ಬೆಂಗಳೂರಿಗೆ ತೈಲ ಸಾಗಾಟ ಬಂದ್ ಮಾಡಿದ್ದು ಯಾಕೆ?
ಬೆಂಗಳೂರು, ಏಪ್ರಿಲ್, 05: ಒಂದೆಡೆ ಪೆಟ್ರೋಲ್ ದರ ಏರಿಕೆ, ಇನ್ನೊಂದೆಡೆ ಪ್ರತಿಭಟನೆ ವಾಹನ ಸವಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬೆಂಗಳೂರು ಮಹಾನಗರದ ಎಲ್ಲ ಬಂಕ್ ಗಳ ಮುಂದೆ ಮಧ್ಯರಾತ್ರಿಯಿಂದಲೇ ದ್ವಿಚಕ್ರ ವಾಹನಗಳು ಸಾಲುಗಟ್ಟಿ ನಿಂತಿವೆ.
ದರ ಏರಿಕೆ ಮಾಡಿದ್ದ ಶಾಕ್ ನಿಂದಲೇ ಚೇತರಿಸಿಕೊಳ್ಳದ ಜನರಿಗೆ ಪ್ರತಿಭಟನೆ ಹೊಸ ತಲೆನೋವು ತಂದಿದೆ. ಮೂಲಸೌಕರ್ಯಗಳಿಗೆ ಒತ್ತಾಯಿಸಿ ತೈಲ ಸಾಗಣೆ ಟ್ಯಾಂಕರ್ಗಳ ಚಾಲಕರು ಮತ್ತು ಕ್ಲೀನರ್ಗಳು ಧರಣಿ ಆರಂಭಿಸಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಪೆಟ್ರೋಲ್-ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ.[ಬೆಲೆ ಹೆಚ್ಚಳ, ಬೆಂಗಳೂರಲ್ಲಿ ಇಂದು ಪೆಟ್ರೋಲ್,ಡೀಸೆಲ್ ಸಿಗೋಲ್ಲ?]
ಲೀಟರ್ ಪೆಟ್ರೋಲ್ ಹೆ ಕಳದ ಬಾರಿ 3 ರು. ಹೆಚ್ಚಿಸಿದ್ದ ಕೇಂದ್ರ ಸರ್ಕಾರ ಈ ಬಾರಿ 2 ರು. ಹೆಚ್ಚಿಗೆ ಮಾಡಿದೆ. ಇತ್ತ ರಾಜ್ಯ ಸರ್ಕಾರದ ಹೆಚ್ಚುವರಿ ಅಬಕಾರಿ ಸುಂಕವೂ ಜಾರಿಗೆ ಬಂದಿದೆ. ಒಟ್ಟಿನಲ್ಲಿ ಕಳೆದ 15ನ ದಿನಗಳ ಅವಧಿಯಲ್ಲಿ ಲೀಟರ್ ಪೆಟ್ರೋಲ್ ಗೆ 7 ರು. ಹೆಚ್ಚಾದಂತೆ ಆಗಿದೆ.
ಬೇಡಿಕೆಗಳೇನು?
ಟ್ಯಾಂಕರ್ ಚಾಲಕರು ತಮ್ಮ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟಿದ್ದಾರೆ. ಪೆಟ್ರೋಲಿಯಂ ಕಂಪನಿಗಳು ಪ್ರತಿ ಕಿಲೋಮೀಟರ್ ಟ್ಯಾಂಕರ್ ಬಾಡಿಗೆ ದರವನ್ನು ಹೆಚ್ಚಳ ಮಾಡಬೇಕು.
ರಸ್ತೆ ದುರಸ್ತಿ
ಹೊಸಕೋಟೆ-ದೇವರಗುಂದಿ ಮಾರ್ಗದ ರಸ್ತೆ ಆಧುನೀಕರಣಗೊಳಿಸಬೇಕು. ದೇವನಹಳ್ಳಿ ಮತ್ತು ಹೊಸಕೋಟೆಯಲ್ಲಿರುವ ಪೆಟ್ರೋಲ್ ಟ್ಯಾಂಕರ್ ಟರ್ವಿುನಲ್ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟಡನೆ ಆರಂಭಿಸಿದ್ದಾರೆ.
ಪರಿಸ್ಥಿತಿ ಬಿಗಡಾಯಿಸಲಿದೆ
ಮಹಾನಗರಕ್ಕೆ ಪ್ರತಿದಿನ 500 ರಿಂದ 600 ಟ್ಯಾಂಕರ್ ಪೆಟ್ರೋಲ್ ಮತ್ತು ಡೀಸೆಲ್ ಅಗತ್ಯವಿದೆ. ಆದರೆ ಏಪ್ರಿಲ್ 4 ರಂದು ಬಂದಿದ್ದು 60 ರಿಂದ 70 ಟ್ಯಾಂಕರ್ ಇಂಧನ. ಹೀಗೆ ಪ್ರತಿಭಟನೆ ಮುಂದುವರಿದರೆ ಪರಿಸ್ಥಿತಿ ಬಿಗಡಾಯಿಸುವುದರಲ್ಲಿ ಅನುಮಾನವಿಲ್ಲ.
ಪರಿಹಾರವೇನು
ರಾಜ್ಯ ಸರ್ಕಾರ ಮತ್ತು ಲಾರಿ ಮಾಲೀಕರ ಸಂಘ ಚಾಲಕರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಲ್ಪಿಸಿಕೊಡಲು ಮುಂದಾದರೆ ಮಹಾನಗರಕ್ಕೆ ಒದಗಬಹುದಾದ ತೈಲ ಕೊರತೆಯನ್ನು ತಡೆಯಬಹುದು.