ಬೆಂಗಳೂರಿನ ಮೊದಲ ಶಿಶುಮಂದಿರ ಹಿಮಾಂಶುಗೆ 75
75 ವರ್ಷ ಪೂರೈಸಿದ ಸುಮಧುರ ಸಂದರ್ಭದಲ್ಲಿ ಹಿಮಾಂಶ ಶಿಶು ಮಂದಿರದ ಸಂಸ್ಥಾಪಕರು, ಹಳೆಯ ವಿದ್ಯಾಥಿಗಳ ಸಮೂಹ ಮತ್ತು ಸಿಬ್ಬಂದಿ ಅಮೃತ ಮಹೋತ್ಸವವನ್ನು (1942-2017) ಆಯೋಜಿಸಿದೆ.
ಬೆಂಗಳೂರು, ಡಿಸೆಂಬರ್ 19 : ಬೆಂಗಳೂರಿನ ಮೊದಲ ಶಿಶುವಿಹಾರ ಮಲ್ಲೇಶ್ವರಂನಲ್ಲಿ 1942ರಲ್ಲಿ ಆರಂಭವಾಗಿತ್ತು ಎಂಬುದು ನಿಮಗೆ ತಿಳಿದಿದೆಯೇ? ಹೌದು, 75 ವಸಂತಗಳನ್ನು ಪೂರೈಸಿರುವ ಹಿಮಾಂಶು ಶಿಶುವಿಹಾರ ಇಂದು ಪ್ರಬುದ್ಧ ವಿದ್ಯಾ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಈ ಸಂಭ್ರಮವನ್ನು ಹಿಮಾಂಶು ಸಂಸ್ಥೆ ಮುಂದಿನ ವರ್ಷ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ನಡೆಸಿದೆ. ಈ ಸಂತಸದ ಘಳಿಗೆ ಮತ್ತು ಸಂಸ್ಥೆ ನಡೆದುಬಂದ ಸುದೀರ್ಘ ಪಯಣ ಮತ್ತು ಅಮೃತ ಮಹೋತ್ಸವದ ವಿವರಗಳನ್ನು ಹಂಚಿಕೊಳ್ಳಲೆಂದು ಡಿಸೆಂಬರ್ 20ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗೋಷ್ಠಿಯನ್ನು ಆಯೋಜಿಸಲಾಗಿದೆ.
ಆ ಸಂದರ್ಭದಲ್ಲಿ ಶಾಲೆಗೆ ಸೇರಲು ಮಕ್ಕಳಿಗೆ ಕನಿಷ್ಠ ಆರು ವರ್ಷ ವಯಸ್ಸಾಗಿರಬೇಕೆಂದು ಪರಿಗಣಿಸಲಾಗುತ್ತಿತ್ತು. ಹೀಗಾಗಿ ಶಿಶುವಿಹಾರ ಎನ್ನುವ ಪರಿಕಲ್ಪನೆ ತುಂಬಾ ಹೊಸದು. ಇಂತಹ ಹತ್ತು ಹಲವಾರು ತೊಡಕುಗಳನ್ನು ಎದುರಿಸಿ ಶಿಕ್ಷಣ ಕ್ಷೇತ್ರಕ್ಕೆ ಒಂದು ಕೊಡುಗೆಯಾಗಿ ನೀಡಬೇಕೆಂಬ ಉದ್ದೇಶದೊಂದಿಗೆ ಹುಟ್ಟಿಕೊಂಡಿದ್ದೇ ಹಿಮಾಂಶು ಜ್ಯೋತಿ ಕಲಾ ಪೀಠ.
ಈ ಒಂದು ಸುಮಧುರ ಸಂದರ್ಭದಲ್ಲಿ ಶಿಶು ಮಂದಿರದ ಸಂಸ್ಥಾಪಕರು, ಹಳೆಯ ವಿದ್ಯಾಥಿಗಳ ಸಮೂಹ ಮತ್ತು ಸಿಬ್ಬಂದಿ ಅಮೃತ ಮಹೋತ್ಸವವನ್ನು (1942-2017) ಆಯೋಜಿಸಿದ್ದು, ಇದಕ್ಕೆ ಪೂರಕವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಹಲವಾರು ಗಮನಾರ್ಹ ಸಾಧನೆಗಳೊಂದಿಗೆ ಸಂಸ್ಥೆಯು ಮೈಲುಗಲ್ಲನ್ನು ಸ್ಥಾಪಿಸಿದೆ. ಇದರ ಪರಿಣಾಮವೇ ಇಂದು ಸಂಸ್ಥೆ ಪಿಯುಸಿಯವರೆಗೂ ಶಿಕ್ಷಣ ನೀಡುತ್ತಿದ್ದು, ಸಂಸ್ಥೆಯಲ್ಲಿ 2000ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಅವರಿಗೆ ಶಿಕ್ಷಣ ನೀಡಲು 150ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ.
ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ, ವಿಜಯಲಕ್ಷ್ಮಿ ಪಂಡಿತ್, ಕೃಷ್ಣ ಹುತೇಸಿಂಗ್, ಜನರಲ್ ಕಾರಿಯಪ್ಪ, ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸ ರಾವ್ ಸೇರಿದಂತೆ ದೇಶದ ಮತ್ತು ವಿದೇಶದ ಹಲವಾರು ಗಣ್ಯರು ಈ ಸಂಸ್ಥೆಗೆ ಭೇಟಿ ನೀಡಿದ್ದಾರೆ.
ಸಂಸ್ಥೆಯ ಈ ಸುದೀರ್ಘ ಪಯಣ ಮತ್ತು ಅಮೃತ ಮಹೋತ್ಸವ ಕಾರ್ಯಕ್ರಮದ ವಿವರಗಳನ್ನು ಹಂಚಿಕೊಳ್ಳಲೆಂದು ಡಿಸೆಂಬರ್ 20, 2016ರ ಮಂಗಳವಾರದಂದು ಮಾಧ್ಯಮಗೋಷ್ಠಿಯನ್ನು ಏರ್ಪಡಿಸಲಾಗಿದೆ.
ಹಿಮಾಂಶು ಜ್ಯೋತಿ ಕಲಾ ಪೀಠದ ಅಧ್ಯಕ್ಷರಾದ ಡಾ.ಬಿ.ವಿ.ಎ.ರಾವ್, ಹಿಮಾಂಶು ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷೆ ಮತ್ತು ಹಿಮಾಂಶು ಜ್ಯೋತಿ ಕಲಾ ಪೀಠದ ವ್ಯವಸ್ಥಾಪಕ ನಿರ್ದೇಶಕಿ ಚಿತ್ರಾ ಎ.ರಾವ್ ಮತ್ತು ಹಿಮಾಂಶು ಜ್ಯೋತಿ ಕಲಾ ಪೀಠದ ನಿರ್ದೇಶಕ ಬಿ.ವಿ.ವಿಜಯಕುಮಾರ್ ಅವರು ಈ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ದಿನಾಂಕ
:
ಮಂಗಳವಾರ,
ಡಿಸೆಂಬರ್
20,
2016
ಸಮಯ
:
12
ಗಂಟೆಗೆ.
ಸ್ಥಳ
:
ಪ್ರೆಸ್ಕ್ಲಬ್,
ಕಬ್ಬನ್ಪಾರ್ಕ್,
ಬೆಂಗಳೂರು.