ಲಕ್ಷಾಂತರ ಮೌಲ್ಯ ಚಿನ್ನ ದೋಚಿದ್ದ ಕುಖ್ಯಾತ ಕಳ್ಳನ ಬಂಧನ
ಬೆಂಗಳೂರು, ಅಕ್ಟೋಬರ್, 08 : ಮನೆಯ ಬೆಲೆಬಾಳುವ ವಸ್ತುಗಳನ್ನು ಅಪಹರಿಸುತ್ತಿದ್ದ ಕುಖ್ಯಾತ ಕಳ್ಳ ಬುಧವಾರ ಪೊಲೀಸರ ಅತಿಥಿಯಾಗಿದ್ದಾನೆ. ಖದೀಮನನ್ನು ಬಂಧಿಸಿದ ಪೊಲೀಸರು ಆತನಿಂದ 7ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ. ಈತ ಮನೆಯಲ್ಲಿ ಯಾರು ಇಲ್ಲದಿರುವುದನ್ನು ನೋಡಿ ಈ ಕೃತ್ಯ ಎಸಗುತ್ತಿದ್ದ.
ಕುಮಾರ ಸ್ವಾಮಿ ಲೇ ಔಟ್ ನಿವಾಸಿ ಸೈಯ್ಯದ್ ಅಹ್ಮದ್ (28) ಕಳ್ಳತನ ಮಾಡಿದ ಆರೋಪಿ. ಮನೆಯ ಮಂದಿ ಬೀಗ ಹಾಕಿ ಹೊರಗೆ ಹೋಗುತ್ತಿರುವುದನ್ನೇ ಕಾಯುತ್ತಿದ್ದ ಈತ ಮನೆಯ ಬೀಗ ಒಡೆದು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ.[ಕಳ್ಳತನ ಬಯಲು ಮಾಡಿದ ಕಳ್ಳಿಯ ಸೆಲ್ಫಿ ಹುಚ್ಚು]
ಅಹಮದ್ ಇದುವರೆಗೂ 7ಲಕ್ಷ ಬೆಲೆಬಾಳುವ 241 ಗ್ರಾಂ ಚಿನ್ನದ ಒಡವೆಗಳು, ಎಲ್.ಸಿ.ಡಿ, ಟಿ.ವಿ, ಕೈಗಡಿಯಾರಗಳು, ಬಟ್ಟೆಗಳನ್ನು ಕದಿಯುತ್ತಿದ್ದ ಎಂದು ಪೊಲೀಸರು ಕೈಗೊಂಡ ತನಿಖೆಯಿಂದ ದೃಢಪಟ್ಟಿದೆ.
ಕಳ್ಳತನ ಕುರಿತಾಗಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 454, 380ರ ಅಡಿಯಲ್ಲಿ ದೂರು ದಾಖಲಾಗಿದ್ದು, ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಮಾರ್ಗದರ್ಶನಲ್ಲಿ ಶೋಧಕಾರ್ಯ ಆರಂಭಿಸಿದ ಪೊಲೀಸ್ ತಂಡ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.