ಬೆಂಗಳೂರು ಪೊಲೀಸರ ಬಲೆಗೆ ನಾಗ, ಗಾಂಧಿ ಮತ್ತು ಶಾಸ್ತ್ರಿ
ಕೋಟಿಗಟ್ಟಲೆ ಹಳೆಯ ನಿಷೇಧಿತ ನೋಟುಗಳನ್ನು ಮನೆಯಲ್ಲಿ ಪೇರಿಸಿಟ್ಟಿದ್ದ ನಾಗರಾಜ್ ಕಳೆದ 27 ದಿನಗಳಿಂದ ಪೊಲೀಸರ ಹದ್ದಿನಕಣ್ಣಿಂದ ತಪ್ಪಿಸಿಕೊಂಡು ಊರೂರು ಸುತ್ತುತ್ತಿದ್ದ.
ಬೆಂಗಳೂರು, ಮೇ 11 : ಬೆಂಗಳೂರು ಪೊಲೀಸರಿಗೆ ಹಲವಾರು ದಿನಗಳಿಂದ ಚಳ್ಳೆಹಣ್ಣು ತಿನ್ನಿಸುತ್ತಿದ್ದ ವಿ ನಾಗರಾಜ್ ಅಲಿಯಾಸ್ ಬಾಂಬ್ ನಾಗ ಮತ್ತು ಇಬ್ಬರು ಮಕ್ಕಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದರೆ ಹತ್ತೇ ನಿಮಿಷದಲ್ಲಿ ಶರಣಾಗುವೆ ಎಂದು ಹೇಳುತ್ತಿದ್ದ ನಾಗರಾಜ್ ನನ್ನು ಎಸಿಪಿ ರವಿಕುಮಾರ್ ಅವರ ನೇತೃತ್ವದ ತಂಡ ತಮಿಳುನಾಡಿನ ವೆಲ್ಲೂರಿನಲ್ಲಿ ಬಂಧಿಸಿಲಾಗಿದೆ. ಜೊತೆಗೆ ಮಕ್ಕಳಾದ ಗಾಂಧಿ ಮತ್ತು ಶಾಸ್ತ್ರಿಯರನ್ನೂ ಬಂಧಿಸಲಾಗಿದೆ. [ಪರಮೇಶ್ವರ್ ಹೇಳಿದ್ರೆ 10 ನಿಮಿಷದಲ್ಲಿ ಶರಣಾಗುವೆ]
ಕೋಟಿಗಟ್ಟಲೆ ಹಳೆಯ ನಿಷೇಧಿತ ನೋಟುಗಳನ್ನು ಮನೆಯಲ್ಲಿ ಪೇರಿಸಿಟ್ಟಿದ್ದ ನಾಗರಾಜ್ ಕಳೆದ 27 ದಿನಗಳಿಂದ ಪೊಲೀಸರ ಹದ್ದಿನಕಣ್ಣಿಂದ ತಪ್ಪಿಸಿಕೊಂಡು ಊರೂರು ಸುತ್ತುತ್ತಿದ್ದ. ಏಪ್ರಿಲ್ 14ರಂದು ಶ್ರೀರಾಂಪುರದಲ್ಲಿರುವ ನಾಗರಾಜ್ ಮನೆಯ ಮೇಲೆ ದಾಳಿ ಮಾಡಲಾಗಿತ್ತು. ಆತನ ಮನೆಯಲ್ಲಿ ಕಂಡಲ್ಲೆಲ್ಲ ಹಣ ಸಿಕ್ಕಿತ್ತು. ಭಗವದ್ಗೀತೆಯಲ್ಲೂ ಹಣ ಬಚ್ಚಿಟ್ಟಿದ್ದ. [ಸಿದ್ದರಾಮಯ್ಯ ಪಿಎ, ದಿನೇಶ್ ಗುಂಡೂರಾವ್ ವಿರುದ್ಧ ಬಾಂಬ್ ನಾಗ ಆರೋಪ]
ಪೊಲೀಸರು ಮನೆ ಬಾಗಿಲು ಬಡಿಯುತ್ತಿದ್ದಂತೆ ಹಿಂದಿನ ಬಾಗಿಲಿನಿಂದ ನಾಗರಾಜ್ ಪರಾರಿಯಾಗಿದ್ದ. ನಾಗ ಎಲ್ಲಿ ಎಂದು ಆತನ ಹೆಂಡತಿಯನ್ನು ಕೇಳಿದಾಗ, ನನ್ನನ್ನೇನು ಕೇಳ್ತೀರಿ, ಆತನನ್ನು ಹುಡುಕುವುದು ನಿಮ್ಮ ಕೆಲಸ ಎಂದು ದಾರ್ಷ್ಟ್ಯದಿಂದ ಉತ್ತರ ನೀಡಿದ್ದಳು. ಅಂತೂ ನಾಗ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನಿಂದ 280 ಕಿ.ಮೀ. ದೂರದಲ್ಲಿರುವ ಆರ್ಕಾಟ್ ಎಂಬಲ್ಲಿ ತೋಟದ ಮನೆಯಲ್ಲಿ ಆತ ಅಡಗಿಕೊಂಡಿದ್ದ.
ಎರಡೆರಡು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದ ನಾಗರಾಜ್, ಪೊಲೀಸ್ ಇಲಾಖೆ ಭಾರೀ ಭ್ರಷ್ಟಾಚಾರ ನಡೆಸುತ್ತಿದ್ದು, ಎಲ್ಲರ ಹೆಸರುಗಳನ್ನು ಬಯಲಿಗೆಳೆಯುವುದಾಗಿ ಬೆದರಿಕೆ ಒಡ್ಡಿದ್ದ. ಸಿಬಿಐ ತನಿಖೆ ನಡೆದರೆ ಹಲವಾರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಬಟ್ಟೆಬಿಚ್ಚಿ ನಿಲ್ಲಬೇಕಾಗುತ್ತದೆ ಎಂದು ವಿಡಿಯೋದಲ್ಲಿ ಹೇಳಿದ್ದ.
ಆತ ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ ಪಿಎ ಅವರನ್ನೂ ವಿಡಿಯೋದಲ್ಲಿ ದೂರಿದ್ದ. ಸಂಗ್ರಾಮ್ ಸಿಂಗ್, ನಾಗರಾಜು ಮುಂತಾದವರ ಸಂಚಿಗೆ ನಾನು ಬಲಿಯಾಗಿದ್ದೇನೆ, ನಾನು ಯಾವ ತಪ್ಪನ್ನೂ ಮಾಡಿಲ್ಲ ಎಂದು ಆತ ಹೇಳಿದ್ದ. ಜಾಮೀನಿಗಾಗಿ ಆತ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.