ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬೆದರಿಕೆ ಕರೆ
ಬೆಂಗಳೂರು, ಸೆ. 05: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಿಗೆ ಬೆದರಿಕೆ ಕರೆ ಬಂದಿರುವ ಹಿನ್ನಲೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಆದರೆ, ಇದೊಂದು ಹುಸಿ ಬೆದರಿಕೆ ಕರೆ ಎಂದು ಘೋಷಿಸಲಾಗಿದೆ.
ಬೆಂಗಳೂರು, ನವದೆಹಲಿ ಸೇರಿದಂತೆ ಮೂರು ವಿಮಾನ ನಿಲ್ದಾಣದಲ್ಲಿರುವ ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು.ನಂತರ ವಿಮಾನ ನಿಲ್ದಾಣಗಳಲ್ಲಿ ತೀವ್ರ ತಪಾಸಣೆ ನಡೆಸಲಾಯಿತು. ನಂತರ ಬಾಂಬ್ ಬೆದರಿಕೆ ಕರೆ ಹುಸಿ ಎಂದು ತಿಳಿದು ಬಂದಿದೆ.
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಶುಕ್ರವಾರ ಮಧ್ಯರಾತ್ರಿ ಕರೆ ಮಾಡಿದ ದುರ್ಷರ್ವಿುಗಳು ಏರ್ ಅರೇಬಿಯಾ ವಿಮಾನದಲ್ಲಿ ಬಾಂಬ್ ಇರುವುದಾಗಿ ಹೇಳಿದ್ದರು. ಈ ವಿಮಾನದಲ್ಲಿ ಸುಮಾರು 350 ಜನರು ಹಜ್ ಯಾತ್ರೆಗೆ ತೆರಳುತ್ತಿದ್ದರು. ಬಾಂಬ್ ಬೆದರಿಕೆ ಬಂದ ನಂತರ ಸಿಐಎಸ್ಎಫ್ ಸಿಬ್ಬಂದಿ ವಿಮಾನ ಮತ್ತು ವಿಮಾನ ನಿಲ್ದಾಣದ ತಪಾಸಣೆ ನಡೆಸಿದರು. ಬೆದರಿಕೆ ಕರೆ ಹುಸಿ ಎಂದು ದೃಢಪಟ್ಟ ಮೇಲೆ ಶನಿವಾರ ಬೆಳಗ್ಗೆ 5.30 ಕ್ಕೆ ವಿಮಾನವು ಪ್ರಯಾಣ ಬೆಳೆಸಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರಿ ತಪಾಸಣೆ ನಡೆಸಿ ಬೆದರಿಕೆ ಕರೆಯ ಸತ್ಯಾಸತ್ಯತೆ ಕಂಡುಕೊಳ್ಳಲಾಗಿದೆ. ದೆಹಲಿಯ ಯಾವುದೇ ವಿಮಾನ ನಿಲ್ದಾಣದಲ್ಲಿ ಸ್ಫೋಟಕಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಕರೆ ಎಂದು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.