ಬೆಂಗಳೂರು: ಹಸಿರು ಪರಿಸರದಲ್ಲಿ ದೇಸಿ ಆಹಾರದ ಭಂಡಾರ
ಬೆಂಗಳೂರು, ಏಪ್ರಿಲ್, 25: ಸಾವಯವ ಕೃಷಿ ನಮ್ಮ ಮುಂದಿನ ಪೀಳಿಗೆಗೆ ನೀಡುವ ಉತ್ತಮ ಕೊಡುಗೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ದೇಶದ ಅತಿದೊಡ್ಡ ಸಾವಯವ ಹಬ್ ಗ್ರೀನ್ ಪಾಥ್ ಹಸಿರು ತೋಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾವಯವ ಕೃಷಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದರು.[ಗ್ರೀನ್ ಪಾಥ್ ತೋಟಕ್ಕೆ ಸಿದ್ದರಾಮಯ್ಯ 'ಹಸಿರು' ನಿಶಾನೆ]
ಸಾವಯವ ಕೃಷಿ ಒಂದು ಧ್ಯಾನವಿದ್ದಂತೆ. ಯಾವುದೇ ರಾಸಾಯನಿಕಗಳ ಬಳಕೆ ಇಲ್ಲದೆ ಕೃಷಿ ಬಹಳ ಕಷ್ಟ. ಇಂತಹ ರೈತರಿಗೆ ಸರಿಯಾದ ಮಾರುಕಟ್ಟೆ ಹಾಗೂ ಲಾಭಾಂಶ ದೊರೆಯಬೇಕು. ಗ್ರಾಹಕರು ಆದ್ಯತೆ ನೀಡಿದರೆ ಮಾತ್ರ ಸಾವಯವ ರೈತರಿಗೆ ಪ್ರೋತ್ಸಾಹ ಸಿಗುತ್ತದೆ ಎಂದರು. ರಾಜ್ಯ ಹಾಗೂ ದೇಶದಲ್ಲಿ ಕುಡಿಯುವ ನೀರಿನ ಲಭ್ಯತೆ ಬಹಳ ಕಡಿಮೆಯಾಗುತ್ತಿದೆ. ಎಲ್ಲವೂ ಸರಕಾರದಿಂದ ನಿರೀಕ್ಷೆ ಮಾಡುವುದನ್ನು ಬಿಟ್ಟು ಸಾರ್ವಜನಿಕರು ತಮ್ಮ ಹೊಣೆಗಾರಿಕೆಯನ್ನೂ ಅರಿತುಕೊಳ್ಳಬೇಕು ಎಂದರು.
ಕಾಂಗ್ರೆಸ್ ನ ಕೆಲವು ಮುಖಂಡರುಗಳು ಬೇರೆ ಬೇರೆ ಕಾರ್ಯಕ್ರಮಗಳ ವೇದಿಕೆಯನ್ನು ಬಳಸಿಕೊಂಡು ಪಕ್ಷದ ಹಾಗೂ ಮುಖ್ಯಮಂತ್ರಿಗಳ ತೇಜೋವಧೆ ಮಾಡುತ್ತಿದ್ದಾರೆ. ಅವರಿಗೆ ಆಗಿರುವ ಸಮಸ್ಯೆಯನ್ನು ಪಕ್ಷದ ಆಂತರಿಕವಾಗಿ ಪರಿಹರಿಸಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದರು.[ಭೂ ರಮೆಯನ್ನು ಕೊಂಡಾಡಿ, ನಿಮ್ಮದೇ ವಿಶ್ವ ಉಳಿಸಿಕೊಳ್ಳಿ]
ಪರಿಸರವಾದಿ ಯಲ್ಲಪ್ಪ ರೆಡ್ಡಿ ಮಾತನಾಡಿ, ಹಸಿರು ತೋಟ ಒಂದು ವಿಶಿಷ್ಟವಾದ ಕಲ್ಪನೆಯಾಗಿದೆ. ಈ ಮೂಲಕ ರಾಜ್ಯದ ಜನರಲ್ಲಿ ಸಾವಯವ ಕೃಷಿ ಹಾಗೂ ಅದರಿಂದ ಆಗುವ ಒಳ್ಳೆಯ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಹೆಚ್ ಆರ್ ಜಯರಾಮ್ ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು. ಇಂತಹ ಚಳವಳಿಗಳು ನಮ್ಮ ಯುವಜನಾಂಗದಲ್ಲಿ ಪರಿಸರ ಕಾಳಜಿಯನ್ನು ಹೆಚ್ಚಿಸುತ್ತವೆ ಎಂದರು.
ಗ್ರೀನ್ ಪಾಥ್ ಸಂಸ್ಥೆಯ ಸಂಸ್ಥಾಪಕ ಸಾವಯವ ಕೃಷಿಕ ಎಚ್ ಆಚ್ ಜಯರಾಮ್ ಮಾತನಾಡಿ, ಬೆಂಗಳೂರು ನಗರದ ಮಂತ್ರಿ ಮಾಲ್ ಸಮೀಪ, ಮಲ್ಲೇಶ್ವರಂ ಮೆಟ್ರೋ ಸ್ಟೇಷನ್ ಎದುರು ಸುಮಾರು ಇಪ್ಪತ್ತು ಸಾವಿರ ಚದರಡಿ ವಿಸ್ತೀರ್ಣದ ಕಟ್ಟಡದೊಳಗೆ, ಕಿಟಕಿ ಮತ್ತು ಕಿಂಡಿಗಳಿಂದ ಗಾಳಿ ಮತ್ತು ಬೆಳಕು ಕೊಯಿಲನ್ನು ಮಾಡಲಾಗಿದೆ ಮತ್ತು ಈ ಹಿಂದೆ ಈ ಕಟ್ಟಡ ಪೂರ್ತಿ ಹವಾ ನಿಯಂತ್ರಣ ವ್ಯವಸ್ಥೆಗೆ ಒಳಪಟ್ಟಿದ್ದು ಅದರ ಬದಲು ನೀರಿನ ಮೂಲಕ ತಂಪು ನಿಯಂತ್ರಣ ವ್ಯವಸ್ಥೆಯನ್ನು ಮಾಡಲಾಗಿದ್ದು ಶೇ 75% ರಷ್ಟು ವಿದ್ಯುತ್ ಉಳಿತಾಯ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ಕಟ್ಟಡದ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಒಂದು ಅಂತಸ್ತಿಗೆ ಅದನ್ನು ವಿನಿಯೋಗಿಸಲಾಗುತ್ತಿದೆ ಇಲ್ಲಿನ ಎಲ್ಲಾ ಒಳಾಂಗಣ ವಿನ್ಯಾಸವನ್ನು ಹಳೆಯ ಮತ್ತು ಪ್ಯಾಕಿಂಗ್ ಮರಗಳ ಮರು ಉಪಯೋಗ ಮಾಡಿ ನಿರ್ಮಿಸಲಾಗಿದೆ.
ಈ ಪರಿಸರ ಸ್ನೇಹಿ ಕಟ್ಟಡದಲ್ಲಿ ಸಾವಯವ ಆಹಾರ ಪದಾರ್ಥಗಳ ಅಂಗಡಿ, ಮರೆತುಹೋದ ದೇಸೀ ಆಹಾರದ ಭೋಜನ ಗೃಹ, ಸಭಾಭವನ, ಇತ್ಯಾದಿ ಇರುವ ಇದು ದೇಶದ ಅತಿ ದೊಡ್ಡ ಸಾವಯವ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮರೆತುಹೋದ ದೇಸಿ ಆಹಾರದ ಪ್ರಕಾರಗಳನ್ನು ಮತ್ತೆ ಮುಖ್ಯವಾಹಿನಿಗೆ ತರುವ ಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.