"ಕನ್ಹಯ್ಯ ಕುಮಾರ್ಗೆ ನಾವೆಲ್ಲ ಧನ್ಯವಾದ ಅರ್ಪಿಸಬೇಕು"!
ಬೆಂಗಳೂರು, ಫೆಬ್ರವರಿ 24 : "ಮತಾಂತರದ ಚಿಂತನೆಯನ್ನು ಹೊತ್ತು ತಿರುಗುವ ಮಂದಿಗೆ ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ಮೊದಲು ಪತ್ತೆ ಮಾಡಬೇಕು. ಕೇಂದ್ರ ಸರ್ಕಾರ ಸಹ ಈ ಬಗ್ಗೆ ಗಮನ ಹರಿಸಬೇಕು" ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ದೇಶದಲ್ಲಿ ಹೆಚ್ಚಿಕೊಂಡಿರುವ ಜೆಎನ್ ಯು, ಕಾಶ್ಮೀರ ಪ್ರತ್ಯೇಕತಾ, ಅಸಹಿಷ್ಣುತೆ ವಿವಾದದ ಬಗ್ಗೆಯೂ ಸೂಲಿಬೆಲೆ ಮಾತನಾಡಿದರು. ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಘೋಷಣೆಗಳ ನಡುವೆ ಸೂಲಿಬೆಲೆ ಅನೇಕ ವಿಚಾರಗಳನ್ನು ಮಂಡಿಸಿದರು. [ದೇಶದ್ರೋಹಿಗಳೇ ಭಾರತ ಬಿಟ್ಟು ತೊಲಗಿ]
ಬೆಂಗಳೂರಿನ ಸೌತ್ ಎಂಡ್ ವೃತ್ತದಿಂದ ಬುಧವಾರ ಬೆಳಗ್ಗೆ ಆರಂಭವಾದ 'ದೇಶದ್ರೋಹಿಗಳೇ ಭಾರತ ಬಿಟ್ಟು ತೊಲಗಿ' ಎಂಬ ಕಾಲ್ನಡಿಗೆ ಜಾಥಾ ಪುರಭವನದ ಎದುರು ಸಮಾವೇಶಗೊಂಡಿತು. ಮಾಜಿ ಸೈನಿಕರು, ವಿವಿಧ ಕ್ಷೇತ್ರಗಳ ಉದ್ಯೋಗಿಗಳು, ವಿದ್ಯಾರ್ಥಿಗಳು, ಜನರು ಜಾಥಾದಲ್ಲಿ ಭಾಗವಹಿಸಿದ್ದರು.
"ನಾವು ಭಾರತದೊಂದಿಗೆ ಇದ್ದೇವೆ,, ದೇಶದ್ರೋಹಿಗಳನ್ನು ವಿರೋಧಿಸುತ್ತೇವೆ" ಎಂಬ ಘೋಷವಾಕ್ಯದಡಿ ಶನಿವಾರ ಫೆಬ್ರವರಿ 27 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಯಲಿದ್ದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಲಿದ್ದಾರೆ ಎಂದು ಸೂಲಿಬೆಲೆ ತಿಳಿಸಿದರು.
ನಾವು ದೇಶದ ಪರ
ನಾವು ಯಾರ ಪರ ಎಂಬ ವ್ಯರ್ಥವಾದ ಹುಡುಕುವ ಅಗತ್ಯವಿಲ್ಲ. ನಾವು ದೇಶದ ಪರ, ಭಾರತದ ಪರ. ಭಾರತವನ್ನು ಒಡೆಯುವ ಶಕ್ತಿಗಳನ್ನು ವಿರೋಧಿಸುವುದೇ ನಮ್ಮ ಗುರಿ ಅದೇ ನಮ್ಮ ಧ್ಯೇಯ ಎಂದು ಸೂಲಿಬೆಲೆ ಹೇಳಿದರು.
ಚಿಂತನೆ ಇಂದಿನದ್ದಲ್ಲ
ಜವಾಹರಲಾಲ್ ನೆಹರು ವಿವಿಯಲ್ಲಿ ದೇಶ ವಿರೋಧಿ ಚಿಂತನೆ ಇಂದು ಹುಟ್ಟಿಕೊಂಡಿದ್ದಲ್ಲ. ಇದಕ್ಕೆ ಸುಮಾರು 35 ರಿಂದ 40 ವರ್ಷದ ಇತಿಹಾಸವೇ ಇದೆ. ಆದರೆ ದೇಶದ ನಾಗರಿಕ ಇದನ್ನು ಸಹಿಸಲ್ಲ ಎಂಬುದು ಅವರಿಗೆ ಗೊತ್ತಿರಬೇಕು ಎಂದು ಹೇಳಿದರು.
ಧನ್ಯವಾದ ಸಲ್ಲಿಸೋಣ!
ಒಬ್ಬ ಕನ್ಹಯ್ಯ ಕುಮಾರ್, ಒಬ್ಬ ರೋಹಿತ್ ವೇಮುಲ ಅವರಿಗೆ ನಿಜಕ್ಕೂ ಧನ್ಯವಾದ ಸಲ್ಲಿಕೆ ಮಾಡಬೇಕು. ನಮ್ಮ ಒಳಗೆ ಹುದುಗಿದ್ದ ದೇಶ ಪ್ರೇಮವನ್ನು ಅವರೇ ಹೊರಕ್ಕೆ ತಂದರು. ರಾಷ್ಟ್ರಪ್ರೇಮ ಜಾಗೃತಿ ಮಾಡಿದವರಿಗೆ ಧನ್ಯವಾದ ಎಂದು ಸೂಲಿವಬೆಲೆ ಹೇಳಿದರು.
ದಲಿತರಲ್ಲೇ ಬಿರುಕು
ದಲಿತರಲ್ಲೇ ಬಿರುಕು ಮೂಡಿಸಿ ಅದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಇದು ನಮ್ಮ ಮುಂದಿರುವ ನಿಜವಾದ ಸವಾಲು. ಸಮಾಜ ಒಡೆಯುವವರ ವಿರುದ್ಧ ಸದಾ ಜಾಗೃತವಾಗಿರಬೇಕು ಎಂದು ಹೇಳಿದರು.
ಪ್ರತ್ಯೇಕವಾದ ಸಹಿಸಲ್ಲ
ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಭಂಗ ತರುವ ವಿಚಾರಗಳನ್ನು ಯಾವ ದೇಶ ಪ್ರೇಮಿಯೂ ಸಹಿಸಲ್ಲ. ಭಾರತ ಹೇಗೆ ಇರಲಿ ದೇಶವನ್ನು ನಾವು ಪ್ರೀತಿಸುತ್ತಲೇ ಇರುತ್ತೆವೆ. ಇದು ನನ್ನ ದೇಶ ಎಂದು ಸೂಲಿಬೆಲೆ ಹೇಳಿದರು.
ಸ್ವಯಂ ಪ್ರೇರಿತರಾಗಿ ಬಂದಿದ್ದರು
ಪ್ರತಿಭಟನಾ ಮೆರವಣಿಗೆ ವಿದ್ಯಾರ್ಥಿಗಳು ಮತ್ತು ನಾಗರಿಕರು ಸ್ವಯಂ ಪ್ರೇರಿತವಾಗಿ ಬಂದಿದ್ದು ವಿಶೇಷ. ಅಲ್ಲದೇ ಶಾಂತಿಯುತವಾಗಿ ಕುಳಿತು ದೇಶದ್ರೋಹಿಗಳ ವಿರುದ್ಧ ಘೋಷಣೆ ಕೂಗಿ ತೆರಳಿದರು.
ಜೆಸಿ ರಸ್ತೆ ಜಾಮ್
ಸೌತ್ ಎಂಡ್ ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪುರಭವನದ ವರೆಗೂ ಸಾಗಿತು. ಮೆರವಣಿಗೆ ಪರಿಣಾಮ ಬೆಳಗ್ಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
|
ದೇಶ ಒಡೆಯುವರನ್ನು ನಾವು ಬಡಿಯುತ್ತೇವೆ
ಪುರಭವನದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಲ್ ರಾಜನ್ "ದೇಶವನ್ನು ಒಡೆಯಲು ಮುಂದಾದರೆ, ನಾವು ಅವರನ್ನು ಬಡಿದು ಹಾಕುತ್ತೇವೆ" ಎಂದು ಆಕ್ರೋಶ ಬರಿತರಾಗಿ ಹೇಳಿದರು.