ನೈಜೀರಿಯಾ ಪ್ರಜೆಯನ್ನು ಹೊಡೆದು ಕೊಂದರಾ ಬೆಂಗಳೂರು ಪೊಲೀಸರು?
ಉಗಾಂಡಾದ ಪ್ರಜೆಯೊಬ್ಬರು ಪೊಲೀಸರ ಕಾರ್ಯಾಚರಣೆ ವೇಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು, ಮಾರ್ಚ್ 13: ನೈಜೀರಿಯಾದ ಪ್ರಜೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊತ್ತನೂರು-ಆವಲಹಳ್ಳಿ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಈತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ನಿನ್ನೆ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ನೈಜೀರಿಯಾ ಪ್ರಜೆಯೊಬ್ಬರು ಸ್ಕೂಟರಿನಿಂದ ಆಯ ತಪ್ಪಿ ಬಿದ್ದು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. [ಬೆಂಗಳೂರು: ಶೂ ನೆಕ್ಕಿಸಿಕೊಂಡು ಈಶಾನ್ಯ ರಾಜ್ಯ ವಿದ್ಯಾರ್ಥಿಗಳ ಮೇಲೆ ಹಲ್ಲೆ]
ಸಾವನ್ನಪ್ಪಿರುವ ನೂಜೀರಿಯಾ ವ್ಯಕ್ತಿ ನಗರದಲ್ಲಿ ಗಾಂಜಾ, ಅಫೀಮು, ಚರಸ್, ಕೊಕೇನ್ ಮುಂತಾದ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಸಿಸಿಬಿ ಇನ್ಸ್ ಪೆಕ್ಟರ್ ಯಶವಂತ್ ನೇತೃತ್ವದ ಪೊಲೀಸರ ತಂಡ ಸೋಮವಾರ ರಾತ್ರಿ ರಸ್ತೆಯಲ್ಲಿ ಬೀಟ್ ನಡೆಸುತ್ತಿದ್ದರು. ಸ್ಥಳದಲ್ಲಿ ಮಾದಕ ವಸ್ತು ಹಸ್ತಾಂತರವಾಗಲಿದೆ ಎಂಬ ಮಾಹಿತಿಯ ಮೇರೆ ತಂಡ ಕೊತ್ತನೂರು-ಆವಲಹಳ್ಳಿ ರಸ್ತೆಯಲ್ಲಿತ್ತು. ಈ ಸಂದರ್ಭದಲ್ಲಿ ಸ್ಕೂಟರಿನಲ್ಲಿ ನೈಜೀರಿಯಾ ಪ್ರಜೆಗಳು ಆಗಮಿಸಿದ್ದರು. ಇವರನ್ನು ಪೊಲೀಸರು ಬೆನ್ನತ್ತುವಾಗ ಹಿಂದೆ ಕುಳಿತಿದ್ದ ವ್ಯಕ್ತಿ ಆಯ ತಪ್ಪಿ ಬಿದ್ದಿದ್ದಾರೆ. ಇದರಿಂದ ತಲೆಗೆ ಗಂಭೀರ ಗಾಯವಾಗಿತ್ತು. [ಬೆಂಗಳೂರು: ಗಾಂಜಾ ಮತ್ತಿನಲ್ಲಿ ಯುವಕನ ಕೊಲೆ]
ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ತಕ್ಷಣ ಪೊಲೀಸರು ಬೌರಿಂಗ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರು. ಆದರೆ ಸಿಕಿತ್ಸೆ ಫಲಕಾರಿಯಾಗದೆ ನೈಜೀರಿಯಾ ಪ್ರಜೆ ಇಂದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸಾವಿಗೀಡಾದ ವ್ಯಕ್ತಿಯನ್ನು ಇಫಾ ಅಮಾಡೊ ಎಂದು ಗುರುತಿಸಲಾಗಿದೆ. ಈ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಕ್ಷನ್ 279 ಹಾಗೂ 304 (ಎ) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಆದರೆ ಪೊಲೀಸರ ಹೇಳಿಕೆಗೆ ಆಫ್ರಿಕಾ ವಿದ್ಯಾರ್ಥಿಗಳ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಒಕ್ಕೂಟದ ಕಾನೂನು ಸಲಹೆಗಾರ ಬಾಸ್ಕೊ ಕವೀಸಿ, ವ್ಯಕ್ತಿಯನ್ನು ಪೊಲೀಸರು ಹೊಡೆದು ಕೊಲೆ ಮಾಡಿದ್ದಾರೆ. ತಲೆಯ ಹಿಂಭಾಗದಲ್ಲಿ ದೊಡ್ಡ ಗಾಯವಾಗಿದೆ. ಅಪಘಾತದಿಂದ ಇಷ್ಟು ದೊಡ್ಡ ಗಾಯವಾಗಲು ಸಾಧ್ಯವಿಲ್ಲ. ಪೊಲೀಸರ ಹೇಳಿಕೆಯಲ್ಲಿ ಹಲವು ತಪ್ಪುಗಳಿವೆ ಎಂದು ಹೇಳಿದ್ದಾರೆ.
ಮಾತ್ರವಲ್ಲ ಸಿಸಿಬಿ ಪೊಲೀಸರು ಆಫ್ರಿಕಾದ ಪ್ರಜೆಗಳ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿದ್ದಾರೆ. ಬೆಂಗಳೂರು ಆಫ್ರಿಕನ್ನರ ಪಾಲಿಗೆ ಅಸುರಕ್ಷಿತವಾಗಿದೆ ಎಂದು ದೂರಿದ್ದಾರೆ. ಆದರೆ ಇದು ಲಾಕಪ್ ಡೆತ್ ಅಲ್ಲ ಎಂದು ಎಸಿಪಿ ಹೇಮಂತ್ ನಿಂಬಾಳ್ಕರ್ ಹೇಳಿದ್ದು ಬಾಸ್ಕೊ ವಾದವನ್ನು ತಳ್ಳಿ ಹಾಕಿದ್ದಾರೆ.