ಒತ್ತುವರಿ ತೆರವು ಕಾರ್ಯಾಚರಣೆ, ಪರಿಹಾರ ಸಿಗುತ್ತಾ?
ಬೆಂಗಳೂರು, ಆಗಸ್ಟ್ 11 : ಬೆಂಗಳೂರು ನಗರದಲ್ಲಿ ಬಿಬಿಎಂಪಿ ಕೈಗೊಂಡಿರುವ ರಾಜ ಕಾಲುವೆ ಒತ್ತುವರಿ ತೆರವು ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಆದರೆ, ಈ ಕಾರ್ಯಾಚರಣೆಯನ್ನು ಪಾಲಿಕೆ ತಕ್ಷಣಕ್ಕೆ ಆರಂಭಿಸಿಲ್ಲ. ಆರು ತಿಂಗಳ ಹಿಂದೆಯೇ ಈ ಕಾರ್ಯಾಚರಣೆಯ ಯೋಜನೆ ಸಿದ್ಧಗೊಂಡಿತ್ತು.
ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ಅವರು ಈ ಕುರಿತು ಒನ್ ಇಂಡಿಯಾ ಜೊತೆ ಮಾತನಾಡಿದ್ದಾರೆ. 'ಇಂತಹ ಕಾರ್ಯಚರಣೆ ಆರಂಭಿಸಲಾಗುತ್ತದೆ ಎಂದು 6 ತಿಂಗಳ ಹಿಂದೆಯೇ ಸೂಚನೆ ನೀಡಲಾಗಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿಲ್ಲ' ಎಂದು ಅವರು ಹೇಳಿದ್ದಾರೆ.[ರಾಜ ಕಾಲುವೆ ಒತ್ತುವರಿ, ಈಗ ಅಧಿಕಾರಿಗಳಿಗೆ ಶಿಕ್ಷೆ]
'ಬೆಂಗಳೂರು ನಗರದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸಬೇಕು ಎಂದು ಆರು ತಿಂಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಆಗಲೇ ಆಸ್ತಿಗಳನ್ನು ಗುರುತಿಸಿ, ಮಾರ್ಕ್ ಮಾಡಲಾಗಿತ್ತು' ಎಂದು ಅವರು ಸ್ಪಷ್ಟಪಡಿಸಿದ್ದಾರೆ.[ಮನೆ ಕಳೆದುಕೊಂಡವರಿಂದ ಬಿಬಿಎಂಪಿಗೆ ಪ್ರಶ್ನೆಗಳ ಸುರಿಮಳೆ]
'ಸರ್ಕಾರ ತನ್ನ ಸ್ವತ್ತನ್ನು ವಾಪಸ್ ಪಡೆದುಕೊಳ್ಳುತ್ತಿದೆ. ಪಂಚಾಯತ್ ರಾಜ್ ಕಾಯ್ದೆ ಸೆಕ್ಷನ್ 2281 ಎ ಪ್ರಕಾರ ಸ್ಥಳೀಯ ಪಾಲಿಕೆಯ ಆಯುಕ್ತರು ಇಂತಹ ವಿಚಾರದಲ್ಲಿ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಒತ್ತುವರಿ ತೆರವಿಗೂ ಮನ್ನವೇ ನೋಟಿಸ್ ನೀಡಿರುತ್ತಾರೆ' ಎಂದು ಕಾಳಪ್ಪ ಹೇಳಿದ್ದಾರೆ.[ಒತ್ತುವರಿ ತೆರವಿನಲ್ಲೂ ಪ್ರಭಾವದ ಒಳಸುಳಿ]
ಪರಿಹಾರದ ಕುರಿತು : 'ಸರ್ಕಾರ ಒಪ್ಪಿಗೆ ನೀಡಿದ ಜಾಗದಲ್ಲಿ ಮನೆ, ಕಟ್ಟಡಗಳನ್ನು ಕಟ್ಟಿದ್ದರೆ ಅದನ್ನು ತೆರವುಗೊಳಿಸಿದರೆ ಪರಿಹಾರ ನೀಡಲಾಗುತ್ತದೆ. ಆದರೆ, ಖಾಸಗಿ ನಿರ್ಮಾಣಗೊಂಡ ಲೇಔಟ್ ತೆರವಿಗೆ ಪರಿಹಾರ ನೀಡುವುದಿಲ್ಲ. ಇದು ಸರ್ಕಾರ ತನ್ನ ಜಾಗವನ್ನು ವಾಪಸ್ ಪಡೆಯುವ ಕಾರ್ಯಾಚರಣೆಯನ್ನು ಮಾತ್ರ ನಡೆಸುತ್ತಿದೆ' ಎಂದರು.
ಒಂದು ವೇಳೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಒತ್ತುವರಿ ಮಾಡಿಕೊಂಡಿದ್ದರೆ ಸರ್ಕಾರ ಹಣವನ್ನು ಪಾವತಿ ಮಾಡುತ್ತದೆ. ಏಕೆಂದರೆ ಸರ್ಕಾರ ಖರೀದಿ ಮಾಡುವವರಿಂದ ಹಣ ಪಡೆದಿರುತ್ತದೆ. ಆದರೆ, ಖಾಸಗಿ ಕಟ್ಟಡಗಳ ವಿಚಾರದಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ.
ಖಡಕ್ ಕ್ರಮ ಅಗತ್ಯ : 'ಒತ್ತುವರಿಗೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧ ಕಠಣ ಕ್ರಮ ಕೈಗೊಳ್ಳುವುದ ಅಗತ್ಯ. ಯೋಜನೆಯನ್ನು ಮೊದಲು ಪರಿಶೀಲನೆ ನಡೆಸಿ ಒಪ್ಪಿಗೆ ಕೊಟ್ಟಿರುವುದೇ ಅಧಿಕಾರಿಗಳು. ಪಾಲಿಕೆಗಿಂತ ಮೊದಲು ಸ್ಥಳೀಯ ಗ್ರಾಮ ಪಂಚಾಯಿತಿ ಅವರಿಗೆ ಒತ್ತುವರಿ ಬಗ್ಗೆ ತಿಳಿದಿರುತ್ತದೆ' ಎಂದು ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.