ಯುವಕರ ಸೆಳೆದ ಮಿಡ್ ನೈಟ್ ಮ್ಯಾರಥಾನ್-2014
ಬೆಂಗಳೂರು, ಡಿ. 21: ಕೆಲ ವಿವಾದಗಳ ನಡುವೆಯೂ ಎಸ್ಬಿಐ ಹಮ್ಮಿಕೊಂಡಿದ್ದ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್-2014 ವೈಟ್ಫೀಲ್ಡ್ನ ಸರ್ಕಾರಿ ಆಸ್ಪತ್ರೆ ಬಳಿ ಶನಿವಾರ ರಾತ್ರಿ ನಡೆಯಿತು.
ಕಾರ್ಪೊರೇಟ್ ಉದ್ಯೋಗಿಗಳು ಹಾಗೂ ದೇಶ-ವಿದೇಶಗಳಿಂದ ಆಗಮಿಸಿದ್ದ ಓಟಗಾರರು ಮ್ಯಾರಥಾನ್ ನಲ್ಲಿ ಪಾಲ್ಗೊಂಡರು. ಉದ್ಯಮಿ ಗೀತಾಂಜಲಿ ಕಿರ್ಲೋಸ್ಕರ್ ಮತ್ತು ವೈಟ್ ಪೀಲ್ಡ್ ಆಸ್ಪತ್ರೆಯ ಸಿಇಒ ರಾಜೀವ್ ಸಿಂಘಾಲ್ ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.[ವಿವಾದದಲ್ಲಿ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್]
ಸ್ವಚ್ಛ ಬೆಂಗಳೂರು ಧ್ಯೇಯದೊಂದಿಗೆ ನಡೆದ ಈ ಮ್ಯಾರಥಾನ್ನಲ್ಲಿ ಮಕ್ಕಳು, ಯುವಕರ ಆದಿಯಾಗಿ 10 ಸಾವಿರಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರು. ಕೊರೆವ ಚಳಿ ಲೆಕ್ಕಿಸದೆ ಹಿರಿಯ ನಾಗರಿಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮ್ಯಾರಥಾನ್ಗೆ ಪ್ರಾಯೋಜಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಪ್ರಧಾನ ವ್ಯವಸ್ಥಾಪಕ ರಜಿನಿ ಮಿಶ್ರಾ, ಪ್ರಧಾನ ವ್ಯವಸ್ಥಾಪಕ ದೀಪಾಂಕರ್ ಬೋಸ್ ಕೂಡ ಓಟದಲ್ಲಿ ಪಾಲ್ಗೊಂಡಿದ್ದರು.
ಮಹಿಳೆಯರ 10ಕೆ (ಅಂತಾರಾಷ್ಟ್ರೀಯ) ವಿಭಾಗದಲ್ಲಿ ಕೀನ್ಯಾದ ಡ್ಯಾಲ್ಸ್ ತರೂಸ್ ಪ್ರಥಮ ಸ್ಥಾನ ಪಡೆದರೆ ಅದೇ ರಾಷ್ಟ್ರದ ವಿರ್ಜೀನಿಯಾ ದ್ವಿತೀಯ ಸ್ಥಾನ ಪಡೆದರು. ಸ್ವೀಡನ್ ನ ಲಿನಿ ತೃತೀಯ ಸ್ಥಾನ ಪಡೆದರು. ಭಾರತೀಯರ ವಿಭಾಗದಲ್ಲಿ ಮೀರಾ ಕತ್ವಾಲ್ (ಪ್ರಥಮ), ಪದವಿ ವಿದ್ಯಾರ್ಥಿಗಳಾದ ಗ್ರೇಸಿ (ದ್ವಿತೀಯ) ಹಾಗೂ ರತಿ (ತೃತೀಯ) ಸ್ಥಾನ ಪಡೆದರು.