ಎಚ್ಚರಾ! ಎಚ್ಚರಾ! ಬೆಂಗಳೂರಿನಲ್ಲಿ ಬಿಸಿಗಾಳಿ ಚುರುಗುಟ್ಟಲಿದೆ
ಬೆಂಗಳೂರಿನಲ್ಲಿ 35.5 ಡಿಗ್ರಿ ಸೆಲ್ಸಿಯಸ್ ತಾಪಮಾನ. ಇದು ಬೇಸಿಗೆಯ ಪರ್ವಕಾಲ.ಕಳೆದ 10 ವರ್ಷಗಳಲ್ಲೇ ಕಾಣದಂಥ ಬಿಸಿಲಿನ ಬೇಗೆ ಕಳೆದ ವಾರ ದಾಖಲಾಗಿದೆ ಎಂದು ಸ್ಕೈಮೆಟ್ ವೆದರ್ ವರದಿ ನೀಡಿದೆ.
ಬೆಂಗಳೂರು, ಫೆಬ್ರವರಿ 26: ಬೆಂಗಳೂರಿನಲ್ಲಿ 35.5 ಡಿಗ್ರಿ ಸೆಲ್ಸಿಯಸ್ ತಾಪಮಾನ. ಇದು ಬೇಸಿಗೆಯ ಪರ್ವಕಾಲ. ಶಿವರಾತ್ರಿ ಕಳೆಯುತ್ತಿದ್ದಂತೆ ಮೈಚಳಿ ಕೊಡವಿಗೊಂಡು ಮಿರಿಮಿರಿ ಮಿಂಚುವ ಕುದುರೆಗಳನ್ನೇರಿ ಸೂರ್ಯ ತನ್ನ ಪ್ರಭಾವ ಬೀರುವ ಸಮಯ. ಕಳೆದ 10 ವರ್ಷಗಳಲ್ಲೇ ಕಾಣದಂಥ ಬಿಸಿಲಿನ ಬೇಗೆ ಕಳೆದ ವಾರ ದಾಖಲಾಗಿದೆ ಎಂದು ಸ್ಕೈಮೆಟ್ ವೆದರ್ ವರದಿ ನೀಡಿದೆ.
ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆ, ಹವಾಮಾನ ಇಲಾಖೆ ಕೂಡಾ ಬಿಸಿ ಗಾಳಿ ಎಲ್ಲೆಡೆ ಬೀಸಲಿದ್ದು, ಬೆಂಗಳೂರಿಗರು ಇನ್ನಷ್ಟು ಬಿಸಿ ಸಹಿಸಿಕೊಳ್ಳಲು ಸಿದ್ಧರಾಗಬೇಕಿದೆ ಎಂದು ಎಚ್ಚರಿಸಿದೆ. [ಬಕೆಟ್ ನೀರಲ್ಲಿ ಸ್ನಾನ ಮಾಡಿ, ವಾರಕ್ಕೊಮ್ಮೆ ಗಾಡಿ ತೊಳೀರಿ.]
ಮೆಟ್ರೋ ರೈಲು, ಮೇಲ್ಸೇತುವೆ, ಅಂಡರ್ ಪಾಸ್, ಓವರ್ ಬ್ರಿಜ್ ಹೀಗೆ ಸಾರಿಗೆ ಸಂಪರ್ಕ, ಮೂಲ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡುತ್ತಿರುವ ಜಾರ್ಜ್ ಸಾಹೇಬ್ರು, ಪದ್ಮಾವತಿ ಮೇಡಂ ಅವರು ನೆರಳು ನೀಡುತ್ತಿದ್ದ ಮರಗಳಿಗೆ ಕೊಡಲಿ ಪೆಟ್ಟು ನೀಡಿದ್ದಾರೆ.
ಮುನ್ಸೂಚನೆ
ಫೆಬ್ರವರಿಯಲ್ಲೇ ತಾಪಮಾನ ಸರಾಸರಿ 38 ಡಿಗ್ರಿ ಸೆ. ದಾಖಲಾಗುವ ಸಾಧ್ಯತೆಯಿದ್ದು, ಮುಂದಿನ ಎರಡು ದಿನದಲ್ಲಿ 36 ಡಿಗ್ರಿ ಸೆ.ದಾಖಲಾಗುವ ನಿರೀಕ್ಷೆಯಿದೆ. ಮಾರ್ಚ್ - ಏಪ್ರಿಲ್ನಲ್ಲಿ 40 ಡಿಗ್ರಿ ಸೆ. ದಾಟಿದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರು ಹೇಳಿದ್ದಾರೆ.
ಕಳೆದ ವಾರದ ಬಿಸಿ ಬಿಸಿ ರಿಪೋರ್ಟ್
ಬೆಂಗಳೂರು ನಗರದಲ್ಲಿ ಫೆ.22ರಂದು ಗರಿಷ್ಠ ತಾಪಮಾನ 35.2 ಡಿಗ್ರಿ ಸೆ., ಗುರುವಾರ 35 ಡಿಗ್ರಿ ಸೆ. ದಾಖಲಾಗಿದೆ. 2016ರ ಫೆ.23ರಂದು 35.5 ಡಿಗ್ರಿ ಸೆ.ದಾಖಲಾಗಿತ್ತು. ಇದು ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ 3 ಡಿಗ್ರಿ ಸೆ. ಅಧಿಕ.ಕಳೆದ 10 ವರ್ಷಗಳಲ್ಲೇ ಈ ಅವಧಿಯಲ್ಲಿ ಸರಾಸರಿ ಇಷ್ಟು ಅಧಿಕ ತಾಪಮಾನ ಕಂಡಿಲ್ಲ ಸ್ಕೈಮೆಟ್ ಸಂಸ್ಥೆ ಹೇಳಿದೆ.
ಮಾರ್ಚ್ ಏಪ್ರಿಲ್ ನಲ್ಲಿ ಏನು ಕಥೆ
ಏಪ್ರಿಲ್ನಲ್ಲಿ ಸಾಮಾನ್ಯವಾಗಿ ಬೆಂಗಳೂರಿನ ಉಷ್ಣಾಂಶ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ಇರುತ್ತದೆ. 1931ರಲ್ಲಿ 38.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವುದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. ಆದರೆ, ಹವಾಮಾನ ಇಲಾಖೆ ಮಾಹಿತಿಯಂತೆ ಏಪ್ರಿಲ್ 24, 2016 ರಂದು ಬೆಂಗಳೂರಿನಲ್ಲಿ 39.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿ ಹೊಸ ಆತಂಕ ಮೂಡಿತು. ಆದರೆ, ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ
ಕರ್ನಾಟಕದ ಜನ ತತ್ತರಿಸಬೇಕಾಗುತ್ತದೆ
ಉಷ್ಣಾಂಶ ತೀವ್ರ ತೆರವಾಗಿ ಏರಿಕೆಯಾಗುತ್ತಿದ್ದರೂ ಮಳೆ ಬೀಳುವ ಸಾಧ್ಯತೆ ಕಡಿಮೆಯಿದೆ. ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ ಇದ್ದರೂ ಉತ್ತರ ಕರ್ನಾಟಕದ ಜನರಿಗೆ ಮಳೆ ಭಾಗ್ಯ ಸದ್ಯಕ್ಕೆ ಇಲ್ಲ.ಉತ್ತರ ಒಳನಾಡು, ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದ ಎಲ್ಲಡೆ ಉಷ್ಣಾಂಶ ಇನ್ನಷ್ಟು ಏರಿಕೆಯಾಗಲಿದೆ. ಇನ್ನೊಂದೆಡೆ ಜಲಾಶಯಗಳ ಮಟ್ಟ ಕುಸಿದಿದೆ. ಅಂತರ್ಜಲ ನಾಪತ್ತೆಯಾಗುತ್ತಿದೆ. ಹೀಗೆ ಮುಂದುವರಿದರೆ ಕರ್ನಾಟಕದ ಜನ ತತ್ತರಿಸಬೇಕಾಗುತ್ತದೆ