4 ಮರದ ಪ್ರಾಣ ಉಳಿಸಲು ಸರ್ಜಾಪುರದಲ್ಲಿ ಸಾರ್ವಜನಿಕರಿಂದ 3 ಲಕ್ಷ ಸಂಗ್ರಹ
ಬೆಂಗಳೂರಿನ ಸರ್ಜಾಪುರದಲ್ಲಿ ನಾಲ್ಕು ಮರಗಳನ್ನು ಉಳಿಸುವ ಸಲುವಾಗಿ ಸಾರ್ವಜನಿಕವಾಗಿ ಮೂರು ಲಕ್ಷ ರುಪಾಯಿ ಸಂಗ್ರಹಿಸಲಾಗಿದೆ. ಮಾದರಿ ಎನಿಸುವಂಥ ಕೆಲಸ ಮಾಡಿರುವುದರ ವಿವರ ಇಲ್ಲಿದೆ
ಬೆಂಗಳೂರು, ಮೇ 13: ಇಂಥದೊಂದು ಘಟನೆಗೆ ನಾವೆಲ್ಲರೂ ಸಾಕ್ಷಿ ಆಗುತ್ತಿದ್ದೇವೆ ಎಂಬುದೇ ಹೆಮ್ಮೆ. ಮರಗಳಿಗೆ ಕೊಡಲಿ ಹಾಕ್ತಾರೆ ಎಂದು ಮರಗುತ್ತೇವೆ, ಪ್ರತಿಭಟಿಸುತ್ತೇವೆ, ಹೋರಾಟದ ಎಚ್ಚರಿಕೆಯನ್ನು ನೀಡುತ್ತೇವೆ, ದೂರು ಹೇಳಿಕೊಳ್ಳುತ್ತೇವೆ..ಇವೆಲ್ಲವೂ ಕಾಳಜಿಯೇ. ಆದರೆ ಬೆಂಗಳೂರಿನ ಸರ್ಜಾಪುರದಲ್ಲಿ ಜನರೆಲ್ಲ ಸೇರಿ ಹಣ ಒಗ್ಗೂಡಿಸಿ, ಮರದ ಸ್ಥಳಾಂತರ ಮಾಡುತ್ತಿದ್ದಾರೆ. ಈ ಬಗ್ಗೆ ದ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಸರ್ಜಾಪುರದಲ್ಲಿ ರಸ್ತೆ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಇದರಲ್ಲಿ ಕೆಲ ಮರಗಳನ್ನು ಕಡಿದು ಹಾಕಲಾಗುತ್ತದೆ ಎಂದು ಗೊತ್ತಾದ ತಕ್ಷಣ ಸರ್ಜಾಪುರ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ ನವರು ಕಳೆದ ತಿಂಗಳು ಆನ್ ಲೈನ್ ಮೂಲಕ ಸಾರ್ವಜನಿಕ ಹಣ ಸಂಗ್ರಹ ಅಭಿಯಾನಕ್ಕೆ ಮುಂದಾದರು.[ಕೊಡಲಿಯೇಟಿಗೆ ಸಿದ್ಧವಾಗಿದ್ದ ಮರಗಳಿಗೆ ಮರುಜೀವ!]
"ನಾವು ಆನ್ ಲೈನ್ ಅಭಿಯಾನದ ಮೂಲಕ ಮೂರು ಲಕ್ಷ ರುಪಾಯಿ ಹಣ ಸಂಗ್ರಹಿಸಿದೆವು.ಮೊದಲಿಗೆ ಮೂರು ಮರವನ್ನು ಸ್ಥಳಾಂತರಿಸಬೇಕು ಅಂದುಕೊಂಡಿದ್ದೆವು. ಅದರೆ ಈಗ ನಾಲ್ಕು ಮರ ಸ್ಥಳಾಂತರಿಸುತ್ತಿದ್ದೇವೆ" ಎಂದು ವೆಲ್ಫೇರ್ ಅಸೋಸಿಯೇಷನ್ ನ ಅಧ್ಯಕ್ಷ ಹಗದೀಶ್ ತಿಳಿಸಿದ್ದಾರೆ.
ಚೆನ್ನೈ ಮೂಲದ ಜಯಂ ಲ್ಯಾಂಡ್ ಸ್ಕೇಪ್ ನವರು ಮರ ಸ್ಥಳಾಂತರ ಮಾಡುತ್ತಿದ್ದಾರೆ. ಮೂರು ಮರವನ್ನು ಒಂದು ಶಾಲೆ ದತ್ತು ತೆಗೆದುಕೊಂಡಿದೆ. ಒಂದನ್ನು ಅದೇ ಬಡಾವಣೆಯ ಅಸೋಸಿಯೇಷನ್ ವೊಂದು ದತ್ತು ಪಡೆದಿದೆ. ಶಾಲೆ ಹಾಗೂ ವಸತಿ ಸಮುಚ್ಚಯದಲ್ಲಿ ಮರಗಳನ್ನು ಮತ್ತೆ ನೆಡಲಾಗುತ್ತದೆ ಎಂದು ಜಗದೀಶ್ ತಿಳಿಸಿದ್ದಾರೆ.[ಕಂಬದ ಮೇಲೊಂದು ಗಿಡವ ನೆಟ್ಟು.. ಏನಿದು 'ವರ್ಟಿಕಲ್ ಗಾರ್ಡನ್'?]
ಸ್ಥಳಾಂತರ ಪ್ರಕ್ರಿಯೆಗೆ ಶುಕ್ರವಾರ ಚಾಲನೆ ಸಿಕ್ಕಿತು. ಶನಿವಾರ ಬೆಳಗ್ಗೆ ಅವುಗಳ ಬೇರು ಸಮೇತ ಸ್ಥಳಾಂತರಕ್ಕೆ ಸಿದ್ಧತೆ ನಡೆಯಿತು. ಮರದ ಸುತ್ತ ಹಳ್ಳ ಅಗೆದು, ಬೇರಿಗೆ ರಾಸಯನಿಕಗಳನ್ನು ಹಾಕಿ, ಗೋಣಿಚೀಲದಿಂದ ಮುಚ್ಚಲಾಯಿತು. "ಅರಣ್ಯ ಇಲಾಖೆ ಹಾಗೂ ಬಿಬಿಎಂಪಿಯವರೂ ನಮಗೆ ಸಹಾಯ ಮಾಡಿದ್ದಾರೆ" ಎಂದು ಸ್ಥಳೀಯರು ತಿಳಿಸಿದ್ದಾರೆ.