ರೆಡ್ಡಿ ಪುತ್ರಿ ಮದುವೆಗೆ ಹೋಗಬೇಡಿ: ಹೈಕಮಾಂಡ್ ಸೂಚನೆ
ಬೆಂಗಳೂರು, ನವೆಂಬರ್, 14: 500 ಕೋಟಿ ರೂ. ವೆಚ್ಚದಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗೆ ಹಾಜರಾಗದಂತೆ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ.
ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ ಕಪ್ಪುಹಣದ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ಇಂತಹ ಸಮಯದಲ್ಲಿ ಕಳಂಕ ಹೊತ್ತುಕೊಂಡಿರುವ ಬಿಜೆಪಿ ನಾಯಕ ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗೆ ಹಾಜರಾಗುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಈ ಸೂಚನೆ ನೀಡಿದೆ ಎಂದು ಹೇಳಲಾಗಿದೆ.
ಇನ್ನು ಜನಾರ್ದನ ರೆಡ್ಡಿ ಮಗಳ ಮದುವೆಗೆ ಕಪ್ಪು ಹಣ ಬಳಕೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಸಹ ಆರೋಪಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಮದುವೆಗೆ ಹಾಜರಾಗದಿರಲು ನಿರ್ಧರಿಸಿದ್ದಾರೆ.[ಗಾಲಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ವಿವಾಹಕ್ಕೆ ಬನ್ನಿ, ಬನ್ನಿ!]
ಮಂಗಳವಾರ ಮತ್ತು ಬುಧವಾರ ಅರಮನೆ ಮೈದಾನದಲ್ಲಿ ರೆಡ್ಡಿ ಪುತ್ರಿ ಬ್ರಹ್ಮಿಣಿ ಮದುವೆ ನಡೆಯುತ್ತಿದ್ದು, ಮದುವೆಗೆ ಸುಮಾರು 500ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಸುದ್ದಿ ಹರಿದಾಡುತ್ತಿದೆ.
ಕೇವಲ ಲಗ್ನ ಪತ್ರಿಕೆಯೊಂದಕ್ಕೆ 2.50ಲಕ್ಷ ವೆಚ್ಚ ಮಾಡಲಾಗಿದೆ ಮಾಧ್ಯಮಗಳು ವರದಿ ಮಾಡಿದ್ದವು. ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ಬಿಜೆಪಿ ನಾಯಕರು ಮದುವೆಗೆ ಗೈರುಹಾಜರಾಗುವ ಸಾಧ್ಯತೆ ಇದೆ.
ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿ ಮದುವೆ ಸಮಾರಂಭದ ಸಿದ್ಧತೆಗಾಗಿ ಬೆಂಗಳೂರಿನ ಅರಮನೆ ಮೈದಾನ ಕಳೆದ ಐದು ದಿನಗಳಿಂದ ರಾಜಕೋಟೆಯಂತೆ ಬದಲಾಗಿದೆ. ಶನಿವಾರ ರಾತ್ರಿಯೇ ರೆಡ್ಡಿ ಕುಟುಂಬ ಬೆಂಗಳೂರಿಗೆ ಆಗಮಿಸಿದ್ದು, ಭಾನುವಾರದಿಂದ ಅದ್ದೂರಿ ಮದುವೆ ಸಮಾರಂಭವನ್ನು ಏರ್ಪಡಿಸಿದ್ದಾರೆ.
ಗಣ್ಯರು ಮದುವೆಗೆ ಹಾಜರಾಗುವ ಹಿನ್ನೆಲೆಯಲ್ಲಿ ಅರಮನೆ ಮೈದಾನದ ಸುತ್ತ ಬಿಗಿ ಭದ್ರತೆ ಒದಗಿಸಲಾಗಿದೆ. ಭಾನುವಾರ ನಡೆದ ಮ್ಯುಸಿಕಲ್ ನೈಟ್ ನಲ್ಲಿ ರೆಡ್ಡಿ ಕುಟುಂಬ ಸದಸ್ಯರು ಅಂತ್ಯಾಕ್ಷರಿ ಹಾಡಿ ನಲಿದಿದ್ದಾರೆ.
ಇನ್ನು ಭಾನುವಾರ ರಾತ್ರಿ ಏರ್ಪಡಿಸಿದ್ದ ಮ್ಯೂಸಿಕಲ್ ನೈಟ್ ನಲ್ಲಿ ನೂರಕ್ಕೂ ಹೆಚ್ಚು ನೃತ್ಯ ಕಲಾವಿದರು ವಿವಿಧ ಹಾಡುಗಳಿಗೆ ನೃತ್ಯ ಮಾಡಿ ಸಭಿಕರನ್ನು ರಂಜಿಸಿದ್ದಾರೆ. ಇನ್ನು ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಹಾಗು ಬ್ರಾಹ್ಮಿಣಿ ದಂಪತಿಗಳೂ ಸಹ ಹಾಡುಗಳಿಗೆ ಸ್ಟೆಪ್ ಹಾಕಿದ್ದಾರೆ.
4ದಿನ ನಡೆಯುವ ವಿವಾಹ ಮಹೋತ್ಸವದಲ್ಲಿ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ವಾಣಿಜ್ಯೋದ್ಯಮಿಗಳು, ಸಿನಿಮಾ ನಟರು, ಗಣ್ಯರು ವಿವಾಹ ಮಹೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.