ರಂಜಾನ್ ಕೂಪನ್ ಪಡೆಯಲು ಹೋಗಿದ್ದ ಮಹಿಳೆ ಕಾಲ್ತುಳಿತಕ್ಕೆ ಸಾವು
ಬೆಂಗಳೂರು, ಸೆಪ್ಟೆಂಬರ್ 22: ಶಿವಾಜಿನಗರದ ಉದ್ಯಮಿಯೊಬ್ಬರು ಮುಂದಿನ ವರ್ಷದ ರಂಜಾನ್ ಗಾಗಿ ಉಚಿತವಾಗಿ ಹಂಚುತ್ತಿದ್ದ ಆಹಾರ ಪದಾರ್ಥದ ಕೂಪನ್ ಪಡೆಯಲು ತೆರಳಿದ್ದ ಮಹಿಳೆಯೊಬ್ಬರು ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ.
ಡಿ.ಜೆ.ಹಳ್ಳಿಯ ಜೀನತ್ ಉನ್ನೀಸಾ ಮೃತರು. ರಿಯಲ್ ಎಸ್ಟೇಟ್ ಉದ್ಯಮಿ ಆಸೀಫ್ ಕೂಪನ್ ವಿತರಿಸುತ್ತಿದ್ದವ್ರು. ಕಳೆದ ಕೆಲ ದಿನಗಳಿಂದಲೇ ಶಿವಾಜಿನಗರದ ಎಕೆಪಿ ಕನ್ವೆನ್ಷನ್ ಹಾಲ್ ನಲ್ಲಿ ಕೂಪನ್ ಹಂಚುತ್ತಿದ್ದಾರೆ. ಬೆಂಗಳೂರು ಅಷ್ಟೇ ಅಲ್ಲ, ಕೋಲಾರ, ತುಮಕೂರು ಸೇರಿದಂತೆ ಬೇರೆ ಜಿಲ್ಲೆಗಳಿಂದ ಜನರು ಇಲ್ಲಿಗೆ ಬರುತ್ತಿದ್ದಾರೆ.[ಅಮ್ಮನ ಕೊಲೆಗೆ ಸಾಕ್ಷ್ಯವಾದ ಆ ಮಗುವಿನ ವಯಸ್ಸು 5 ವರ್ಷ]
ಬುಧವಾರ ಬೆಳಗ್ಗೆ ಕನ್ವೆನ್ಷನ್ ಹಾಲ್ ಬಾಗಿಲು ತೆಗೆಯುತ್ತಿದ್ದ ಹಾಗೆ ಏಕಾಏಕಿ ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿ ಪ್ರಹಾರಕ್ಕೆ ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ, ಜೀನತ್ ಉನ್ನೀಸಾ ಸಾವನ್ನಪ್ಪಿದ್ದಾರೆ.[ಕೇರಳ ಆಘಾತ : 90 ವರ್ಷದ ವೃದ್ಧೆ ಮೇಲೆ ಅತ್ಯಾಚಾರ]
ಆದರೆ, ಲಾಠಿ ಪ್ರಹಾರ ನಡೆಸಿಲ್ಲ ಎಂದು ಪೊಲೀಸರು ತಿಳಿಸಿದ್ದು, ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದೆ. ಈ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆ ಪೊಲೀಸರು ಇರಲಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ ಶಿವಾಜಿನಗರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.