ಬುಡಮೇಲಾದ ಸ್ಟೀಲ್ ಫ್ಲೈಓವರ್ ವಿರೋಧಿಗಳ ಹೋರಾಟ!
ಬೆಂಗಳೂರು, ಅಕ್ಟೋಬರ್ 21 : ಸಾವಿರದೆಂಟುನೂರು ಕೋಟಿ ರುಪಾಯಿ ಸುರಿದು ಸ್ಟೀಲ್ ಮೇಲ್ಸೇತುವೆ ನಿರ್ಮಿಸುತ್ತೇನೆಂದು ಪಟ್ಟುಹಿಡಿದಿರುವ ಸರಕಾರದ ಹಠದ ಮುಂದೆ, 'ಸ್ಟೀಲ್ ಫ್ಲೈಓವರ್ ಬೇಡ' ಅಂತ ಎಂಟು ಸಾವಿರ ಪರಿಸರ ಪ್ರೇಮಿಗಳು ನಡೆಸಿದ ಹೋರಾಟ, ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಬುಡಮೇಲಾದ ಮರದಂತೆ ಮಕಾಡೆ ಮಲಗಿದೆ!
ನವದೆಹಲಿಯ ಸಂಸತ್ತನ್ನೂ ತಲುಪುವಂತೆ ಬೆಂಗಳೂರಿನ ಜನತೆಯ ಒಕ್ಕೊರಲಿನಿಂದ ಕೂಗಿದ್ದು ಹಿತ್ತಾಳೆಯ ಕಿವಿಯ ರಾಜಕಾರಣಿಗಳಿಗೆ, ಸರಕಾರಿ ಅಧಿಕಾರಿಗಳಿಗೆ ಬಿದ್ದಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಿ ನಿರ್ಮಿಸುತ್ತಿರುವ 6.7 ಕಿ.ಮೀ. ಉದ್ದದ ಉಕ್ಕಿನ ಮೇಲ್ಸೇತುವೆಗೆ ಅದರ ಬೋರ್ಡ್ ಮೀಟಿಂಗ್ ನಲ್ಲಿ ಅನುಮತಿ ದಕ್ಕಿದೆ. [ಸ್ಟೀಲ್ ಫ್ಲೈಓವರ್ ಬೇಡ ಅನ್ನುವವರಿಗೆ ಹಿನ್ನಡೆ, ಮುಂದೇನು?]
ಬಿಡಿಎದ ಠಸ್ಸೆ ಸಿಕ್ಕಿದ್ದರಿಂದ, ಬಸವೇಶ್ವರ ಸರ್ಕಲ್ ನಿಂದ ಹೆಬ್ಬಾಳ ಮೇಲ್ಸೇತುವೆವರೆಗೆ ನಿರ್ಮಾಣವಾಗಲಿರುವ ದಾರಿಗುಂಟ ಇರುವ 812 ಮರಗಳು ಕೊನೆಯುಸಿರೆಳೆಯಲಿವೆ, ಹಾಗೆಯೆ ಬೆಂಗಳೂರಿನ ಜನತೆ ಉಸಿರುಗಟ್ಟಿಸುವಂತೆಯೂ ಮಾಡಲಿವೆ. ಕೆಲ ಪಾರಂಪರಿಕ ಕಟ್ಟಡಗಳು ಧರಾಶಾಯಿಯಾಗಲಿವೆ, ಅಂದದ ಗೋಲ್ಫ್ ಕ್ಲಬ್ ಅಂಗಾಂಗ ಕಳೆದುಕೊಳ್ಳಲಿದೆ.
ಇನ್ನಷ್ಟು ಜನರನ್ನು ಸೇರಿಸಿಕೊಂಡು ಬೃಹತ್ ಮೆರವಣಿಗೆ ಆಯೋಜಿಸಬೇಕು, ಜನಾಭಿಪ್ರಾಯ ಸಂಗ್ರಹಿಸಬೇಕು, ಬೆಂಗಳೂರಿನ ಅಂದ ಕಾಪಾಡುವ ಬಗ್ಗೆ ಚರ್ಚೆ ನಡೆಸಬೇಕು, ಕೊಡಲಿಯೇಟು ಬೀಳದಂತೆ ಹಗಲುರಾತ್ರಿ ಮರಗಳನ್ನು ಕಾಪಾಡಬೇಕು, ಸೆಲ್ಫಿ ತೆಗೆದುಕೊಂಡು ಜಾಗೃತಿ ಮೂಡಿಸಬೇಕು ಎಂಬಿತ್ಯಾದಿ ಕಾರ್ಯಕ್ರಮ ಹಾಕಿಕೊಂಡಿದ್ದ ಹೋರಾಟಗಾರ ಹುಮ್ಮಸ್ಸನ್ನು ಸರಕಾರ ಪಂಚರ್ ಮಾಡಿದೆ. [ಸಂಶಯ ಬಿಡಿ, ಉಕ್ಕು ಸೇತುವೆ ಯೋಜನೆ ಪಾರದರ್ಶಕ]
ಈ ಮಹತ್ವಾಕಾಂಕ್ಷೆಯ, ಜನರ ಪ್ರಯಾಣದ ಏಳು ನಿಮಿಷ ಉಳಿಸುವ ಉಕ್ಕಿನ ಮೇಲ್ಸೇತುವೆಯ ನಿರ್ಮಾಣದ ಹೊಣೆ ಹೊತ್ತಿರುವ ಕಾಂಟ್ರಾಕ್ಟರಿಗೆ ಅನುಮತಿ ಪತ್ರ ಇನ್ನೇನು ದೊರೆಯಲಿದೆ. ನವೆಂಬರ್ 1ರಂದು ಕನ್ನಡ ಬಾವುಟ ಹಾರುತ್ತಿದ್ದಂತೆ ಇಪ್ಪತ್ತಕ್ಕೂ ಹೆಚ್ಚು ಪ್ರಭೇದದ 812 ಮರಗಳು ಧರೆಗುರುಳಲಿವೆ, ಹಾದಿಯಲ್ಲಿರುವ ಕಟ್ಟಡಗಳು ನೆಲಸಮವಾಗಲಿವೆ.
ಈ ಪ್ರಾಜೆಕ್ಟಿಗೆ ಆದಷ್ಟು ಬೇಗನೆ ಅನುಮತಿ ದೊರೆಯಬೇಕೆಂದು ಸ್ವತಃ ಸಿದ್ದರಾಮಯ್ಯನವರು ಕೋರಿದ್ದರು. ಬಿಡಿಎ ನಿರ್ದೇಶಕರೂ, ಯಶವಂತಪುರದ ಶಾಸಕರೂ ಆಗಿರುವ ಸನ್ಮಾನ್ಯ ಎಸ್ ಟಿ ಸೋಮಶೇಖರ ಅವರು, ಸಾರ್ವಜನಿಕರ ಗೊಂದಲಗಳೇನೇ ಇದ್ದರೂ ಅವನ್ನು ಆದಷ್ಟು ಬೇಗ ನಿವಾರಿಸಬೇಕು ಎಂದು ಬಿಡಿಎ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. [ಸ್ಟೀಲ್ ಬ್ರಿಡ್ಜ್ ನಿರ್ಮಿಸಲು ದುಡ್ಡೆಲ್ಲಿಂದ ಬಂತು? ಎಚ್ಡಿಕೆ ಪ್ರಶ್ನೆ]
812 ಮರಗಳ ಬದಲಿಗೆ 60 ಸಾವಿರ ಮರಗಳನ್ನು ನೆಡುವುದಾಗಿ ಬಿಡಿಎ ವಾಗ್ದಾನ ನೀಡಿದೆ. ನಗರದ ಸೌಂದರ್ಯಕ್ಕೆ ಎಳ್ಳಷ್ಟೂ ಕುಂದುಕೊರತೆಯಾಗದಂತೆ, ಪಾರಂಪರಿಕ ಕಟ್ಟಡಗಳಿಗೆ ಹಾನಿಯಾಗದಂತೆ, ಸಂಚಾರಕ್ಕೆ ಎಳ್ಳಷ್ಟೂ ತೊಡಕಾಗದಂತೆ, ಜನಸಾಮಾನ್ಯರೂ ಬಳಸು ಅನುಕೂಲವಾಗುವಂತೆ ಸ್ಟೀಟ್ ಫ್ಲೈಓವರ್ ನಿರ್ಮಿಸುವುದಾಗಿ ಬಿಡಿಎ ಭಾಷೆ ನೀಡಿದೆ.