'ಬಿಜೆಪಿ ಅಧಿಕಾರಕ್ಕೆ ಬಂದರೆ 24 ಗಂಟೇಲಿ ಟಿಪ್ಪು ಜಯಂತಿ ರದ್ದು'
ಟಿಪ್ಪು ಹಿಂದೆ ಬಿದ್ದವರ ಹಣೆಬರಹ ಕೆಟ್ಟಿದೆ. ಇದೇ ಸ್ಥಿತಿಯನ್ನು ಸಿದ್ದರಾಮಯ್ಯ ಕೂಡ ಎದುರಿಸಲಿದ್ದಾರೆ. ಟಿಪ್ಪು ಜಯಂತಿ ಅಚರಣೆ ವಿಚಾರದಲ್ಲಿ ಓಲೈಕೆ ರಾಜಕಾರಣದ ತಂತ್ರವಿದೆ: ಆರ್.ಅಶೋಕ್
ಬೆಂಗಳೂರು, ನವೆಂಬರ್ 8: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಇಪ್ಪತ್ನಾಲ್ಕು ಗಂಟೆಯೊಳಗೆ ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಹೇಳಿದರು.
ಇತ್ತೀಚೆಗೆ ನಡೆದ ಆರ್ ಎಸ್ ಎಸ್ ಹಾಗೂ ಬಿಜೆಪಿ ಸದಸ್ಯರ ಹತ್ಯೆಯನ್ನು ಖಂಡಿಸಿ, ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ವೇಳೆ ಅವರು ಮಾತನಾಡಿದರು. ಇಂಥದ್ದಕ್ಕೆ ಕಾಂಗ್ರೆಸ್ ಸರಕಾರವೇ ಅವಕಾಶ ಮಾಡಿಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. [ಟಿಪ್ಪು ಪರ ಘೋಷಣೆ ಕೂಗಿದವರು ಈಗ ವಿರೋಧಿಗಳಾ?: ಪರಂ]
ಕೇಂದ್ರ ಗೃಹಸಚಿವ ರಾಜ್ ನಾಥ್ ಸಿಂಗ್ ಅವರನ್ನು ಬುಧವಾರ ಭೇಟಿ ಆಗುತ್ತೇನೆ. ಅಗ ಕರ್ನಾಟಕದ ಸ್ಥಿತಿ ಹಾಗೂ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತವಾಗುತ್ತಿರುವುದನ್ನು ಗಮನಕ್ಕೆ ತರುತ್ತೇನೆ ಎಂದರು. ನವೆಂಬರ್ 10ರಂದು ಟಿಪ್ಪು ಜಯಂತಿ ಅಚರಣೆಗೆ ತೀರ್ಮಾನ ಮಾಡಿರುವುದರಿಂದ ಅಂದು ರಾಜ್ಯ ಬಂದ್ ಗೆ ಕರೆ ನೀಡುವ ಬಗ್ಗೆ ಬಿಜೆಪಿ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಇದೇ ವೇಳೆ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಮಾತನಾಡಿ, ಟಿಪ್ಪು ಹಿಂದೆ ಬಿದ್ದವರ ಹಣೆಬರಹ ಕೆಟ್ಟಿದೆ. ಇದೇ ಸ್ಥಿತಿಯನ್ನು ಸಿದ್ದರಾಮಯ್ಯ ಕೂಡ ಎದುರಿಸಲಿದ್ದಾರೆ. ಟಿಪ್ಪು ಜಯಂತಿ ಅಚರಣೆ ವಿಚಾರದಲ್ಲಿ ಓಲೈಕೆ ರಾಜಕಾರಣದ ತಂತ್ರವಿದೆ ಎಂದು ಅವರು ಆರೋಪ ಮಾಡಿದರು.[ಟಿಪ್ಪು ಜಯಂತಿ ವಿರೋಧಿಸಿ ಮೆರವಣಿಗೆ: ಕಾರ್ಯಕರ್ತರ ಬಂಧನ]
ಸ್ಥಳದಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಪಕ್ಷದ ಕಾರ್ಯಕರ್ತರು ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಿಸಲು ತಿರ್ಮಾನಿಸಿರುವ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜಕೀಯ ಕಾರಣಗಳಿಗಾಗಿ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದೆ ಎಂದು ಆರೋಪಿಸಲಾಯಿತು.