ಎಚ್ಎಸ್ಆರ್ ಲೇಔಟ್ನಲ್ಲಿ ಕುಂಟೆಬಿಲ್ಲೆ ಆಟ, ಎತ್ತಿನಗಾಡಿ ಓಟ
ಬೆಂಗಳೂರು, ಸೆಪ್ಟೆಂಬರ್. 20 : ಎಚ್ಎಸ್ಆರ್ ಲೇಔಟ್ ಭಾನುವಾರ ಪಕ್ಕಾ ಹಳ್ಳಿಯಾಗಿ ಮಾರ್ಪಟ್ಟಿದೆ. ಸಮೂಹ ಸಾರಿಗೆಗೆ ಉತ್ತೇಜನ ನೀಡಲು ಆಯೋಜಿಸಿರುವ ಓಪನ್ ಸ್ಟ್ರೀಟ್ ನಲ್ಲಿ ಜನ ಸಂಭ್ರಮದಿಂದ ಭಾಗವಹಿಸುತ್ತಿದ್ದಾರೆ.
ನೃತ್ಯ, ಗಾಯನ, ಬೀದಿ ನಾಟಕ, ಕುಂಟೆ ಬಿಲ್ಲೆ, ರಂಗೋಲಿ ಹೀಗೆ ಹತ್ತು ಹಲವು ಬಗೆಯ ಕಾರ್ಯಕ್ರಮಗಳಲ್ಲಿ ಜನ ಭಾಗವಹಿಸುತ್ತಿದ್ದಾರೆ. ಸರ್ಕಾರಿ ವಾಹನ ಹೊರತುಪಡಿಸಿ ಬೇರೆ ಯಾವುದೇ ವಾಹನಕ್ಕೆ ಪ್ರವೇಶ ನಿರ್ಬಂಧ ಮಾಡಲಾಗಿದೆ.
ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ಓಪನ್ ಸ್ಟ್ರೀಟ್ ಕಾರ್ಯಕ್ರಮ ನಡೆಯಲಿದೆ. ಆದರೆ ದೂರದಿಂದ ಬಂದವರಿಗೆ, ಸಂಬಂಧಿಕರ ಮನೆಗೆ ಆಗಮಿಸಿದವರು ಪ್ರವೇಶ ಸಿಗದೇ ಪರದಾಡುತ್ತಿದ್ದಾರೆ.
ಎಚ್ ಎಸ್ ಆರ್ ಲೇಔಟ್ ನ ಎಲ್ಲಾ 7 ಸೆಕ್ಟರ್ ಗಳ ರಸ್ತೆಗಳು ಓಪನ್ ಸ್ಟ್ರೀಟ್ ಆಗಿವೆ. ಸಂಚಾರ ದಟ್ಟಣೆ, ವಾಯುಮಾಲಿನ್ಯ ನಿಯಂತ್ರಿಸಲು ಈ ಯೋಜನೆ ಹಮ್ಮಿಕೊಳ್ಳಲಾಗಿದ್ದು ಭಾಗವಹಿಸುವಿಕೆ ಉತ್ತಮವಾಗಿದೆ. ಬಿಎಂಟಿಸಿ ಸಹ ಇದಕ್ಕೆ ಬೆಂಬಲ ಸೂಚಿಸಿತ್ತು. ಒಂದು ಕಡೆ ಜನರು ಸಂಭ್ರಮದಲ್ಲಿ ತೊಡಗಿದ್ದರೆ ಒಳಕ್ಕೆ ಪ್ರವೇಶ ಸಿಗದವರು ಪೊಲೀಸರೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿದ್ದಾರೆ. ಹೊರ ಜಿಲ್ಲೆಗಳಿಂದ ಆಗಮಿಸಿದವರು ಕಾರ್ಯಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.