ಯಡಿಯೂರಪ್ಪ ಸಂಧಾನ ಸಭೆ ತಿರಸ್ಕರಿಸಿದ ಈಶ್ವರಪ್ಪ
ಬೆಂಗಳೂರು, ಜನವರಿ 20: ಗುರುವಾರ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆದಿದ್ದ ಸಂಧಾನ ಸಭೆಗೆ ಈಶ್ವರಪ್ಪ ಬಣದ ಅತೃಪ್ತರು ಗೈರು ಹಾಜರಾಗಿದ್ದಾರೆ. ಈ ಮೂಲಕ ಪಕ್ಷದಲ್ಲಿ 'ರಾಯಣ್ಣ ಬ್ರಿಗೇಡ್' ಗೊಂದಲ ಮತ್ತಷ್ಟು ತಾರಕಕ್ಕೇರಿದೆ.
24 ಜನ ಶಾಸಕರು, ವಿಧಾನಪರಿಷತ್ತು ಸದಸ್ಯರು ಮತ್ತು ಮಾಜಿ ಶಾಸಕರುಗಳು ಯಡಿಯೂರಪ್ಪ ಕಾರ್ಯವೈಖರಿಗೆ ಅತೃಪ್ತಿ ವ್ಯಕ್ತಪಡಿಸಿ ಪಕ್ಷದ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದರು. ಈ ಹಿನ್ನಲೆಯಲ್ಲಿ ಗುರುವಾರ ಮಧ್ಯಾಹ್ನ 3.30ಕ್ಕೆ ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಸಂಧಾನ ಸಭೆ ನಿಗದಿಪಡಿಸಲಾಗಿತ್ತು. ಆದರೆ ಸಭೆಗೆ ಆಹ್ವಾನ ನೀಡಲಾಗಿದ್ದ ಈಶ್ವರಪ್ಪ ಬಣದ 12 ಜನರಲ್ಲಿ ಒಬ್ಬರೂ ಹಾಜರಾಗಲಿಲ್ಲ. ಕೊನೆಗೆ ಸಭೆಯನ್ನು 4 ಗಂಟೆಗೆ ಮುಂದೂಡಲಾಯಿತಾದರೂ ಆಗಲೂ ಅತೃಪ್ತರು ಹಾಜರಾಗದೆ ರಾಜ್ಯಾಧ್ಯಕ್ಷರ ಆಹ್ವಾನವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.[ಯಡಿಯೂರಪ್ಪ, ಈಶ್ವರಪ್ಪ ಮನಸ್ತಾಪಕ್ಕೆ ತುಪ್ಪ ಸುರಿದ ಆಯನೂರು]
ಮೂಲಗಳ ಪ್ರಕಾರ 24 ಜನರಲ್ಲಿ ಕೇವಲ 12 ಜನರನ್ನು ಸಭೆಗೆ ಆಹ್ವಾನಿಸಿರುವುದು ಮತ್ತು ಸೊಗಡು ಶಿವಣ್ಣ ಮುಂತಾದವರಿಗೆ ನೀಡಿರುವ ನೊಟೀಸ್ ವಾಪಸ್ ಪಡೆಯದೇ ಇರುವುದನ್ನು ಭಿನ್ನರು ಆಕ್ಷೇಪಿಸಿದ್ದಾರೆ. "ಸಭೆಗೆ ಯಾಕೆ ಹಾಜಾರಾಗಿಲ್ಲ ಎಂಬುದನ್ನು ರಾಜ್ಯಾಧ್ಯಕ್ಷರಿಗೆ ಹೇಳಿದ್ದೇನೆ. ಮಾಧ್ಯಮಗಳಿಗೇ ಹೇಳಲ್ಲ," ಎಂದು ಅತೃಪ್ತರ ನಾಯಕ ಮತ್ತು ವಿಧಾನಪರಿಷತ್ ಸದಸ್ಯ ಭಾನು ಪ್ರಕಾಶ್ 'ಒನ್ ಇಂಡಿಯಾ'ಗೆ ಪ್ರತಿಕ್ರಿಯೆ ನೀಡಿದ್ದಾರೆ.
'ರಾಯಣ್ಣ ಬ್ರಿಗೇಡ್' ಸಂಬಂಧ ಆರಂಭವಾದ ಈಶ್ವರಪ್ಪ ಮತ್ತು ಯಡಿಯೂರಪ್ಪ ಗಲಾಟೆ ಈಗ ಅತೃಪ್ತರ ಸೇರ್ಪಡೆಯಿಂದ ಮತ್ತಷ್ಟು ಹೆಚ್ಚಾಗಿದೆ. ಪರಿಸ್ಥಿತಿ ದಿನೇ ದಿನೇ ಬಿಗುಡಾಯಿಸುತ್ತಿದ್ದು, ವರಿಷ್ಠರ ಗಮನಕ್ಕೆ ತಂದು ಅತೃಪ್ತರ ಮೇಲೆ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ.