ಬೆಂಗಳೂರು: ಸಂಕ್ರಾಂತಿಗೆ ಹಳ್ಳಿಮನೆ ಹಬ್ಬದೂಟ
ಬೆಂಗಳೂರು, ಜನವರಿ, 13: ಸಂಕ್ರಾಂತಿ ಹಬ್ಬದೂಟಕ್ಕೆ ಮಲ್ಲೇಶ್ವರದ ಹಳ್ಳಿಮನೆ ಸಜ್ಜುಗೊಂಡಿದೆ. ಪ್ರತಿವರ್ಷದಂತೆ ಈ ವರ್ಷವೂ ಜನವರಿ 15 ಮತ್ತು 16ರಂದು ಹಬ್ಬದೂಟವನ್ನು ಉಣಬಡಿಸಲು ಭರ್ಜರಿ ತಯಾರಿ ನಡೆದಿದೆ.
ಗ್ರಾಮೀಣ ಶೈಲಿಯ ಕಲಾತ್ಮಕ ವಾತಾವರಣದ ಹಳ್ಳಿಮನೆ ಈ ಬಾರಿಯ ಹಬ್ಬದೂಟಕ್ಕಾಗಿ ಸಂಕ್ರಾಂತಿ ವಿಶೇಷ ಅವರೇ ಖಾದ್ಯಗಳನ್ನೂ ತನ್ನ ಹಬ್ಬದೂಟದ ಮೆನುವಿನಲ್ಲಿ ಸೇರಿಸಿಕೊಂಡಿದೆ. ಸಂಕ್ರಾಂತಿಯ ಪಾರಂಪರಿಕ ಹಬ್ಬದೂಟದ ರುಚಿಯೊಂದಿಗೆ ಅವರೇ ಕಾಳು ಅಕ್ಕಿರೊಟ್ಟಿ, ಅವರೇಕಾಳು ಗಸಿ, ಅವರೇಕಾಳು ಮಸಾಲೆ ವಡೆ, ಅವರೇ ಕಾಳು ಉಸ್ಲಿ, ಅವರೇ ಚಿತ್ರಾನ್ನ ಹೀಗೆ ತರಹೇವಾರಿ ವೈವಿಧ್ಯಗಳ ರುಚಿಯನ್ನು ಸವಿಯಬಹುದಾಗಿದೆ ಎನ್ನುತ್ತಾರೆ ಹಳ್ಳಿಮನೆ ಹೋಟೆಲ್ ವ್ಯವಸ್ಥಾಪಕ ನಿರ್ದೇಶಕರಾದ ನೀಲಾವರ ಸಂಜೀವರಾವ್.[ಚೀನಿ ಕಾಯಿಗೆಷ್ಟು? ಜೋಡಿ ಕಬ್ಬಿಗೆಷ್ಟು? ಹೂವಿನ ದರ ಎಷ್ಟಿದೆ?]
ಸಂಕ್ರಾಂತಿ ಹಬ್ಬದ ಸಂಭ್ರಮ, ಎಳ್ಳು ಬೆಲ್ಲ ವಿನಿಮಯ, ಹಳ್ಳಿಯ ವಿಶಿಷ್ಟ ಸೊಬಗಿನ ಅಲಂಕಾರ, ಈ ಎರಡೂ ದಿನಗಳ ಕಾಲ ಹಳ್ಳಿಮನೆ ಪರಿಸರದಲ್ಲಿ ಕಾಣಬರುವುದು ನಿಶ್ಚಿತ. ಇಂದಿನ ಜೀವನ ಶೈಲಿಯ ಒತ್ತಡದಿಂದ ಬಹುತೇಕ ಮನೆಗಳಲ್ಲಿ ಹಬ್ಬದ ಸಂಭ್ರಮ-ಸಡಗರ ಮರೆಯಾಗುತ್ತಿರುವ ಈ ದಿನಮಾನಗಳಲ್ಲೂ ಕುಟುಂಬ ಸಮೇತರಾಗಿ ಹಳ್ಳಿಮನೆಯ ಈ ಪಾರಂಪರಿಕ, ಸಾಂಪ್ರದಾಯಿಕ ಹಬ್ಬದೂಟಗಳಲ್ಲಿ ಸಂಭ್ರಮದಿಂದ ಜನರು ಹೆಚ್ಚು ಹೆಚ್ಚು ಭಾಗವಹಿಸಬೇಕೆಂಬುದು ಹಬ್ಬದೂಟದ ಉದ್ದೇಶಗಳಲ್ಲೊಂದು.[ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು?]
ಹಬ್ಬದೂಟದಲ್ಲಿ ಪಾರ್ಸೆಲ್ ಕೊಂಡೊಯ್ಯುವವರಿಗೂ ಅವಕಾಶ ನೀಡಲಾಗಿದೆ. ಹಬ್ಬದೂಟದ ಎರಡೂ ದಿನಗಳಲ್ಲಿ ಮಧ್ಯಾಹ್ನ 12 ರಿಂದ 3 ಹಾಗೂ ಸಂಜೆ 7.30ರಿಂದ 10ರವರೆಗೆ ಲಭ್ಯವಿರುತ್ತದೆ. ಹಬ್ಬದೂಟ ಕುರಿತ ಹೆಚ್ಚಿನ ಮಾಹಿತಿಗೆ 9945761283 ಸಂಪರ್ಕಿಸಬಹುದು.