ಯಕ್ಷಗಾನ ಪದ ಕೇಳಲು ರವೀಂದ್ರ ಕಲಾಕ್ಷೇತ್ರಕ್ಕೆ ಬನ್ನಿ
ಬೆಂಗಳೂರು, ನ. 21 : ಯಕ್ಷಗಾನದ ಇನ್ನೊಂದು ಮುಖ ಪರಿಚಯ ಮಾಡಿಕೊಳ್ಳಲು ನವೆಂಬರ್ 22 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ಹೋಗಲೇಬೇಕು.
ಆಟ, ಬಯಲಾಟ, ತಾಳಮದ್ದಲೆ ಹೊರತುಪಡಿಸಿ ವಿನೂತನ ಪ್ರಯೋಗವೊಂದನ್ನು ಮಾಡಲಾಗುತ್ತಿದೆ. ಯಕ್ಷಗಾನದ ರಾಗಗಳನ್ನು ಬಿಡಿಬಿಡಿಯಾಗಿ ಸವಿಯುವ ಯೋಗ ಪ್ರೇಕ್ಷಕನಿಗೆ ಒದಗಲಿದೆ.[ಶಿರಸಿː ಕಳವೆಯಲ್ಲಿ ಒಂದು ದಿನದ ಯಕ್ಷಗಾನ ಕಾರ್ಯಾಗಾರ]
'ಪದ ಕೇಳ್ವಾ ಬನ್ನಿ' ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಯಕ್ಷರಂಗದ ಭೀಷ್ಮ ಹೊಸ್ತೋಟ ಮಂಜುನಾಥ ಭಾಗವತ, ಗಾನಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ಪಾಲ್ಗೊಳ್ಳಲಿದ್ದಾರೆ. ಕೇವಲ ಹಾಡುಗಳನ್ನು, ವಿರಳ ರಾಗಗಳನ್ನು ಹಾಡುವುದಲ್ಲದೇ ವಿವರಣೆಯನ್ನು ನೀಡಲಿದ್ದಾರೆ. 30 ಕ್ಕೂ ಹೆಚ್ಚು ಹಳೆ ರಾಗಗಳು, ಮರೆಯಾಗುತ್ತಿರುವ ಪದಗಳು, ಹಾಡಿನ ಬಳಕೆ ಸಂದರ್ಭ ಎಲ್ಲದಕ್ಕೂ ವಿವರ ದೊರೆಯಲಿದೆ.
ಶಂಕರ ಭಾಗವತ ಮತ್ತು ಎ.ಪಿ.ಪಾಠಕ್ ಮದ್ದಳೆಯ ಸಾಥ್ ಕಾರ್ಯಕ್ರಮದ ಹೊಳಪನ್ನು ಮತ್ತಷ್ಟು ಹೆಚ್ಚಿಸಲಿದೆ. ಕಾಲಮಿತಿ ಪ್ರದರ್ಶನಗಳಿಗೆ ಯಕ್ಷಗಾನ ಸೀಮಿತವಾಗುತ್ತಿರುವ ಕಾಲದಲ್ಲಿ ಇದೊಂದು ವಿಶಿಷ್ಟ ಪ್ರಯೋಗಕ್ಕೆ ಹಾಜರಿ ಹಾಕಿ. ಪ್ರವೇಶ ಉಚಿತಬಾಗಿದ್ದು ಹೆಚ್ಚಿನ ಮಾಹಿತಿಗೆ, 98481 97955 ಮತ್ತು 97414 02062 ನ್ನು ಸಂಪರ್ಕಿಸಬಹುದು.