ತಾಯಿಯನ್ನು ಮದುವೆಯಾಗಲು ಮಕ್ಕಳನ್ನೇ ಕೊಂದ ಭೂಪ!
ಬೆಂಗಳೂರು, ಸೆಪ್ಟೆಂಬರ್, 09: ಹೆಂಗಸನ್ನು ಮದುವೆಯಾಗಲು ಆಕೆಗಿರುವ ಮೂವರು ಮಕ್ಕಳೇ ಅಡ್ಡಿ ಎಂದು ಭಾವಿಸಿದವ ಮಕ್ಕಳನ್ನು ಮ್ಯಾನ್ ಹೋಲ್ ಗೆ ತಳ್ಳಿ ಹತ್ಯೆ ಮಾಡಿದ್ದಾನೆ. ಬೆಂಗಳೂರಿನ ಕಾಡುಗೊಂಡನಹಳ್ಳಿಯ ಅರಣ್ಯ ಪ್ರದೇಶ ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾಗಿದೆ. ಆರೋಪಿ ಫಯೂಮ್ ನ್ನು ಬಂಧಿಸಲಾಗಿದ್ದು ಒಂದು ಮಗುವಿನ ಶವ ಪತ್ತೆಯಾಗಿದೆ.
ನಗರದ ಪಿಳ್ಳಣ್ಣ ಗಾರ್ಡನ್ ನಿವಾಸಿ ನಾಜಿಮಾ ಬೇಗಂಳ ಕುಟುಂಬ ಹಾಗೂ ಆರೋಪಿ ಫಯೂಮ್ ಮಧ್ಯೆ ಮದುವೆ ಕಾರಣಕ್ಕಾಗಿ ದ್ವೇಷ ಹುಟ್ಟಿತ್ತು. ಇದಕ್ಕಾಗಿ ಈತ ಆಕೆಯ ಮೂರು ಮಕ್ಕಳನ್ನು ಕಾಡುಗೊಂಡನಹಳ್ಳಿಯ ಅರಣ್ಯ ಪ್ರದೇಶದ ಮ್ಯಾನ್ ಹೋಲ್ ಗೆ ತಳ್ಳಿ ಹತ್ಯೆಗೈದಿದ್ದಾನೆ.[ಮಗಳನ್ನು ಕೊಲ್ಲುವಾಗ ತಾಯಿ ಪ್ರೀತಿ ಎಲ್ಲಿ ಹೋಗಿತ್ತು?]
ರಹೀಂ ಬೇಗಂ(4), ಉಸ್ಮಾಂ ಬೇಗಂ(6), ಆಲಿ ಅಬ್ಬಾಸ್ ಬೇಗ್(8) ಈ ಮೂವರು ನಾಜಿಂ ಬೇಗಂನ ಮಕ್ಕಳು. ಈ ಮಕ್ಕಳನ್ನು ಆಗಸ್ಟ್ 27 ರ ಮಧ್ಯಾಹ್ನ 3.30 ರ ಸುಮಾರಿನಲ್ಲಿ ಲಿಂಗರಾಜ ಪುರ ರೈಲ್ವೆ ಕ್ರಾಸ್ ಬಳಿ ತಡೆದ ಆರೋಪಿ ಫಯೂಮ್ ಗದ್ದೆಯಲ್ಲಿ ಕೊಕ್ಕರೆ ತೋರಿಸುವುದಾಗಿ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ.
ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆಯು ಮಕ್ಕಳ ಶವ ಪತ್ತೆ ಕಾರ್ಯದಲ್ಲಿ ತೊಡಗಿದ್ದು, ಅದರಲ್ಲಿ ಅಬ್ಬಾಸ್ ಎಂಬ ಮಗುವಿನ ಶವ ಮಾತ್ರ ಪತ್ತೆಯಾಗಿದೆ. ಉಳಿದ ಇಬ್ಬರು ಮಕ್ಕಳ ಹುಡುಕಾಟ ಮುಂದುವರೆದಿದ್ದು, ಇದೇ ಮೊದಲ ಬಾರಿಗೆ ಎನ್ ಡಿಆರ್ ಎಫ್ ಡ್ರೋನ್ ಕ್ಯಾಮರಾ ಬಳಸಿ ಮಕ್ಕಳ ಶವಶೋಧ ನಡೆಸಲಾಗಿದೆ.
ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮ್ಯಾನ್ ಹೋಲ್ಗಳಲ್ಲಿ ಭಾರೀ ನೀರು ತುಂಬಿಕೊಂಡಿದೆ. ಇದರಿಂದ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದ್ದು, ಬುಧವಾರ ಇನ್ನಿಬ್ಬರು ಮಕ್ಕಳ ಶವ ಪತ್ತೆ ಹಚ್ಚುವುದಾಗಿ ರಕ್ಷಣಾ ಪಡೆಯು ಭರವಸೆ ನೀಡಿದೆ.[ಪರಪುರುಷನ ತೆಕ್ಕೆಗೆ ಬಿದ್ದ ಪತ್ನಿಯನ್ನು ಕೊಚ್ಚಿ ಕೊಂದ ಪತಿ]
ಯಾಕೆ ಕೊಂದ?
ನಾಜಿಯಾ ಬೇಗಂ ಇಲಿಯಾಸ್ ಬೇಗ್ ನನ್ನು ಮದುವೆಯಾಗಿದ್ದು, ಈಕೆಗೆ ಮೂರು ಮಕ್ಕಳಿದ್ದರು. ಬಳಿಕ ಪತ್ನಿ ನಾಜಿಮಾ ಎಲೆಕ್ಟ್ರೀಷಿಯನ್ ಫಯೂಮ್ ನೊಂದಿಗೆ ಹೊಂದಿರುವ ಅನೈತಿಕ ಸಂಬಂಧ ತಿಳಿದ ಪತಿ ಇಲಿಯಾಸ್ ಬೇಗ್ ಹೈದರಾಬಾದ್ ಗೆ ತೆರಳಿದ್ದನು.
ಬಳಿಕ ಬೇಗಂಳನ್ನು ಮದುವೆ ಆಗಲು ಇಚ್ಛಿಸಿದ ಫಯೂಮ್ ಮಹಿಳೆಯ ಕುಟುಂಬದವರಿಗೆ ಮದುವೆ ಮಾಡಿಕೊಡಲು ಕೇಳಿದ್ದಾನೆ. ಆಗ ಆಕೆ ಕುಟುಂಬದವರು ಮಕ್ಕಳು ಇರುವುದಾಗಿ ಹೇಳಿ ಮದುವೆ ಸಮ್ಮತಿ ನೀಡಲು ನಿರಾಕರಿಸಿದ್ದಾರೆ. ವಿವಾಹಕ್ಕೆ ಈ ಮೂವರು ಮಕ್ಕಳು ಅಡ್ಡಿಯಾಗುತ್ತಿವೆ ಎಂದು ಭಾವಿಸಿದ ಈತ ಮಕ್ಕಳನ್ನು ಕೊಂದಿದ್ದು, ಆತನೇ ಸತ್ಯ ಒಪ್ಪಿಕೊಂಡಿದ್ದಾನೆ.