ಪಟಾಲಮ್ಮದೇವಿ ಮಹೋತ್ಸವಕ್ಕೆ ಬೆಂಗಳೂರು ಸಜ್ಜು
ಬೆಂಗಳೂರು, ಜೂನ್, 06: ಬೆಂಗಳೂರಿನ ಕನಕನ ಪಾಳ್ಯದ ದೇವಾಲಯಗಳ ಸಮುಚ್ಚಯದ ಬಳಿ ಕನಕನ ಪಾಳ್ಯ, ಸಿದ್ದಾಪುರ, ಯಡಿಯೂರು, ಬೈರಸಂದ್ರ, ನಾಗಸಂದ್ರ ಬಡಾವಣೆಗಳ ಗ್ರಾಮ ದೇವತೆ " ಪಟಾಲಮ್ಮ ದೇವಿ ಮಹೋತ್ಸವ" ಜೂನ್ 8 ರಂದು ಜರುಗಲಿದೆ.
ಧಾರ್ಮಿಕ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ರಾಜ್ಯದ ಮೂಲೆಗಳಿಂದ 25 ಕಲಾತಂಡಗಳು ಆಗಮಿಸಲಿದ್ದು 300 ಜನ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಬಡಾವಣೆಗಳ ಸುಮಂಗಲಿಯರು ಪಟಾಲಮ್ಮ ದೇವಿಯ ಹೂವಿನ ಪಲ್ಲಕ್ಕಿ ಉತ್ಸವದಲ್ಲಿ ಪಲ್ಲಕ್ಕಿ ಹೊತ್ತು ಸಾಗಲಿದ್ದಾರೆ.[ಪಟಾಲಮ್ಮದೇವಿ ಗ್ರಾಮೋತ್ಸವ ಕಂಡವರೇ ಧನ್ಯರು]
ಸೌತ್ ಎಂಡ್ ವೃತ್ತದ ಬಳಿ ಇರುವ ಅನೆಬಂಡೆಯ ಮುಂಭಾಗದ ಪುರಾತನ ದೇವಾಲಯ ಪಟಾಲಮ್ಮ ದೇವಿಯ ಮೂಲ ದೇವಸ್ಥಾನ. ಇತಿಹಾಸವನ್ನು ಹೊಂದಿದೆ. ನೆಲಮಟ್ಟದಿಂದ ಕೆಳಗಿರುವ ಉದ್ಭವ ಮೂರ್ತಿಗಳಾದ ಮಹಾಕಾಳಿ, ಲಕ್ಷ್ಮಿ ಹಾಗೂ ಸರಸ್ವತಿ ದೇವತೆಗಳ ರೂಪವೇ ಪಟಾಲಮ್ಮ(ಪಾತಾಳದಮ್ಮ) ಎಂಬ ಪ್ರತೀತಿ ಇದೆ.
ಕನಕಪಾಳ್ಯ, ಸಿದ್ದಾಪುರ, ಯಡಿಯೂರು, ಭೈರಸಂದ್ರ ಹಾಗೂ ನಾಗಸಂದ್ರ ಎಂಬ ಐದು ಗ್ರಾಮಗಳ ಜನತೆ ಪ್ರತಿ ಮೂರು ವರ್ಷಕ್ಕೊಮ್ಮೆ ಪಟಾಲಮ್ಮ ದೇವಿಯ ಉತ್ಸವವನ್ನು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸುತ್ತಾರೆ.