ನಶೆಯಲ್ಲಿದ್ದ ಬೆಂಗಳೂರು ಯುವತಿಯ ಕಾರಿಗೆ ಪಾದಚಾರಿ ಬಲಿ
ಬೆಂಗಳೂರು, ಆಗಸ್ಟ್, 25: ನಶೆಯಲ್ಲಿದ್ದ ಯುವತಿಯೊಬ್ಬಳ ಅಡ್ಡಾ ದಿಡ್ಡಿ ಕಾರು ಚಾಲನೆ ಪಾದಚಾರಿಯೊಬ್ಬರ ಪ್ರಾಣ ಬಲಿ ಪಡೆದಿದೆ. ಬೆಂಗಳೂರಿನ ಲಾಲ್ ಬಾಗ್ ವೆಸ್ಟ್ ಗೇಟ್ ಬಳಿ ಬುಧವಾರ ತಡರಾತ್ರಿ ಭೀಕರ ಘಟನೆ ನಡೆದಿದೆ.
ಕಾರು ಚಾಲಕಿ ರಾಜಾಜಿ ನಗರದ ನಿವಾಸಿ ಭವತಿರಾಣಿ(26) ಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಯುವತಿ ಮೆಜೆಸ್ಟಿಕ್ ಕಡೆಯಿಂದ ಜೆ ಪಿ ನಗರದ ಕಡೆ ತೆರಳುತ್ತಿದ್ದಾಗ ವೆಸ್ಟ್ ಗೇಟ್ ಬಳಿ ಅಡ್ಡ ಬಂದ ಪಾದಚಾರಿಗೆ ಕಾರು ಡಿಕ್ಕಿಯಾಗಿದೆ.[ಸಲ್ಮಾನ್ ಖಾನ್ ಗುದ್ದೋಡು ಪ್ರಕರಣದ ಸಂಪೂರ್ಣ ವಿವರ]
ಯುವತಿ ನಶೆಯಲ್ಲಿದ್ದಳು ಎಂಬುದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ. ಅಡ್ಡಾದಿಡ್ಡಿ ಚಾಲನೆ ಆಟಾಟೋಪಕ್ಕೆ 50 ವರ್ಷದ ಸುಬ್ರಮಣಿ ಎಂಬುವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ರಾತ್ರಿ ಸುಮಾರು 11 ಗಂಟೆ ವೇಳೆ ಯುವತಿಯ ಕಾರು ಜೆಪಿ ನಗರದ ಕಡೆ ವೇಗವಾಗಿ ತೆರಳುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿ ಅಡ್ಡ ಸಿಕ್ಕವರಿಗೆಲ್ಲ ಗುದ್ದಿದೆ. ಘಟನೆಯಲ್ಲಿ ಪಾದಚಾರಿಯೊಬ್ಬರ ಪ್ರಾಣ ಹಾರಿಹೋಗಿದೆ.[ಅಷ್ಟಕ್ಕೂ ಸವಾರರು ಹೆಲ್ಮೆಟ್ ಯಾಕೆ ಧರಿಸಬೇಕು?]
ನಿಯಂತ್ರಣ ತಪ್ಪಿದ ಕಾರು ಮೊದಲು ಕೆಲ ವಾಹನಗಳಿಗೆ ಗುದ್ದಿದೆ. ಅಂತಿಮವಾಗಿ ಪಾದಚಾರಿ ಸುಬ್ರಮಣಿಗೆ ಡಿಕ್ಕಿಯಾಗಿದ್ದು ಅವರು ಸಾವನ್ನಪ್ಪಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಯುವತಿಯನ್ನು ಹಿಡಿದು ಥಳಿಸಿದ್ದಾರೆ. ಸ್ಥಳಕ್ಕೆ ಬಂದ ಸಿಟಿ ಮಾರ್ಕೆಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ.