ಪುಸ್ತಕ ರೂಪದಲ್ಲಿ ಸೊಗಸುಗಾರನ ಏಳುಬೀಳು
ಬೆಂಗಳೂರು, ಮೇ 17 : "ಭಾನುವಾರ ಬೆಳಿಗ್ಗೆ ಹತ್ತು ಗಂಟೆಗೆ ನನ್ನದೊಂದು ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ. ದಯವಿಟ್ಟು ಬರಬೇಕು." "ಏನ್ ಸಾರ್, ನೀವೂ ಹತ್ತು ಗಂಟೆಗೇ ಇಟ್ಟುಕೊಂಡಿದ್ದೀರಾ? ನನ್ನ ಸ್ನೇಹಿತನ ಪುಸ್ತಕ ಬಿಡುಗಡೆಯೂ ಅದೇ ಸಮಯದಲ್ಲಿದೆಯಲ್ಲ! ಆಯ್ತು ನೋಡೋಣ..."
ಈ ಭಾನುವಾರ ಎರಡೂ ಪುಸ್ತಕಗಳ ಲೇಖಕರು ನಿಮ್ಮ ಸ್ನೇಹಿತರಾಗಿದ್ದು, ಇಬ್ಬರೂ ಆಹ್ವಾನ ನೀಡಿದರೆ, ಇಂಥದೊಂದು ಸಂದಿಗ್ಧಕ್ಕೆ ಎದುರಾದರೆ ಅದು ನಿಮ್ಮ ತಪ್ಪಲ್ಲ. ಹೌದು ಸಾರ್, ಎರಡು ಪುಸ್ತಕಗಳು ಬೆಂಗಳೂರಿನಲ್ಲಿ ಹೆಚ್ಚೂಕಡಿಮೆ ಒಂದೇ ಸಮಯದಲ್ಲಿ ಬಿಡುಗಡೆಯಾಗುತ್ತಿದೆ.
ಒಂದು ಯುವ ಕವಿ, ಲೇಖಕ ರಾಜೇಂದ್ರ ಪ್ರಸಾದ್ ಅವರ ಸಾಹಿತ್ಯ ಪತ್ರಿಕೆ 'ಸಂಕಥನ'ವಾದರೆ, ಮತ್ತೊಂದು ಹಿರಿಯ ಪತ್ರಕರ್ತ ಜಯಪ್ರಕಾಶ್ ನಾರಾಯಣ ಅವರ 'ಸೊಗಸುಗಾರನ ಏಳುಬೀಳು : ವಿಜಯ ಮಲ್ಯ ವೃತ್ತಾಂತ' ಎಂಬ ಸೊಗಸಾದ ಪುಸ್ತಕ.
ಇದೇ 17ರ ಭಾನುವಾರ ಬೆಳಗ್ಗೆ 10.30ಕ್ಕೆ ಜಯಪ್ರಕಾಶ್ ನಾರಾಯಣ ಅವರ ಅನುವಾದಿತ ಪುಸ್ತಕ ಬಿಡುಗಡೆ ಆಗುತ್ತಿದೆ. ಇಂಗ್ಲಿಷಿನಲ್ಲಿ ಹಿರಿಯ ಪತ್ರಕರ್ತರಾದ ಕೆ ಗಿರಿಪ್ರಕಾಶ್ ಅವರು ಬರೆದಿರುವ ಪುಸ್ತಕವನ್ನು ''ಸೊಗಸುಗಾರನ ಏಳುಬೀಳು: ವಿಜಯ ಮಲ್ಯ ವೃತ್ತಾಂತ'' ಪುಸ್ತಕವನ್ನು ಜೆಪಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಹಿರಿಯ ಲೇಖಕರಾದ ಕೆ ಸತ್ಯನಾರಾಯಣ ಅವರು, ಸಿದ್ದಲಿಂಗಯ್ಯನವರು ಮತ್ತು ಮೂಲ ಲೇಖಕರಾದ ಕೆ ಗಿರಿಪ್ರಕಾಶ್ ಅವರು ಈ ಸಮಾರಂಭದ ಅತಿಥಿಗಳು. ವಂಶಿ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ. ಈ ಸಮಾರಂಭ ಶಿವಾನಂದ ಸರ್ಕಲ್ ಹತ್ತಿರವಿರುವ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ. ದಯಮಾಡಿ ಈ ಸಮಾರಂಭಕ್ಕೆ ಬರಬೇಕಾಗಿ ವಿನಂತಿ ಎಂದು ಜೆಪಿ ಪ್ರೀತಿಯಿಂದ ಆಹ್ವಾನಿಸಿದ್ದಾರೆ.
ಇನ್ನು ಸೊಗಸುಗಾರ, ಕಿಂಗ್ ಆಫ್ ಗುಡ್ ಟೈಮ್ಸ್ ವಿಜಯ್ ಮಲ್ಯ ಅವರ ಬಗ್ಗೆ ಹೇಳುವ ಅವಶ್ಯಕತೆಯೇ ಇಲ್ಲ. ಸಾಕಷ್ಟು ಏಳು ಕಂಡಿರುವ 59 ವರ್ಷದ, ಕೊಲ್ಕತಾದಲ್ಲಿ ಹುಟ್ಟಿದರೂ ಬಂಟ್ವಾಳದವರಾದ ಡಾ. ವಿಜಯ್ ಅವರು ಇತ್ತೀಚಿನ ವರ್ಷಗಳಲ್ಲಿ ಸಾಲದ ಸುಳಿಯಲ್ಲಿ ಸಿಲುಕಿದ್ದು ಸಾಕಷ್ಟು ಬೀಳುಗಳನ್ನೂ ಕಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಕ್ರಿಕೆಟ್ ತಂಡದ ಒಡೆಯರೂ ಆಗಿರುವ ಮಲ್ಯ ಸಾಹೇಬರ ಬಗ್ಗೆ ಗಿರಿಪ್ರಕಾಶ್ ಅವರು ಏನು ಬರೆದಿದ್ದಾರೆ, ಅದನ್ನು ಜೆಪಿ ಹೇಗೆ ಅನುವಾದಿಸಿದ್ದಾರೆ ಎಂಬ ತಿಳಿಯುವ ಕುತೂಹಲವಿದ್ದರೆ ಭಾನುವಾರ, ಬೆಳಿಗ್ಗೆ 10 ಗಂಟೆಗೆ ಚಿತ್ರಕಲಾ ಪರಿಷತ್ತಿಗೆ ಖಂಡಿತ ಬನ್ನಿ.