ಬೆಂಗಳೂರುː ನಕಲಿ ಪೊಲೀಸ್, ಅಸಲಿ ಸರಗಳ್ಳಿ ಬಂಧನ
ಬೆಂಗಳೂರು, ನ. 23 : ಈಕೆ ಅಂತಿಂಥ ಕಳ್ಳಿಯಲ್ಲ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದಿಂದ ಬೆಂಗಳೂರು ತತ್ತರಿಸಿದ್ದರೆ ಅದನ್ನೇ ಆಧಾರವನ್ನಾಗಿಟ್ಟುಕೊಂಡು ಗಂಡಸರನ್ನು ದೋಚುತ್ತಿದ್ದ ಚಾಲಾಕಿ ಮಹಿಳೆ ಸುಬ್ರಮಣ್ಯಪುರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಇಂದಿರಾನಗರದ 2 ನೇ ಕ್ರಾಸ್ ನಿವಾಸಿ ಆಶಾ ಅಲಿಯಾಸ್ ಸೌಂದರ್ಯ (36) ಬಂಧಿತ ಸರಗಳ್ಳಿ. ಆಶಾಳಿಂದ 10 ಲಕ್ಷ ರೂ. ಮೌಲ್ಯದ ಚಿನ್ನಾರಣ, ಕಾರು ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.[ಡಾ.ರಾಜ್ ಪ್ರತಿಮೆ ಸ್ಥಾಪಿಸಿದವರೆ ಬೆಂಕಿ ಇಟ್ಟರುǃ]
ಬೆಳಗ್ಗೆ ವಾಯುವಿಹಾರಕ್ಕೆ ತೆರಳುತ್ತಿದ್ದ ಗಂಡಸರೇ ಇವಳ ಗುರಿ. ಈಕೆ ಮಹಿಳೆಯರ ಸರ ಅಪಹಿರಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಸ್ವಲ್ಪ ವಯಸ್ಸಾದಮ ಪುರುಷರನ್ನು ನಿಲ್ಲಿಸಿ 'ನಾನು ಪೊಲೀಸ್ ಅಧಿಕಾರಿ, ಮಫ್ತಿಯಲ್ಲಿ ಬಂದಿದ್ದೇನೆ, ನೀವು ಹುಡುಗಿಯರನ್ನು ಚುಡಾಯಿಸುತ್ತಿದ್ದೀರಿ ಎಂಬ ದೂರು ಬಂದಿದೆ, ನನ್ನ ಜತೆ ಠಾಣೆಗೆ ಬನ್ನಿ' ಎಂದು ಕರೆದೊಯ್ಯುತ್ತಿದ್ದಳು. ಸ್ವಲ್ಪ ದೂರ ತೆರಳಿದ ನಂತರ ಬೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು.
ಆಭರಣ ದೋಚಲು ಇನ್ನೊಂದು ಮಾರ್ಗವನ್ನು ಹುಡುಕಿಕೊಂಡಿದ್ದಳು. ರಸ್ತೆ ಬದಿ ನಿಂತು ಡ್ರಾಪ್ ಕೇಳುವ ನೆಪದಲ್ಲಿ ಪುರುಷರ ಬೈಕ್ ಏರುತ್ತಿದ್ದ ಆಶಾ, ಸ್ವಲ್ಪ ದೂರ ತೆರಳಿದ ನಂತರ ನೀನು ನನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದೀಯಾ, ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಬೆದರಿಸಿ ಹಣ ಹಾಗೂ ಚಿನ್ನದ ಒಡವೆ ದೋಚುವುದನ್ನು ಕರಗತ ಮಾಡಿಕೊಂಡಿದ್ದಳು.[ಯುವತಿ ತೊಡೆ ಮೇಲಿದ್ದ ಟ್ಯಾಟೂ ಕ್ಲಿಕ್ಕಿಸಿದ!]
ಈಕೆ ಬಂಧನದಿಂದ ಚೆನ್ನಮ್ಮನಕೆರೆ ಅಚ್ಚುಕಟ್ಟು, ಜಯನಗರ, ಮಾಗಡಿರಸ್ತೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಅನೇಕ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ಲೋಕೇಶ್ ಕುಮಾರ್, ಬನಶಂಕರಿ ಉಪವಿಭಾಗದ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್ ಪೆಕ್ಟರ್ ಮಾಲತೀಶ್ ಮತ್ತು ಅವರ ತಂಡ ಪಾಲ್ಗೊಂಡು ಸರಗಳ್ಳಿಯನ್ನು ಬಂಧಿಸಿದೆ.