ಹಾಲ್ ಟಿಕೇಟ್ ನೀಡದ ಕಾಲೇಜು: ಬೆಂಗಳೂರಿನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು, ಜೂನ್ 28: ಹಾಜರಾತಿ ಕೊರತೆಯ ಕಾರಣ ನೀಡಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೇಟ್ ನೀಡದ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಎಂವಿಜೆ (ಎಂ.ವಿ.ಜಯರಾಮ) ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಜೂನ್ 27 ರ ಸಂಜೆ ನಡೆದಿದೆ.
ಹಾಜರಾತಿ ಕೊರತೆ: ಎಂವಿಜೆ ಕಾಲೇಜಿನ 67 ವಿದ್ಯಾರ್ಥಿಗಳ ಪರೀಕ್ಷೆಗೆ ತಡೆ
ಎರೋನಾಟಿಕಲ್ ಇಂಜಿನಿಯರಿಂಗ್ ದ್ವಿತಿಯ ವರ್ಷದಲ್ಲಿ ಓದುತ್ತಿದ್ದ ಬಳ್ಳಾರಿ ಮೂಲದ ಲೋಕೇಶ್ ಎಂಬ ವಿದ್ಯಾರ್ಥಿ, ನಿನ್ನೆ ಸಂಜೆ ಹಾಸ್ಟೇಲಿನ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿದ್ಯಾರ್ಥಿಯ ಆತ್ಮಹತ್ಯೆಯಿಂದಾಗಿ ಇನ್ನುಳಿದ ವಿದ್ಯಾರ್ಥಿಗಳ ಆಕ್ರೋಶ ಹೆಚ್ಚಾಗಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಇತ್ತೀಚೆಗಷ್ಟೆ, ಹಾಜರಾತಿಯ ಕೊರತೆಯ ಕಾರಣ ನೀಡಿ ಕಾಲೇಜಿನ 67 ವಿದ್ಯಾರ್ಥಿಗಳ ಪರೀಕ್ಷೆಗೆ ಕಾಲೇಜು ಆಡಳಿತ ಮಂಡಳಿ ತಡೆನೀಡಿತ್ತು.
ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು. ಪರೀಕ್ಷೆಯನ್ನು ತಡೆ ಹಿಡಿದು, ಹಾಲ್ ಟಿಕೇಟ್ ನೀಡಲು ಕಾಲೇಜು ಆಡಳಿತ ಮಂಡಳಿ ನಿರಾಕರಿಸಿದ್ದರಿಂದ ತನ್ನ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ಲೋಕೇಶ್ ಆತ್ಮಮಾಡಿಕೊಂಡಿದ್ದಾನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಕುರಿತು ಮತ್ತಷ್ಟು ತನಿಖೆ ನಡೆಯಬೇಕಿದೆ.