ಹುತಾತ್ಮ 'ಮೀಸೆ ತಿಮ್ಮಯ್ಯ' ನಮ್ಮ ಟ್ರಾಫಿಕ್ ಪೊಲೀಸರ ಹೆಗ್ಗುರುತು
ಬೆಂಗಳೂರು, ಜೂನ್ 9: ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಸದ್ಯದಲ್ಲೇ 'ಮ್ಯಾಸ್ಕಾಟ್' (ಹೆಗ್ಗುರುತು) ಸಿಗಲಿದೆ. ಹಿರಿಯ ಟ್ರಾಫಿಕ್ ಪೊಲೀಸ್ ಪೇದೆ ಮೀಸೆ ತಿಮ್ಮಯ್ಯ ಸ್ಮರಣಾರ್ಥ ಅವರದ್ದೇ ಮ್ಯಾಸ್ಕಾಟ್ ನ್ನು ಪಡೆಯಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.
ಯಾರು ಈ ಮೀಸೆ ತಿಮ್ಮಯ್ಯ?
ಮೀಸೆ ತಿಮ್ಮಯ್ಯ ಜನರಿಗೆ ಪ್ರೀತಿ ಪಾತ್ರರಾಗಿದ್ದ, ಜನಮಾನಸದಲ್ಲಿ ಗೌರವಯುವ ಸ್ಥಾನ ಪಡೆದಿದ್ದ ಅಪರೂಪದ ಟ್ರಾಫಿಕ್ ಪೊಲೀಸ್ ಪೇದೆ. 1995ರಲ್ಲಿ ಸೇವಾ ಅವಧಿಯಲ್ಲೇ ಅವರು ಸಾವನ್ನಪ್ಪಿದ್ದರು. ಓರ್ವ ಮಹಿಳೆ ಮತ್ತು ಆಕೆಯ ಮಗುವಿನ ಮೇಲೆ ವ್ಯಾನ್ ಹರಿದಾಡಲಿರುವುದನ್ನು ಗಮನಿಸಿ ಮುನ್ನುಗ್ಗಿ ಮೀಸೆ ತಿಮ್ಮಯ್ಯ ಅವರ ಜೀವ ರಕ್ಷಿಸಿದ್ದರು. ಆದರೆ ದುರಾದೃಷ್ಟ ಅದೇ ಘಟನೆಯಲ್ಲಿ ಮೀಸೆ ತಿಮ್ಮಯ್ಯ ತಮ್ಮ ಜೀವ ಕಳೆದುಕೊಂಡರು. ಇಬ್ಬರ ಜೀವ ಉಳಿಸಿ ಮೀಸೆ ತಿಮ್ಮಯ್ಯ ತಮ್ಮ ಜೀವ ಕಳೆದುಕೊಂಡರು.
ಈ ಹಿಂದಿನ ಜನರಲ್ ಪೋಸ್ಟ್ ಆಫೀಸ್ ಜಂಕ್ಷನ್ ನಲ್ಲಿ ಅವರು ಕೆಲಸ ನಿರ್ವಹಿಸುತ್ತಿದ್ದರು. ಇದೀಗ ತಿಮ್ಮಯ್ಯ ಸ್ಮರಣಾರ್ಥ ಆ ಜಂಕ್ಷನ್ ಗೆ 'ತಿಮ್ಮಯ್ಯ ಜಂಕ್ಷನ್' ಎಂದು ನಾಮಕರಣ ಮಾಡಲಾಗಿದೆ. ತಮ್ಮ ದಪ್ಪ ಮೀಸೆಯ ಅಡಿಯಲ್ಲೇ ತಿಮ್ಮಯ್ಯ ಯಾವತ್ತೂ ಸ್ನೇಹದ ನಗು ಬೀರುತ್ತಿದ್ದರು. ಅದಕ್ಕೆ ಅವರಿಗೆ 'ಮೀಸೆ ತಿಮ್ಮಯ್ಯ' ಎಂಬ ಹೆಸರು ಬಂದಿತ್ತು.
"ಅವರು ಮಕ್ಕಳ ವಲಯದಲ್ಲಿ ಭಾರೀ ಜನಪ್ರಿಯರಾಗಿದ್ದರು. ಅವರನ್ನು ನಗರದ ಎಲ್ಲರೂ ಪ್ರೀತಿಸುತ್ತಿದ್ದರು. ನಾವು ಅವರನ್ನು ಟ್ರಾಫಿಕ್ ಪೊಲೀಸರ ಮ್ಯಾಸ್ಕಾಟ್ ಗೆ ಪರಿಗಣಿಸಿದ್ದೇವೆ. ಆದರೆ ಯಾವುದೇ ನಿರ್ಧಾರವನ್ನು ಇನ್ನೂ ತೆಗೆದುಕೊಂಡಿಲ್ಲ," ಎಂದು ಟ್ರಾಫಿಕ್ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಹೇಳಿದ್ದಾರೆ.
ತಿಮ್ಮಯ್ಯ ತಮ್ಮ ಮೀಸೆಯ ಕಾರಣಕ್ಕೆ ಮಾತ್ರ ಜನಪ್ರಿಯವಾಗಿರಲಿಲ್ಲ. ಗಿಜಿಗುಡುವ ವೃತ್ತದಲ್ಲಿ ಸುಲಲಿತವಾಗಿ ಟ್ರಾಫಿಕ್ ಮ್ಯಾನೇಜ್ ಮಾಡುವ ಮೂಲಕವೂ ಅವರು ಜನಪ್ರಿಯರಾಗಿದ್ದರು.
ಅವರು ಸಾವಿಗೀಡಾದ ನಂತರ ಅವರ ಕುಟುಂಬಕ್ಕೆ ಚಿನ್ನದ ಪದಕ ಪ್ರಧಾನ ಮಾಡಲಾಗಿತ್ತು. ಜತೆಗೆ ಅವರು ಕಾರ್ಯ ನಿರ್ವಹಿಸುತ್ತಿದ್ದ ವೃತ್ತಕ್ಕೆ 'ತಿಮ್ಮಯ್ಯ ವೃತ್ತ' ಎಂದು ನಾಮಕರಣ ಮಾಡಲಾಗಿತ್ತು.
ಮೀಸೆ ತಿಮ್ಮಯ್ಯರನ್ನು ಬೆಂಗಳೂರು ಟ್ರಾಫಿಕ್ ಪೊಲೀಸರ ಮ್ಯಾಸ್ಕಾಟ್ ಆಗಿ ಪರಿಗಣಿಸುವ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ. ಆದರೆ ಅವರ ಮ್ಯಾಸ್ಕಾಟ್ ಕೂಡಾ ಪರಿಶೀಲನೆಯಲ್ಲಿದೆ. ಒಂದೊಮ್ಮೆ ತಿಮ್ಮಯ್ಯ ಮ್ಯಾಸ್ಕಾಟ್ ಆದಲ್ಲಿ ಇದೊಂದು ಅಪರೂಪದ ನಿದರ್ಶನವಾಗಲಿದೆ. (ಒನ್ ಇಂಡಿಯಾ ಸುದ್ದಿ)