ಕೌದೇನಹಳ್ಳಿ ಕೆರೆಗೆ ಮರಳಿವೆ ಚೆಂದದ ಪಕ್ಷಿಗಳು...
ಬೆಂಗಳೂರು, ನವೆಂಬರ್ 19: ಸಾರ್ಥಕವಾದ ಕೆಲಸಗಳು ಹೇಗೆ ಗೊತ್ತಾಗುತ್ತವೆ ಅನ್ನೋದಿಕ್ಕೆ ಯುನೈಟೆಡ್ ವೇ ಬೆಂಗಳೂರು ಸಂಸ್ಥೆ ಅವರಿಗೆ ಸಾಕ್ಷಿ ಸಿಕ್ಕಿದೆ. ಕೆ.ಆರ್.ಪುರಂನ ಕೌದೇನಹಳ್ಳಿ ಕೆರೆ ಅಂಗಳದಲ್ಲಿ ದೀಪಾವಳಿ ಅಂಗವಾಗಿ ಪರಿಸರಸ್ನೇಹಿ ದೀಪೋತ್ಸವ ಮಾಡಿದ ಸಂಭ್ರಮದಲ್ಲಿದ್ದ ಸಂಸ್ಥೆಗೆ ಈಗ ಪಕ್ಷಿಗಳ ಆಗಮನದ ಸುದ್ದಿ ಮುಟ್ಟಿದೆ.
ನಿಮಗೆ ಕೆಲವು ವಿಚಾರ ಮೊದಲಿಂದ ಹೇಳಬೇಕು. ಮೂರು ವರ್ಷದ ಹಿಂದೆ ಯುನೈಟೆಡ್ ವೇ ಬೆಂಗಳೂರು ಈ ಕೆರೆಯ ಜೀರ್ಣೋದ್ಧಾರಕ್ಕೆ ಮುಂದಾಯಿತು. ಅಗ ಇಲ್ಲಿನ ಸ್ಥಳೀಯರನ್ನು ಜೊತೆ ಮಾಡಿಕೊಂಡು ಒಂದು-ಒಂದೂವರೆ ಸಾವಿರ ಗಿಡಗಳನ್ನು ಬೆಳೆಸಿದರು. ಕೌದೇನಹಳ್ಳಿ ಕೆರೆ ಸ್ವಚ್ಛವಾಯಿತು. ಸ್ಥಳೀಯರು ಕೆರೆ ಅಂಗಳಕ್ಕೆ ಬರುವಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದರು.[ಕೌದೇನಹಳ್ಳಿ ಕೆರೆ ಆವರಣದಲ್ಲಿ ದೀಪೋತ್ಸವದ ಸಂಭ್ರಮ]
ಇದರಲ್ಲಿ ಸ್ಥಳೀಯರು ತುಂಬ ಉತ್ಸಾಹದಿಂದ ಪಾಲ್ಗೊಂಡರು. ಕೆರೆಗೆ ಹೊಸ ಜೀವ ಬಂದಂತಾಯಿತು. ಸ್ವಚ್ಛ ಗಾಳಿ, ಹಸಿರು ಕಣ್ಣಿಗೆ ಹಬ್ಬ ತಂದವು. ಮೂರೇ ವರ್ಷದಲ್ಲಿ ಅದ್ಭುತವೊಂದು ಕಾಣ್ತಿದೆ. ಇಲ್ಲಿಂದ ವಲಸೆ ಹೋಗಿದ್ದ ಹಕ್ಕಿಗಳು ಮರಳಿ ಬರುತ್ತಿವೆ. ಇಲ್ಲಿನ ಜನರಿಗೆ ಈಗ ಮನೆಗೆ ಮಕ್ಕಳು ವಾಪಸ್ ಬಂದರೇನೋ ಎಂಬಂಥ ಸಂತಸ.[ಪರಿಸರ ಜಾಗೃತಿ ಸಾರಿದ ನಂದಿ ಹಿಲ್ಲಥಾನ್]
ಯುನೈಟೆಡ್ ವೇ ಬೆಂಗಳೂರು ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಮನೀಶ್ ಮೈಕೆಲ್ ಅವರು ಒನ್ಇಂಡಿಯಾದ ಜೊತೆಗೆ ಮಾತನಾಡಿ, ಮೂರು ವರ್ಷದಲ್ಲಿ ನಮ್ಮ ಸಂಸ್ಥೆ ಮಾಡಿದ ಕೆಲಸಕ್ಕೆ ಫಲ ಸಿಕ್ಕ ಖುಷಿಯಾಗಿದೆ. ಸ್ಥಳೀಯರು ನಮ್ಮ ಕೆಲಸದಲ್ಲಿ ತೊಡಗಿಕೊಂಡರು. ಈಗ ನೀವು ಅ ಕೆರೆಯನ್ನು ನೋಡಬೇಕು. ತುಂಬ ಸ್ವಚ್ಛ, ಸ್ವಚ್ಛ. ಒಂದರಿಂದ ಒಂದೂವರೆ ಸಾವಿರ ಸಸಿ ನೆಟ್ಟಿದ್ದರಿಂದ ಅಲ್ಲೀಗ ಮುಂಚೆ ಇದ್ದ ಪಕ್ಷಿಗಳು ವಾಪಸ್ ಬಂದಿವೆ ಎಂದರು.