ಜಯನಗರದಲ್ಲಿದೆ ಶಿವನ ಪಾದ ಸೇರಲು ಶಾರ್ಟ್ಕಟ್!
ಬೆಂಗಳೂರು, ಜನವರಿ, 14: ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಜನರ ತಲೆ ಕಾಯಲು ಒಳ್ಳೆಯ ಯೋಜನೆಯೇ ಬಿಡಿ. ಆದರೆ ಹಾಳಾಗಿರುವ ರಸ್ತೆಗಳು, ತೆರೆದುಕೊಂಡ ಫುಟ್ ಪಾತ್, ಕಿತ್ತು ಹೋಗಿರುವ ಡಿವೈಡರ್, ಅವೈಜ್ಞಾನಿಕ ಹಂಪ್...? ಇದೆಲ್ಲಕ್ಕೆ ಉತ್ತರ ಇಲ್ಲ.
ಜಯನಗರದ ಸೌತ್ ಎಂಡ್ ವೃತ್ತ ಸಮೀಪದ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಿಂದ ಕೆಲವೇ ಮೀಟರ್ ದೂರದಲ್ಲಿ ಜನರೇ ಅಪಾಯವನ್ನು ಮೈ ಮೇಲೆ ತಂದುಕೊಳ್ಳುತ್ತಿದ್ದಾರೆ. ಸೌತ್ ಎಂಡ್ ಮತ್ತು ಬಾಲಾಜಿ ಮೆಡಿಕಲ್ ಸ್ಟೋರ್ ಮಧ್ಯದಲ್ಲಿ ಪ್ರತಿನಿತ್ಯ ಕಂಡುಬರುತ್ತಿರುವ ಘಟನಾವಳಿಗಳು ಇನ್ಯಾವ ದುರಂತಕ್ಕೆ ಕಾರಣವಾಗುತ್ತದೆಯೋ?[ಹೆಲ್ಮೆಟ್ ಕಡ್ಡಾಯ: ಬೆಂಗಳೂರಿಗರಿಗೆ ಜನವರಿ 20 ಅಂತಿಮ ಗಡುವು]
ನಿಯಮಾವಳಿಯಂತೆ ಇಲ್ಲಿ ಯಾವ ಟರ್ನ್ ಇಲ್ಲ. ರಸ್ತೆ ಮಧ್ಯದ ಡಿವೈಡರ್ ಕಲ್ಲುಗಳು ಕಿತ್ತು ಹೋಗಿದೆ. ಇದನ್ನೇ ಜನರು ಅಡ್ಡ ದಾಟುವ ಮಾರ್ಗವನ್ನಾಗಿ ಮಾಡಿಕೊಂಡಿದ್ದಾರೆ. ದ್ವಿಚಕ್ರ ವಾಹನ ಸವಾರರು ಶಾರ್ಟ್ ಕಟ್ ಬಳಸಲು ಹೋಗಿ ಶಿವನ ಪಾದ ಸೇರಿದರೂ ಆಶ್ಚರ್ಯವಿಲ್ಲ. ಬೆಂಗಳೂರು ನಾಗರಿಕರು ಕಾನೂನು ಪಾಲನೆ ಯಾವ ರೀತಿಯಲ್ಲಿದೆ ನೀವೇ ನೋಡಿಕೊಂಡು ಬನ್ನಿ...[ಹೆಲ್ಮೆಟ್ ರೂಲಿಗೆ 'ಠೇಂಗಾ' ಅಂದ ಹಿಂಬದಿ ಸವಾರ!]
ಈ ಶಾರ್ಟ್ ಕಟ್ ಯಮಲೋಕದ ದಾರಿ
ಸೌತ್ ಎಂಡ್ ಸಿಗ್ನಲ್ ಮತ್ತು ಬಾಲಾಜಿ ಮೆಡಿಕಲ್ ಸ್ಟೋರ್ಸ್ ಸಮೀಪದ ಸಿಗ್ನಲ್ ಎರಡು ಕಡೆಯಿಂದ ಸಿಗ್ನಲ್ ಬಿಟ್ಟ ತಕ್ಷಣ ವಾಹನಗಳು ವೇಗವಾಗಿ ಬರುತ್ತವೆ. ಮಧ್ಯದ ಡಿವೈಡರ್ ಬಳಿ ಶಾರ್ಟ್ ಕಟ್ ಮೂಲಕ ಹಾರಿ ಹೋಗಲು ದ್ವಿಚಕ್ರ ವಾಹನ ಸವಾರರು ಕಾಯುತ್ತಿರುತ್ತಾರೆ.. ಇಲ್ಲವೇ ನುಗ್ಗಿ ಬರುತ್ತಾರೆ. ಶಾರ್ಟ್ ಕಟ್ ಬಳಸುವವರು ತಮ್ಮ ಮೈ ಮೇಲೆ ಅಪಾಯ ತಂದುಕೊಳ್ಳುವುದಲ್ಲದೇ ಇತರರ ಪ್ರಾಣಕ್ಕೂ ಸಂಚಕಾರ ತರುತ್ತಿದ್ದಾರೆ.
ಐದು ಜನರಿಗೆ ಒಂದೇ ಬೈಕ್
ರಾತ್ರಿ ವೇಳೆ ಇಲ್ಲಿ ಬೀದಿ ದೀಪಗಳು ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇಂಥ ವೇಳೆಯಲ್ಲಿ ಇಡೀ ಕುಟುಂಬವನ್ನು ಒಂದೇ ಬೈಕ್ ನಲ್ಲಿ ಕರೆದುಕೊಂಡು ಹೋದ ಮನೆಯ ಯಜಮಾನನ ಸಾಧನೆಗೆ ಭೇಷ್ ಅನ್ನಲೇ ಬೇಕು!
ಹೆಲ್ಮೆಟ್ ಚಿಂತೆ ಇವರಿಗಿಲ್ಲ
ಸರ್ಕಾರ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂದಿದೆ. ಆದರೆ ವಾಹನ ಚಲಾಯಿಸುವರೆ ಹೆಲ್ಮೆಟ್ ಹಾಕಿಲ್ಲ. ಅದು ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಿಂದ ಅನತಿ ದೂರದಲ್ಲಿ.
ವಿದ್ಯಾರ್ಥಿಗಳು ನುಗ್ಗುತ್ತಾರೆ
ಸುರಾನಾ ಕಾಲೇಜು ವಿದ್ಯಾರ್ಥಿಗಳು, ಹತ್ತಿರದ ಐಟಿ ಕಂಪನಿ ಉದ್ಯೋಗಿಗಳು ಸಹ ಇದೇ ಶಾರ್ಟ್ ಕಟ್ ಬಳಸುತ್ತಾರೆ. ಮೂರು ಜನರನ್ನು ಹಾಕಿಕೊಂಡು ಆಕ್ಟೀವಾದಲ್ಲಿ ಮುನ್ನುಗ್ಗುವುದನ್ನು ನೋಡಿದರೆ ಮೈ ಜುಮ್ಮೆನ್ನುತ್ತದೆ.
ಮಹಿಳಾ ಮಣಿಗಳು ಕಡಿಮೆ ಇಲ್ಲ
ಮಹಿಳೆಯರು ಕಾನೂನಿಗೆ ಅಂಜಲ್ಲ. ಯಾವ ಭಯ ಮುಲಾಜಿಗೂ ಒಳಗಾಗದೇ ಶಾರ್ಟ್ ಕಟ್ ಮೂಲಕ ರಸ್ತೆ ದಾಟುವುದನ್ನು ರೂಢಿ ಮಾಡಿಕೊಂಡಿದ್ದಾರೆ.
ಇನ್ನಾದರೂ ದುರಸ್ತಿ ಮಾಡುವರೆ?
ಇನ್ನಾದರೂ ಬೆಂಗಳೂರು ಟ್ರಾಫಿಕ್ ಪೊಲೀಸ್ ಮತ್ತು ಬಿಬಿಎಂಪಿ ಗಮನ ಹರಿಸಿ ಡಿವೈಡರ್ ಸರಿ ಮಾಡಿದರೆ ಮುಂದೆ ಆಗಬಹುದಾದ ಪ್ರಾಣ ಹಾನಿಯನ್ನು ತಡೆಯಬಹುದಾಗಿದೆ. ಜನರು ಸಹ ಸಂಚಾರಿ ನಿಯಮ ಪಾಲಿಸಿದರೆ ಒಳಿತು.