ಕನ್ನಡಿಗರ ಹೋರಾಟಕ್ಕೆ ಜಯ: ನಮ್ಮ ಮೆಟ್ರೋ ಹಿಂದಿ ಬೋರ್ಡ್ ಗೆ ಕತ್ತರಿ!
ಬೆಂಗಳೂರು, ಜುಲೈ 26: ಹಲವು ದಿನದಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ನಮ್ಮ ಮೆಟ್ರೋದಲ್ಲಿ ಹಿಂದಿ ಬಳಸುವ ವಿಷಯಕ್ಕೆ ಸಂಬಂಧಿಸಿದಂತೆ, ಕನ್ನಡಿಗರ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ.
ನಮ್ಮ ಮೆಟ್ರೋ ಸೈನ್ ಬೋರ್ಡ್ ಗಳಲ್ಲಿ ಇನ್ಮುಂದೆ ಹಿಂದಿ ಬಳಕೆ ಮಾಡುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಶನ್ ಲಿಮಿಟೆಡ್(ಬಿಎಂಆರ್ ಸಿಎಲ್)ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಘೋಷಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸೂಚನೆಯ ಮೇಲೆ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
'ನಮ್ಮ ಮೆಟ್ರೋ'ದಲ್ಲಿ ಹಿಂದಿ ಬಳಕೆ ನಿರ್ಧಾರ ಸರ್ಕಾರದ್ದಲ್ಲವೇ ಅಲ್ಲ!
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅವರು ಜುಲೈ 25 ರಂದು ಬಿಎಂಆರ್ ಸಿಎಲ್ ಕಚೇರಿಗೆ ಭೇಟಿ ನೀಡಿ, ಖರೋಲ ಅವರೊಂದಿಗೆ ಮಾತುಕತೆ ನಡೆಸಿದ ನಂತರ ತಮ್ಮ ನಿರ್ಧಾರವನ್ನು ಖರೋಲ ಘೋಷಿಸಿದ್ದಾರೆ. ಆದರೆ ಈ ಘೋಷಣೆ ಯಾವುದೇ ಲಿಖಿತ ರೂಪದಲ್ಲಿಲ್ಲ ಎಂಬುದು ಗಮನಿಸಬೇಕಾದ ವಿಷಯ! ಈ ಘೋಷಣೆ ಕೇವಲ ಮೌಖಿಕವಾಗಿರುವುದರಿಂದ ಇದನ್ನು ನಂಬುವುದು ಹೇಗೆ? ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಉಪಾಯವೇ ಇದು ಎಂಬ ಅನುಮಾನವೂ ಕಾಡುತ್ತಿದೆ. ಏನೇ ಆದರೂ ಬಿಎಂಆರ್ ಸಿಎಲ್ ನ ಈ ನಿರ್ಧಾರ ಕನ್ನಡಿಗರ ಗೆಲುವು ಎಂಬುದರಲ್ಲಿ ಎರಡು ಮಾತಿಲ್ಲ.
ಪರ-ವಿರೋಧ ಚರ್ಚೆ
ಬೆಂಗಳೂರಿನ ಹೆಮ್ಮೆಯ ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತ ಸಂಪೂರ್ಣ ಮುಕ್ತಾಯವಾಗಿ, ಸಾರ್ವಜನಿಕ ಅನುಕೂಲಕ್ಕೆ ತೆರೆದುಕೊಳ್ಳುತ್ತಿದ್ದಂತೆಯೇ ಹಿಂದಿ ಹೇರಿಕೆಯ ಸದ್ದು ಆರಂಭವಾಗಿತ್ತು. ಬೆಂಗಳೂರಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸೈನ್ ಬೋರ್ಡ್ ಗಳು ಇದ್ದರೆ ಸಾಲದೆ? ಹಿಂದಿಯಲ್ಲೂ ಬೇಕೆ ಎಂಬ ಪ್ರಶ್ನೆ ಹುಟ್ಟಿಕೊಂಡು ರಾಷ್ಟ್ರೀಯ ಮಾಧ್ಯಮಗಳಲ್ಲೂ ಪರ-ವಿರೋಧದ ಚರ್ಚೆ ನಡೆಯಿತು.
ನಮ್ಮ ಮೆಟ್ರೋ ಹಿಂದಿ ಬೋರ್ಡ್ ಗೆ ಮತ್ತೆ ಬಿತ್ತು ಮಸಿ!
ಕನ್ನಡಿಗರ ಆಕ್ರೋಶಕ್ಕೆ ದೊರೆತ ಫಲ
ಆನ್ ಲೈನ್ ನಲ್ಲೂ ಈ ಕುರಿತು ಅಭಿಯಾನಗಳು ಆರಂಭವಾಗಿದ್ದವು. ನಂತರ ಕನ್ನಡ ಪರ ಹೋರಾಟಗಾರರು ವಿವಿಧ ಮೆಟ್ರೋ ಸ್ಟೇಷನ್ ಗಳಲ್ಲಿನ ಹಿಂದಿ ಬೋರ್ಡ್ ಗಳಿಗೆ ಮಸಿಬಳಿಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಕನ್ನಡಿಗರ ಆಕ್ರೋಶದಿಂದ ಎಚ್ಚೆತ್ತುಕೊಂಡ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬಿಎಂಆರ್ ಸಿಎಲ್ ಅನ್ನು ತರಾಟೆಗೆ ತೆಗೆದುಕೊಂಡ ಪರಿಣಾಮ ಈ ನಿರ್ಧಾರ ಕೈಗೊಳ್ಳಾಗಿದೆ.
ಕನ್ನಡಿಗರಿಗೆ ಆದ್ಯತೆ ನೀಡಿ
ನಮ್ಮ ಮೆಟ್ರೋದಲ್ಲಿ ಹಿಂದಿ ಬಳಸುವ ಕುರಿತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ, ಬಿಎಂಆರ್ ಸಿಎಲ್ ನಲ್ಲಿ ಕೆಲಸ ಮಾಡುವ ಬಹುತೇಕ ಜನಕ್ಕೆ ಕನ್ನಡ ಬರುವುದಿಲ್ಲ. ಬಿಎಂಆರ್ ಸಿಎಲ್ ನಲ್ಲಿ ಕನ್ನಡ ಮಾತನಾಡುವವರನ್ನೇ ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂದು ಸಿದ್ದರಾಮಯ್ಯ ಮನವಿ ಸಹ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಇದು ಕೇಂದ್ರ ಸರ್ಕಾರದ ಯೋಜನೆಯಲ್ಲ, ರಾಜ್ಯ ಸರ್ಕಾರದ ಯೋಜನೆ. ಹೀಗಿರುವಾಗ ಹಿಂದಿ ಬಳಕೆಯ ಅಗತ್ಯವೇನಿದೆ ಎಂದು ಸಹ ಸಿದ್ದರಾಮಯ್ಯ ಖಡಕ್ ಆಗಿ ಪ್ರಶ್ನಿಸಿದ್ದರು.
ಇದು ಬಿಎಂಆರ್ ಸಿಎಲ್ ನಿರ್ಧಾರ!
ನಮ್ಮ ಮೆಟ್ರೋದಲ್ಲಿ ಹಿಂದಿ ಬಳಸುವುದು ಕರ್ನಾಟಕ ಸರ್ಕಾರದ ನಿರ್ಧಾರವೇ ಎಂದು ಆರ್ ಟಿಐ ಮೂಲಕ ಬಂದಿದ್ದ ಅರ್ಜಿಯೊಂದಕ್ಕೆ ಉತ್ತರಿಸಿದ್ದ ಬಿಎಂಆರ್ ಸಿಎಲ್, 'ಇದು ಕರ್ನಾಟಕ ಸರ್ಕಾರದ ನಿರ್ಧಾರವಲ್ಲ. ಬದಲಾಗಿ ಬಿಎಂಆರ್ ಸಿಎಲ್ ತೆಗೆದುಕೊಂಡ ನಿರ್ಧಾರ' ಎಂದಿದ್ದನ್ನೂ ಇಲ್ಲಿ ಸ್ಮರಿಸಬಹುದು.