ಸುವರ್ಣ ಸುಯೋಧನನಿಗೆ ತಲೆದೂಗಿದ ಪ್ರಬುದ್ಧ ಪ್ರೇಕ್ಷಕ
ಬೆಂಗಳೂರು, ಜೂ. 15: ಯಕ್ಷಗಾನದ ಗೋಡೆಗೆ ಸುವರ್ಣದ ಸಂಭ್ರಮ. ಯಕ್ಷರಂಗದ ಸವ್ಯಸಾಚಿ ಕಲಾವಿದ ಗೋಡೆ ನಾರಾಯಣ ಹೆಗಡೆ ಅವರ ಸುವರ್ಣ ಸುಯೋಧನ ಸಂಭ್ರಮಕ್ಕೆ ಪ್ರಬುದ್ಧ ಯಕ್ಷ ಪ್ರೇಕ್ಷಕರು ಭಾನುವಾರ ಸಾಕ್ಷಿಯಾದರು.
ಪುನರ್ ನವೀಕರಣಗೊಂಡ ಬೆಂಗಳೂರು ಪುರಭವನದಲ್ಲಿ ಭಾನುವಾರ ಇಡೀ ಚಂಡೆ, ಮೃದಂಗದ ಸದ್ದು. ಮಧ್ಯದಲ್ಲಿ 'ಸುವರ್ಣ ಸುಯೋಧದನಿಗೆ' ಸನ್ಮಾನದ ಗೌರವ. ಪ್ರಬುದ್ಧ ಪ್ರೇಕ್ಷಕರಿಗೆ ಲಯಬದ್ಧ ಭಾಗವತಿಕೆ. ಪೌರಾಣಿಕ ಆಖ್ಯಾನಗಳ ಆಸ್ವಾದನೆಯ ಅವಕಾಶ.[ನವೀಕರಣಗೊಂಡ ಟೌನ್ ಹಾಲ್ ಹೇಗಿದೆ]
ಶ್ರೀ ಮಣೂರು ವಾಸುದೇವ ಮಯ್ಯರ ಸಾರಥ್ಯದ 'ಮಯ್ಯ ಯಕ್ಷ ಕಲ್ಯಾಣ ನಿಧಿ', ಹಮ್ಮಿಕೊಂಡಿದ್ದ ಯಕ್ಷಗಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸುವರ್ಣ ಸುಯೋಧನನಿಗೆ ಬೆಳ್ಳಿ ಗದೆ ನೀಡಿ ಗೌರವಿಸಲಾಯಿತು.
ಗದಾಯುದ್ಧದ ಕೌರವನಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಗೋಡೆ ನಾರಾಯಣ ಹೆಗಡೆ ಬಣ್ಣ ಹಚ್ಚಿದ್ದರು. ತಮ್ಮ 76 ನೇ ವಯಸ್ಸಿನಲ್ಲಿಯೂ ನಾಟ್ಯ ಮತ್ತು ಅಭಿನಯದಲ್ಲಿ ಇನಿತೂ ಕಡಿಮೆಯಾಗಿಲ್ಲ ಎಂಬುದನ್ನು ತೋರಿಸಿಕೊಟ್ಟರು.
ಪ್ರೇಕ್ಷಕರಿಗೆ ಮೂರು ತಲೆಮಾರುಗಳ ಅಭಿನಯ ಒಂದೇ ವೇದಿಕೆಯಲ್ಲಿ ಲಭ್ಯವಾಗಿದ್ದಕ್ಕೆ ಮಯ್ಯ ಟ್ರಸ್ಟ್ ಗೆ ಧನ್ಯವಾದ ಸಲ್ಲಿಸಲೇಬೇಕು, ಗೋಡೆ ನಾರಾಯಣ ಹೆಗಡೆ ಅವರ 70 ರ ದಶಕದ ಸಾಂಪ್ರದಾಯಿಕ ಶೈಲಿ, ಹಡಿನಬಾಳ, ಕಣ್ಣಿ ಯವರ ಭಿನ್ನ ಮಾತುಗಾರಿಕೆ, ಕಾರ್ತೀಕ ಚಿಟ್ಟಾಣಿಯವರ ಕುಣಿತದ ರಸದೌತಣ ಎಲ್ಲವೂ ಲಭ್ಯವಾಯಿತು.
ಮಯ್ಯ, ಕೊಳಗಿ, ವಿದ್ವಾನ್, ಸುರೇಶ ಶೆಟ್ಟಿ ಭಾಗವತಿಕೆಯ ರಸ, ಕೋಟ, ಗಾಂವ್ಕರ್ ಹದವಾದ ಚಂಡೆ, ಮೃದಂಗ ಎಲ್ಲವೂ ಯಕ್ಷ ಪ್ರೇಕ್ಷಕರನ್ನು ಹೊಸ ಲೋಕಕ್ಕೆ ಕೊಂಡೊಯ್ದಿತ್ತು.