ಹತ್ತಿದ ಜಗಳ ಹರಿದಿಲ್ಲ, ಯಡ್ಡಿ-ಈಶು ಮುನಿಸು ಒಪ್ಪಿದಂತೆ ಆಯ್ತಲ್ಲ!
ರಾಜ್ಯದಲ್ಲಿ ಅಧಿಕಾರಲ್ಲಿರುವ ಕಾಂಗ್ರೆಸ್ ವೈಫಲ್ಯದ ಬಗ್ಗೆ ಕೈಪಿಡಿ ಬಿಡುಗಡೆ ಮಾಡಿದ ಬಿಜಿಪಿಯ ಕಾರ್ಯಕ್ರಮದಲ್ಲಿ ಕೆಎಸ್ ಈಶ್ವರಪ್ಪನವರೇ ಗೈರು ಹಾಜರಾಗಿದ್ದರು. ಇದು ಬಿಜೆಪಿ ಬಿಕ್ಕಟ್ಟಿನ ಮುಂದುವರಿದ ಭಾಗವೇ ಎಂಬ ಪ್ರಶ್ನೆ ಮೂಡಿಸಿದೆ
ಬೆಂಗಳೂರು, ಮೇ 12: ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಮಧ್ಯದ ಅಸಮಾಧಾನ ಬಗೆಹರಿದಿಲ್ಲ ಎಂಬುದು ಗುರುವಾರ ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ ಆಡಳಿತ ವೈಫಲ್ಯದ ಬಗ್ಗೆ ಬಿಜೆಪಿ ಆರೋಪಪಟ್ಟಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಈಶ್ವರಪ್ಪ ಗೈರಾಗಿದ್ದರು.
ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಯಡಿಯೂರಪ್ಪ ಯಾವುದೇ ಮಾತನಾಡಲಿಲ್ಲ. ಆದರೆ ಜಗದೀಶ್ ಶೆಟ್ಟರ್ ಲಘು ಧಾಟಿಯಲ್ಲಿ, ನಾಲ್ಕು ವರ್ಷದ ಹಿಂದೆ ಕೂಡ ಇದೇ ರೀತಿಯ ಕಿರು ಹೊತ್ತಿಗೆ ಬಿಡುಗಡೆ ಮಾಡಿದ್ದೇನೆ. ಆಗಲೂ ಈಶ್ವರಪ್ಪ ಇರಲಿಲ್ಲ. ಈಗಲೂ ಇಲ್ಲ ಎಂದಾಗ ವೇದಿಕೆಯಲ್ಲಿ ಇದ್ದವರು ಸಹ ನಕ್ಕರು.[ಕಾಂಗ್ರೆಸ್ ಹುಳುಕು ತೋರಿಸಲು ಹೋದ ಬಿಜೆಪಿ ಬಣ್ಣ ಬಯಲು]
"ನಾವೆಲ್ಲ ಒಂದಾಗಿದ್ದೇವೆ. ಮೇ 18ರಿಂದ ರಾಜ್ಯ ಪ್ರವಾಸ ಕೈಗೊಳ್ಳುತ್ತೇವೆ. ಇಂಥಿಂಥವರು ನನ್ನ ಜತೆ ಬರುತ್ತಾರೆ" ಎಂದು ಒಂದಷ್ಟು ನಾಯಕರು ಹೆಸರು ಹೇಳಿದ ಯಡಿಯೂರಪ್ಪ, ಅಪ್ಪಿತಪ್ಪಿಯೂ ಈಶ್ವರಪ್ಪ ಹೆಸರು ಪ್ರಸ್ತಾಪಿಸಲಿಲ್ಲ. ಆ ನಂತರ ಮಾಧ್ಯಮದವರ ಜತೆ ಮಾತನಾಡಿದ ಬಿಎಸ್ ವೈ, ಈಶ್ವರಪ್ಪನವರಿಗೆ ಎಂಥದೋ ಗೊಂದಲವಿದೆ. ನಾವಿಬ್ಬರೇ ಕೂತು ಮಾತನಾಡಿದರೆ ಸರಿಹೋಗುತ್ತದೆ ಎಂದು ಹೇಳಿದರು.[ಬಿಎಸ್ ವೈ ಕಟ್ಟಿಹಾಕಲು ಸೃಷ್ಟಿಯಾಗಿದ್ದೇ ಬಿಜೆಪಿ ಬಿಕ್ಕಟ್ಟು!]
ಒಂದು ಕಡೆ ಎಲ್ಲ ಸರಿಹೋಗಿದೆ ಎನ್ನುವ ಯಡಿಯೂರಪ್ಪನವರು, ಮತ್ತೊಂದು ಕಡೆ ಈಶ್ವರಪ್ಪ ಅವರಲ್ಲಿ ಗೊಂದಲವಿದೆ ಅಂತಾರೆ. ಕೂತು ಮಾತನಾಡಿದರೆ ಸರಿಹೋಗುತ್ತದೆ ಅಂತಲೂ ಸೇರಿಸುತ್ತಾರೆ. ಅಂದರೆ ಈಗ ಸರಿಹೋಗಿಲ್ಲ ಅಂತ ತಾನೇ ಅರ್ಥ. ಜತೆಗೆ ಗುರುವಾರ ಈಶ್ವರಪ್ಪ ಅವರು ಗೈರಾಗಿದ್ದಾರೆ ಎಂಬುದು ಹಲವು ರೀತಿ ಸಂದೇಶ ರವಾನಿಸುತ್ತದೆ.