ರುದ್ರೇಶ್ ಕೊಲೆಯ ಕಾರಣ ಬಾಯ್ಬಿಟ್ಟ ಆರೋಪಿಗಳು!
ಬೆಂಗಳೂರು, ಅಕ್ಟೋಬರ್ 28: ಶಿವಾಜಿನಗರದ ಕಾಮರಾಜ್ ರಸ್ತೆಯಲ್ಲಿ ಅಕ್ಟೋಬರ್ 16ರಂದು ನಡೆದಿದ್ದ ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಸಸ್ವಿಯಾಗಿದ್ದಾರೆ. ಈ ಸಂಬಂಧ ಮೊಹಮ್ಮದ್ ಸಾದಿಕ್, ಮೊಹಮ್ಮದ್ ಮುಜಿಬುಲ್ಲಾ, ವಾಸೀಮ್ ಅಹ್ಮದ್ ಹಾಗೂ ಇರ್ಫಾನ್ ಪಾಷಾ ಎಂಬುವರನ್ನು ಬಂಧಿಸಲಾಗಿದೆ.
ರುದ್ರೇಶ್ ಕೊಲೆಗೆ ಎರಡು ಉದ್ದೇಶ ಇರುವುದು ಗೊತ್ತಾಗಿದೆ ಎಂದು ತನಿಖಾ ತಂಡದ ಮೂಲಗಳು ಮಾಹಿತಿ ನೀಡಿವೆ. ಎರಡು ಘಟನೆಗಳು ಅರೋಪಿಗಳಿಗೆ ಸಿಟ್ಟು ತರಿಸಿತ್ತು ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ. ಆರೋಪಿಗಳ ಪೈಕಿ ಒಬ್ಬ ವರ್ಕ್ ಶಾಪ್ ನಡೆಸುತ್ತಿದ್ದ. ರುದ್ರೇಶ್ ತಮ್ಮ ಬೈಕ್ ನ ಸರ್ವೀಸ್ ಗಾಗಿ ಅಲ್ಲಿಯೇ ನೀಡುತ್ತಿದ್ದರು.[ರುದ್ರೇಶ್ ಹತ್ಯೆ, ಬೆಂಗಳೂರಲ್ಲಿ ನಾಲ್ವರ ಬಂಧನ]
ಒಂದು ದಿನ ಬೈಕ್ ನ ಟೆಸ್ಟ್ ರೈಡ್ ಗೆ ತೆಗೆದುಕೊಂಡು ಹೋಗಿದ್ದ ಮೆಕ್ಯಾನಿಕ್, ಪಾದಚಾರಿಯೊಬ್ಬರಿಗೆ ಗುದ್ದಿದ್ದ. ಆ ಸಂದರ್ಭದಲ್ಲಿ ಗಲಾಟೆಯಾಗಿತ್ತು. ಆದರೆ ಪೊಲೀಸರಿಗೆ ರುದ್ರೇಶ್ ನ ಹೆಸರು ಹೇಳಿದ್ದ ಮೆಕ್ಯಾನಿಕ್. ಆ ಕಾರಣಕ್ಕೆ ದ್ವೇಷ ಬೆಳೆದಿತ್ತು. ಜತೆಗೆ ರಾಜಕೀಯದಲ್ಲಿದ್ದ ರುದ್ರೇಶ್ ಗೋ ಸಾಗಣೆ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಕೆಲವು ಕಸಾಯಿ ಖಾನೆಗಳನ್ನು ಮುಚ್ಚಿಸಿದ್ದರು. ಆ ಕಾರಣದಿಂದಲೂ ಸಿಟ್ಟಿತ್ತು.
ಯಾವುದೇ ತನಿಖೆಯಲ್ಲಿ ಅಪರಾಧ ಸಂಭವಿಸಿದ ಮೊದಲ ನಲವತ್ತೆಂಟು ಗಂಟೆಯನ್ನು ಸುವರ್ಣ ಸಮಯ ಅಂತಾರೆ. ದೇಶದ ವಿವಿಧ ತನಿಖಾಧಿಕಾರಿಗಳು ಹೇಳುವ ಪ್ರಕಾರ, ಮೊದಲ ನಲವತ್ತೆಂಟು ಗಂಟೆಯಲ್ಲಿ ಪ್ರಕರಣ ಭೇದಿಸುವುದಕ್ಕೆ ಆಗಲಿಲ್ಲ ಅಂದರೆ ತನಿಖೆ ವಿಳಂಬವಾಗುತ್ತದೆ ಅಥವಾ ತಪ್ಪಿತಸ್ಥರನ್ನು ಹಿಡಿಯೋಕೆ ಆಗಲ್ಲ.[ಕೇರಳದ ಸುಪಾರಿ ಕಿಲ್ಲರ್ಸ್ ಗಳಿಂದ ರುದ್ರೇಶ್ ಹತ್ಯೆ ಶಂಕೆ?]
ರುದ್ರೇಶ್ ಕೊಲೆ ಪ್ರಕರಣದಲ್ಲಿ ಮೊದಲ ಸುಳಿವು ಇಪ್ಪತ್ನಾಲ್ಕು ಗಂಟೆಯೊಳಗಾಗಿ ಪೊಲೀಸರಿಗೆ ಸಿಕ್ಕಿತ್ತು. ಸಿಸಿಟಿವಿ ಫೂಟೇಜ್ ಸ್ಪಷ್ಟವಾಗಿಲ್ಲದಿದ್ದರೂ ಬೈಕ್ ನಲ್ಲಿದ್ದ ವ್ಯಕ್ತಿಯೊಬ್ಬನನ್ನು ಕಾನ್ ಸ್ಟೇಬಲ್ ನೋಡಿರುವುದಾಗಿ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದರು. ಎಲ್ಲವನ್ನೂ ಪರಾಂಬರಿಸಿದ ನಂತರ ತಂಡವನ್ನು ತಂದುಬಿಟ್ಟಿದ್ದು ಸರಿಯಾದ ವ್ಯಕ್ತಿಯ ಹತ್ತಿರ. ಆತ ಇತರ ಮೂವರ ಹೆಸರನ್ನು ಬಾಯಿಬಿಟ್ಟ. ಆ ಮೂಲಕ ಎಲ್ಲರನ್ನೂ ಬಂಧಿಸಲಾಯಿತು.