ಬೆಂಗಳೂರಲ್ಲಿ 'ಸುರಕ್ಷತಾ ಶಿರಸ್ತ್ರಾಣ ಧರಿಸಿ' ಅಭಿಯಾನ
ಬೆಂಗಳೂರು, ಆಗಸ್ಟ್, 28 : ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತಗಳು ಹೆಚ್ಚುತ್ತಲೇ ಸಾಗುತ್ತಿದೆ. ಇದರ ಪ್ರಮಾಣ ಕಡಿಮೆ ಮಾಡಲು ಸರ್ಕಾರ ವಾಹನ ಚಾಲಕರಿಗೆ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವ ನಿಯಮವನ್ನು ಜಾರಿಗೆ ತಂದಿತ್ತು.
ಚಾಲಕರಿಗೆ ಇನ್ನಷ್ಟು ಅರಿವು ಮೂಡಿಸುವ ಸಲುವಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಸುರಕ್ಷತಾ ಶಿರಸ್ತ್ರಾಣ ಧರಿಸಿ(Wear Safety Helmet Campaign)ಎಂಬ ಅಭಿಯಾನವನ್ನೇ ಆರಂಭಿಸಿದ್ದಾರೆ.[ಚಿಕ್ಕಪೇಟೆ ಸಂಚಾರಿ ಪೊಲೀಸರ ಮಾನವೀಯತೆಗೆ ಸಲಾಂ]
ಹೆಲ್ಮೆಟ್ ಧರಿಸುವುದರಿಂದ ಆಗುವ ಅನುಕೂಲದ ಕುರಿತಾಗಿ ನಡೆಯುವ ಈ ಅಭಿಯಾನ ಆಗಸ್ಟ್ 29ರ ಶನಿವಾರ ಬೆಳಿಗ್ಗೆ, 11 ಗಂಟೆಗೆ ಎಂ.ಜಿ ರಸ್ತೆಯ ಕ್ವೀನ್ಸ್ ಸರ್ಕಲ್ನಲ್ಲಿ ಪ್ರಾರಂಭಗೊಳ್ಳಲಿದೆ.
ಸುರಕ್ಷತಾ ಶಿರಸ್ತ್ರಾಣ ಧರಿಸಿ ಅಭಿಯಾನಕ್ಕೆ ಬೆಂಗಳೂರು ನಗರದ ಪೊಲೀಸ್ ಕಮೀಷನರ್, ಐಪಿಎಸ್ ಅಧಿಕಾರಿ ಎನ್. ಎಸ್. ಮೇಘರಿಕ್ ಹಾಗೂ ಸಾರಿಗೆ ಆಯುಕ್ತ ಡಾ|| ರಾಮೇಗೌಡ ಅವರು ಚಾಲನೆ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಹೆಲ್ಮೆಟ್ ಸುರಕ್ಷತಾ ಕಿರು ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಲಿದ್ದು, ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಪತ್ರಿಕೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಎಸ್. ವಿ. ಶ್ರೀನಿವಾಸನ್ ಅವರು ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.