಲಕ್ಷ್ಯದಿಂದ ಮಗು ಸಾವು]
ಈ ವೇಳೆ ಬಾಲಕನನ್ನು ಬೇರೆ ಆಸ್ಪತ್ರೆಗೆ ರವಾನಿಸುವಾಗ ಮಾರ್ಗಮಧ್ಯದಲ್ಲೇ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ಘಟಿಸಿದ ಈ ದುರ್ಘಟನೆಯಿಂದಾಗಿ ಬಾಲಕನ ಪಾಲಕರ ಶೋಕ ಮಡುಗಟ್ಟಿದೆ.
ಮಗು ಸಾವನ್ನಪ್ಪುತ್ತಿದ್ದಂತೆ ಆಸ್ಪತ್ರೆ ವೈದ್ಯರು ಆಸ್ಪತ್ರೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದ್ದು, ದೂರವಾಣಿ ಕರೆಗೂ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ