ಬೆಂಗಳೂರು ಟ್ರಾಫಿಕ್ ಸಮಸ್ಯೆಯ ಮೂಲ ಯಾರು ?
ಬೆಂಗಳೂರು, ಜುಲೈ 26 : ಬಿಎಂಟಿಸಿ ಬಸ್ ಗಳೇ ಬೆಂಗಳೂರು ಟ್ರಾಫಿಕ್ ಸಮಸ್ಯೆಯ ಮೂಲ ಎಂಬ ವಾದ ಸುಳ್ಳಾಗಿದೆ. ಎರಡು ದಿನದಿಂದ ಬಿಎಂಟಿಸಿ ಬಸ್ ಗಳು ರಸ್ತೆಗೆ ಇಳಿದಿಲ್ಲ. ಆದರೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.
ಹಾಗಾದರೆ ಬೆಂಗಳೂರು ನಿಜಕ್ಕೂ ಟ್ರಾಫಿಕ್ ಅರಣ್ಯವಾಗಲು ಕಾರಣಗಳು ಏನು? ಎಂಬುದನ್ನು ಪತ್ತೆ ಮಾಡಬೇಕಾಗುತ್ತದೆ. ಬಿಟಿಎಂ ಲೇಔಟ್, ಗೂಡ್ಸ್ ಶೆಡ್ ರಸ್ತೆ, ಸಿಲ್ಕ್ ಬೋರ್ಡ್, ಮಾರತ್ ಹಳ್ಳಿ, ರಿಚ್ ಮಂಡ್ ಸರ್ಕಲ್, ಶಾಂತಿನಗರ, ವಿಲ್ಸನ್ ಗಾರ್ಡನ್, ಕೆ ಆರ್ ಪುರ ದ ಬಳಿ ಟ್ರಾಫಿಕ್ ಸಮಸ್ಯೆ ಹೇಳತೀರದಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಸೋಮವಾರ ಸಂಜೆ ಎರಡು ಕಿಮೀ ಗೂ ಅಧಿಕ ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು.[ಬೆಂಗಳೂರಿಗರ ದಿನಚರಿ ಬದಲಿಸಿದ ಬಿಎಂಟಿಸಿ ಮುಷ್ಕರ]
ಮೆಟ್ರೋ ಸಂಚಾರವಿರುವ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಮೆಟ್ರೋ ಸೌಲಭ್ಯ ಸಿಗದ ಪ್ರದೇಶಗಳ ಪರಿಸ್ಥಿತಿ ತುಂಬಾ ಕಠಿಣವಾಗಿದೆ. ಈ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣಗಳು ಏನು? ಇಲ್ಲಿದೆ ಉತ್ತರ...
ಹೆಚ್ಚಿದ ಆಟೋಗಳು
ಬಿಎಂಟಿಸಿ ಮುಷ್ಕರದ ಲಾಭವನ್ನು ನೇರವಾಗಿ ಪಡೆದವರು ಆಟೋದವರು. ಜನರು ಅನಿವಾರ್ಯವಾಗಿ ಆಟೋ ಬಳಕೆ ಮಾಡಬೇಕಾಗಿ ಬಂದಿದ್ದರಿಂದ ಎಲ್ಲ ಆಟೋಗಳು ರಸ್ತೆಗೆ ಇಳಿದಿದ್ದವು.
ಧಾರಾಕಾರ ಮಳೆ
ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಸೋಮವಾರ ಸಂಜೆಯಿಂದ ಆರಂಭವಾದ ಮಳೆ ತಡರಾತ್ರಿಯರೆಗೂ ನಿರಂತರವಾಗಿ ಸುರಿದಿದ್ದು ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ.
ಸ್ವಂತ ವಾಹನಗಳು
ವಾರಾಂತ್ಯಕ್ಕೆ ಹೊರಗೆ ಬರುತ್ತಿದ್ದ ನಾಲ್ಕು ಚಕ್ರದ ಸ್ವಂತ ವಾಹನಗಳನ್ನು ನಾಗರಿಕರು ಚಲಾಯಿಸಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ದ್ವಿಚಕ್ರ ವಾಹನ ಸವಾರಿ ಎಚ್ಚರ
ಮೆಜೆಸ್ಟಿಕ್, ಮಾಗಡಿ ರಸ್ತೆ, ನಾಯಂಡಹಳ್ಳಿ, ಕೋರಮಂಗಲ, ಬನಶಂಕರಿ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯಿತು. ಯಲಹಂಕ, ಮಲ್ಲೇಶ್ವರ, ಯಶವಂತಪುರ ಭಾಗಗಳಲ್ಲಿ ಗುಡುಗು ಸಹಿತ ವರ್ಷಾಧಾರೆಯಾಗಿದೆ. ಬೆಳಗ್ಗೆ ಥಂಡಿ ವಾತಾವರಣದಲ್ಲಿ ರಸ್ತೆ ಗುಂಡಿಗಳನ್ನು ತಪ್ಪಿಸುತ್ತ ದ್ವಿಚಕ್ರ ವಾಹನದಲ್ಲಿ ತೆರಳುವುದು ದುಸ್ಸಾಹಸವೇ ಆಗಿ ಪರಣಮಿಸಿತು.