ಬೆಂಗಳೂರು: ಮತ್ತೆ ಒತ್ತುವರಿ ತೆರವಿಗಿಳಿದ ಡಿಸಿ ಶಂಕರ್
ಬೆಂಗಳೂರು, ಫೆಬ್ರವರಿ, 02: ಬೆಂಗಳೂರು ಜಿಲ್ಲಾಧಿಕಾರಿ ವಿ. ಶಂಕರ್ ಮತ್ತೆ ಒತ್ತುವರಿ ತೆರವು ಕಾರ್ಯಾಚರಣೆಗೆ ಇಳಿದಿದ್ದಾರೆ. ಮಂಗಳವಾರ ಬೆಳ್ಳಂಬೆಳಗ್ಗೆ ಜಯನಗರ 3ನೇ ಹಂತದ ವಾಸವಿ ದೇವಸ್ಥಾನ ಮತ್ತು ಜರಗನಹಳ್ಳಿ ಬಳಿ ಕಂದಾಯ ಇಲಾಖೆಗೆ ಸೇರಿದ ಜಾಗವನ್ನು ಸುಪರ್ದಿಗೆ ವಹಿಸಿಕೊಂಡು ನಾಮಫಲಕ ಅಳವಡಿಸಿದ್ದಾರೆ.
ನಗರದ ಜರಗನಹಳ್ಳಿ ಮತ್ತು ಭೈರಸಂದ್ರದಲ್ಲಿ ಒತ್ತುವರಿಯಾಗಿದ್ದ ಕೋಟ್ಯಾಂತರ ರೂ. ಮೌಲ್ಯದ ಸರ್ಕಾರಿ ಜಮೀನನ್ನು ನಗರ ಜಿಲ್ಲಾಡಳಿತ ಇಂದು ವಶಕ್ಕೆ ಪಡೆದಿದೆ. ಜರಗನಹಳ್ಳಿಯಲ್ಲಿ ಗೋಪಾಲ್ ಎಂಟರ್ಪ್ರೈಸಸ್ ಸಂಸ್ಥೆ 2.25 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿಕೊಂಡಿತ್ತು. ಟೆಂಪಲ್ ಸ್ಟ್ರೀಟ್ ಅಪಾರ್ಟ್ಮೆಂಟ್ ಹಿಂಭಾಗದಲ್ಲಿದ್ದ 2.25 ಎಕರೆ ಖರಾಬು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದು ಕಂದಾಯ ಇಲಾಖೆ ನಡೆಸಿದ ಸರ್ವೆಕಾರ್ಯದಲ್ಲಿ ಖಚಿತವಾಗಿದ್ದ ಹಿನ್ನಲೆಯಲ್ಲಿ ಶಂಕರ್ ಕಾರ್ಯಾಚರಣೆ ಕೈಗೊಂಡರು.[ಸಾರಕ್ಕಿ ಕೆರೆ ಒತ್ತುವರಿ ತೆರವು ಮಾಡಿದ್ದ ದಿಟ್ಟ ಶಂಕರ್]
ಜಿಲ್ಲಾಧಿಕಾರಿ ವಿ. ಶಂಕರ್ ನೇತೃತ್ವದಲ್ಲಿ ಐದು ಜೆಸಿಬಿ ಯಂತ್ರಗಳ ಸಹಾಯದಿಂದ ಜರಗನಹಳ್ಳಿಯಲ್ಲಿ ಶೆಡ್ಗಳನ್ನು ನೆಲಸಮಗೊಳಿಸಲಾಯಿತು. ಭೈರಸಂದ್ರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 5.3 ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದ್ದು ಒತ್ತುವರಿದಾರರು ಹಾಕಿದ್ದ ಬೋರ್ಡ್ ತೆಗೆದು ಕಂದಾಯ ಇಲಾಖೆ ನಾಮಫಲಕ ಅಳವಡಿಸಲಾಯಿತು.
ವಾಸವಿ ದೇವಸ್ಥಾನವೂ ಸೇರಿದೆ
ಬೈರಸಂದ್ರಸದ ವಾಸವಿ ದೇವಾಲಯವೂ ಒತ್ತುವರಿ ಜಾಗದಲ್ಲೇ ನಿರ್ಮಾಣವಾಗಿದೆ ಎಂಬುದು ಜಿಲ್ಲಾಡಳಿತದ ಹೇಳಿಕೆ. ಈ ಹಿನ್ನೆಲೆಯಲ್ಲಿ ದೇವಾಲಯಕ್ಕೂ ಸಂಬಂಧಿಸಿದ ಜಾಗವನ್ನು ಕಂದಾಯ ಇಲಾಖೆ ಸುಪರ್ದಿಗೆ ಪಡೆದುಕೊಂಡಿದೆ
ಬಿಡಿಎ ಬಳಿ ಲೀಸ್ ಗೆ ಪಡೆದಿದ್ದೆವು
ಭೈರಸಂದ್ರದ ನಾಗರಿಕರೊಬ್ಬರು ಹೇಳುವಂತೆ ಹಿಂದೆ ಈ ಜಾಗವನ್ನು ಬಿಡಿಎ ಕಸದ ಡಂಪಿಂಗ್ ಯಾರ್ಡ್ ಮಾಡಲು ಸಿದ್ಧತೆ ನಡೆಸಿತ್ತು. ಆದರೆ ಕಾರಣಾಂತರಗಳಿಂದ ಅದನ್ನು ಕೈ ಬಿಟ್ಟ ಕಾರಣ ಅದನ್ನು ನಾವು ಲೀಸ್ ಗೆ ಪಡೆದುಕೊಂಡಿದ್ದೇವು. ಆದರೆ ಈಗ ಏಕಾಏಕಿ ಜಿಲ್ಲಾಧಿಕಾರಿಗಳು ಆಗಮಿಸಿ ನಾಮಫಲಕ ಅಳವಡಿಸಿದ್ದಾರೆ.
ನಮ್ಮ ಬಳಿ ದಾಖಲೆಯಿದೆ
ನಮ್ಮ ಬಳಿ 1.5 ಎಕರೆಗೆ ಸಂಬಂಧಿಸಿದ ಎಲ್ಲ ದಾಖಲೆಗಳಿವೆ. ನ್ಯಾಯಾಲಯದಲ್ಲಿ ಪ್ರಕರಣದವಿದ್ದು ಒತ್ತುವರಿ ಹೆಸರಿನಲ್ಲಿ ತೆರವು ಸಾಧ್ಯವಿಲ್ಲ ಎಂದು ಸ್ಥಳಿಯರು ಹೇಳಿದರು.
ಚುನಾವಣೆ ಮುಗಿದ ಮೇಲೆ ಕಾರ್ಯಾಚರಣೆ
ಕೆ.ಬಿ. ಕೋಳಿವಾಡ್ ಅಧ್ಯಕ್ಷತೆಯ ಕೆರೆ ಒತ್ತುವರಿ ಸದನ ಸಮಿತಿಯ ಒತ್ತುವರಿ ಮಾಡಿರುವ ಅಪಾರ್ಟ್ಮೆಂಟ್ಗಳ ಸಮಗ್ರ ಮಾಹಿತಿಯನ್ನು ನೀಡಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಮುಗಿದ ನಂತರ ತೆರವು ಕಾರ್ಯಾಚರಣೆ ಆರಂಭ ಮಾಡಲಾಗುವುದು.