ಬೆಂಗಳೂರು: ರಸ್ತೆ ಅಪಘಾತ: 2 ಸಾವು, ಹಲವು ನೋವು
ಬೆಂಗಳೂರು, ಫೆ. 26 : ಗುರುವಾರ ಮಧ್ಯಾಹ್ನ ಹೆಬ್ಬಾಳದ ಕೆಂಪಾಪುರ ಜಂಕ್ಷನ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.
ಜಂಕ್ಷನ್ ಬಳಿ ಪಾದಚಾರಿಗಳು ರಸ್ತೆ ದಾಟುತ್ತಿದ್ದಾಗ ಅವಘಡ ಸಂಭವಿಸಿದೆ. ಬ್ರೇಕ್ ಫೇಲಾಗಿ ಮೊದಲು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನೀರಿನ ಟ್ಯಾಂಕರ್ ನಂತರ ಪಾದಚಾರಿಗಳ ಮೇಲೆ ಹರಿದಿದೆ.[ಹಳಿ ದಾಟುವ ವೇಳೆ ಮೃತ್ಯುವಾಗಿ ಬಂದ ರೈಲು: 12 ಸಾವು]
ಪರಿಣಾಮ ಬೈಕ್ ಸವಾರ ಆನಂದ್ (25) ಮತ್ತು ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ಅರ್ಪಿತಾ(19) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೆ ಐವರು ಪಾದಚಾರಿಗಳು ಗಂಭೀರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಟ್ಯಾಂಕರ್ ಚಾಲಕ ಯತೀಶ್ ನನ್ನು ಬಂಧಿಸಲಾಗಿದ್ದು ವಿಚಾರಣೆಗೆ ಒಳಪಡಿಸಲಾಗಿದೆ.
ವೇಗವಾಗಿದ್ದ ಟ್ಯಾಂಕರ್ ಬ್ರೇಕ್ ಫೇಲ್ ಆದ ಕಾರಣ ಸಿಗ್ನಲ್ ಜಂಪ್ ಮಾಡಿ ಮುಂದಕ್ಕೆ ನುಗ್ಗಿದೆ. ಈ ವೇಳೆ ಎದುರಿಗಿದ್ದ ಬೈಕ್ ಸವಾರನನ್ನು ಬಲಿ ತೆಗೆದುಕೊಂಡಿದ್ದು ರಸ್ತೆ ದಾಟುತ್ತಿದ್ದ ಸುಮಾರು 20 ಜನ ಪಾದಚಾರಿಗಳ ಮೇಲೆ ಹರಿದಿದೆ. ಅರ್ಧ ಜನ ದಿಕ್ಕಾಪಾಲಾಗಿ ಓಡಿ ತಪ್ಪಿಸಿಕೊಂಡರೆ, ಲಾರಿಯಡಿಗೆ ಸಿಕ್ಕ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿದ್ದಾಳೆ.[ಬೆಂ-ಮೈ ಆರು ಪಥದ ರಸ್ತೆ : ಅಧ್ಯಯನ ವರದಿಯಲ್ಲೇನಿದೆ?]
ದುರ್ಘಟನೆಯ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಚಾರಿ ವಿಭಾಗದ ಹೆಚ್ಚುವರಿ ಆಯುಕ್ತ ದಯಾನಂದ್, ಭಾಗದಲ್ಲಿ ಸಂಚಾರ ದಟ್ಟಣೆ ಇರುವುದು ನಿಜ, ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಘಟನೆಗೆ ನಿಜವಾದ ಕಾರಣ ಪತ್ತೆ ಹಚ್ಚಲಾಗುವುದು ಎಂದು ಹೇಳಿದ್ದಾರೆ. ಬೆಂಗಳೂರು ನಾಗರಿಕರು ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಚಾಲಕನ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.