ಹೈಗ್ರೌಂಡ್ಸ್ ನಲ್ಲಿ ಮಟ್ಟು ವಿರುದ್ಧ ಕೇಸ್ ದಾಖಲಿಸಿದ ಬಿಜೆಪಿ
"ಮೊದಲನೇ ದಿನದಿಂದಲೂ ಮಟ್ಟು ಅವರನ್ನು ಬಿಜೆಪಿ ಗುರಿಯಾಗಿಸಿದೆ. ಉಡುಪಿ ಚಲೋ ಚಳವಳಿಯಲ್ಲಿ ಮಟ್ಟು ಅವರು ಪ್ರಮುಖ ಪಾತ್ರ ವಹಿಸಿದಂದಿನಿಂದ ಅವರನ್ನು ಅನಗತ್ಯವಾಗಿ ಟೀಕಿಸುತ್ತಿದೆ. ಈ ಪ್ರಸ್ತುತ ವಿಷಯಕ್ಕೆ ಕಾಮೆಂಟ್ ಮಾಡುವ ಅಗತ್ಯವೇ ಇಲ್ಲ."
ಬೆಂಗಳೂರು, ನವೆಂಬರ್ 07 : "ಇಂದಿರಾ ಗಾಂಧಿಗೆ ಕೊನೆಗೆ ಏನಾಯ್ತು ಗೊತ್ತಲ್ಲ? ಅದೇ ನಿಮ್ಮ ಮೋದಿಯವರಿಗೂ ಆಗಬೇಕೆಂದು ನಿಮ್ಮ ಆಸೆಯೆ?" ಎಂದು ಫೇಸ್ ಬುಕ್ಕಿನಲ್ಲಿ ಬರೆದು ವಿವಾದದ ಕಿಡಿ ಹತ್ತಿಸಿದ್ದ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಅವರ ವಿರುದ್ಧ ಕರ್ನಾಟಕ ಬಿಜೆಪಿ ದೂರು ದಾಖಲಿಸಿದೆ.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಂತೆ ಈ ಬಗೆಯ ವಿವಾದಾತ್ಮಕ ಹೇಳಿಕೆ ನೀಡಿರುವ ದಿನೇಶ್ ಅಮಿನ್ ಮಟ್ಟು ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದೂ ಕರ್ನಾಟಕ ಬಿಜೆಪಿಯ ಐಟಿ ಘಟಕ ಸೋಮವಾರ ಆಗ್ರಹಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153, 504, 505 ಮತ್ತು 506ರ ಅಡಿಯಲ್ಲಿ, ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ಹಾಕಿರುವ ಕಾರಣ ಎಫ್ಐಆರ್ ದಾಖಲಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. [ಪಿಎಂ ಮೋದಿ ಬಗ್ಗೆ ದಿನೇಶ್ ಅಮಿನ್ ಮಟ್ಟು ಕಾಮೆಂಟ್ ಸರಿಯೆ?]
ಫೇಸ್ ಬುಕ್ಕಿನಲ್ಲಿ ತಾವು ನೀಡಿರುವ ಪ್ರತಿಕ್ರಿಯೆಯ ಆಯ್ದ ಭಾಗವನ್ನಷ್ಟೇ ಕತ್ತರಿಸಿ ಅದಕ್ಕೆ ಕಲ್ಪಿತ ವ್ಯಾಖ್ಯಾನಗಳನ್ನು ಸೇರಿಸಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹಿರಿಯ ಪತ್ರಕರ್ತರಾದ ದಿನೇಶ್ ಅಮಿನ್ ಮಟ್ಟು ಅವರು ಪ್ರತಿಸ್ಪಂದಿಸಿದ್ದಾರೆ.
ಮಟ್ಟು ಬೆನ್ನಿಗೆ ನಿಂತ ಕಾಂಗ್ರೆಸ್
ದಿನೇಶ್ ಅಮಿನ್ ಮಟ್ಟು ಅವರ ತಲೆದಂಡಕ್ಕೆ ಕರ್ನಾಟಕ ಬಿಜೆಪಿ ಅಣಿಯಾಗಿ ನಿಂತಿದ್ದರೆ, ಕರ್ನಾಟಕ ಕಾಂಗ್ರೆಸ್ ಮಟ್ಟು ಬೆನ್ನಿಗೆ ನಿಂತಿದೆ. "ಮೊದಲನೇ ದಿನದಿಂದಲೂ ಮಟ್ಟು ಅವರನ್ನು ಬಿಜೆಪಿ ಗುರಿಯಾಗಿಸಿದೆ. ಉಡುಪಿ ಚಲೋ ಚಳವಳಿಯಲ್ಲಿ ಮಟ್ಟು ಅವರು ಪ್ರಮುಖ ಪಾತ್ರ ವಹಿಸಿದಂದಿನಿಂದ ಅವರನ್ನು ಅನಗತ್ಯವಾಗಿ ಟೀಕಿಸುತ್ತಿದೆ. ಈ ಪ್ರಸ್ತುತ ವಿಷಯಕ್ಕೆ ಕಾಮೆಂಟ್ ಮಾಡುವ ಅಗತ್ಯವೇ ಇಲ್ಲ" ಎಂದು ಕರ್ನಾಟಕ ಕಾಂಗ್ರೆಸ್ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.
"ಪಕ್ಷಕ್ಕೂ ಅವರ ಹೇಳಿಕೆಗೂ ಸಂಬಂಧವೇ ಇಲ್ಲ. ಅವರೊಬ್ಬ ಅಧಿಕಾರಿ ಅಷ್ಟೇ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಲ್ಲ. ಅವರು ಆಡಿದ ಮಾತುಗಳಲ್ಲಿ ತಪ್ಪಿರಬಹುದು, ಆದರೆ ಬೆದರಿಕೆ ಒಡ್ಡುವಂಥ ಇಚ್ಛೆ ಅವರಿಗಿರಲಿಕ್ಕಿಲ್ಲ" ಎಂದು ಬ್ರಿಜೇಶ್ ಕಾಳಪ್ಪ ಹೇಳಿಕೆ ನೀಡಿದ್ದಾರೆ.
"ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡುವುದೇ ತಪ್ಪು. ಏಕೆಂದರೆ, ಅಂದಿನ ಪರಿಸ್ಥಿತಿ ಮತ್ತು ಇಂದಿನ ಪರಿಸ್ಥಿತಿ ವಿಭಿನ್ನವಾಗಿವೆ. ಯಾವುದೋ ಸಂದರ್ಭದಲ್ಲಿ ಆ ಮಾತುಗಳು ಮಟ್ಟು ಅವರಿಂದ ಬಂದಿರಬಹುದು" ಎಂದು ದಿನೇಶ್ ಗುಂಡೂ ರಾವ್ ಅವರು, ಮಟ್ಟು ಹೇಳಿಕೆಯಿಂದ ಕಾಂಗ್ರೆಸ್ಸಿಗೆ ಮುಜುಗರವಾಗಿದೆಯೆ ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.