ಸೇನೆಗಾಗಿ ರೂ. 50 ಲಕ್ಷ ಸಂಗ್ರಹಿಸಿದ ಬೆಂಗಳೂರಿನ ಶಾಲೆ
ದೇಶದ ಭದ್ರತೆಗಾಗಿ ಪ್ರಾಣ ಪಣಕ್ಕಿಟ್ಟು ಗಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ರೂ.50 ಲಕ್ಷ ಹಣವನ್ನು ಸಂಗ್ರಹಿಸಿದ ಬೆಂಗಳೂರಿನ ಶಾಲೆ
ಬೆಂಗಳೂರು, ನವೆಂಬರ್, 17: ದೇಶ ಸೇವೆಯಲ್ಲಿ ಮಗ್ನರಾಗಿರುವ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ಬೆಂಗಳೂರಿನ ಶಾಲೆಯೊಂದು 50ಲಕ್ಷ ರೂ. ಹಣ ಸಂಗ್ರಹಿಸಿ ಸೇನೆಗೆ ಹಸ್ತಾಂತರಿಸಿದೆ.
ಗಡಿಯಲ್ಲಿ ದೇಶ ರಕ್ಷಣೆಗಾಗಿ ಅಹರ್ನಿಶ ಶ್ರಮಿಸುತ್ತಿರುವ ಸೈನಿಕರಿಗೆ ಸ್ಫೂರ್ತಿ ತುಂಬವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿಯಂದು ನೀಡಿದ ಕರೆಗೆ ಸ್ಪಂದಿಸಿ ಸೇನೆಗೆ ಹಣ ನೀಡಿರುವುದಾಗಿ ಶಾಲೆ ತಿಳಿಸಿದೆ.
ಇಲ್ಲಿಯ ಇಂದಿರಾನಗರದಲ್ಲಿ ಇರುವ ಹಾರಿಜನ್ ಎಜುಕೇಶನಲ್ ಇನ್ಸಿಟ್ಯೂಟ್ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಆಡಳಿತ ಮಂಡಳಿ ಒಟ್ಟಾಗಿ ಸೇರಿ ಈ ಮೊತ್ತದ ಹಣವನ್ನು ಸಂಗ್ರಹಿಸಿ ಸೇನೆಗೆ ತಲುಪಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಲೆಯ ಚೇರ್ಮನ್ ಮೋಹನ್ ಮಂಗಾನಿ ಅವರು "ದೇಶ ಸೇವೆಯಲ್ಲಿ ನಿರತರರಾಗಿರುವ ಸೈನಿಕರಿಗೆ ಸ್ಪೂರ್ತಿ ತುಂಬುವಂತಹ ಸಂದೇಶ ಕಳುಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು #Sandesh2Soldiers ಅಭಿಯಾನ ಆರಂಭಿಸಿದ್ದರು.
ಸೈನಿಕರ ಕುರಿತು ಮೋದಿ ಅವರು ಹೊಂದಿರುವ ಕಾಳಜಿಗೆ ಸ್ಪಂದಿಸಬೇಕೆಂದು ಹಣ ಸಂಗ್ರಹಿಸಿ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ಜನರಲ್ ಆಫೀಸರ್ ಕಮಾಂಡಿಗ್ ಮೇಜರ್ ಜನರಲ್ ಕೆ. ಎಸ್. ನಿಜ್ಜರ್ ಅವರಿಗೆ ಗುರುವಾರ ಹಸ್ತಾಂತರಿಸಿದ್ದೇವೆ ಎಂದು ತಿಳಿಸಿದರು.