ಬೆಂಗಳೂರು ಕ್ರೈಂ ಬೀಟ್ : ರೇಷ್ಮೆ ಕಳ್ಳರು, ಸೀಲು ವಂಚಕರ ಬಂಧನ
ಬೆಂಗಳೂರು, ಜೂನ್ 22 : ನಗರದ ಪಾದರಾಯನಪುರದ ಮನೆಯೊಂದರಲ್ಲಿ ತಮಿಳುನಾಡಿನ ಸೇಲಂನಿಂದ ಕಳವು ಮಾಡಿಕೊಂಡು ಬಂದಿರುವ ರೇಷ್ಮೇನೂಲಿನ ಮೂಟೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ 6 ಕಳ್ಳರನ್ನು ಪೊಲೀಸರು ಬಂಧಿಸಿದ್ದು, 14 ಲಕ್ಷ ರು. ಮೌಲ್ಯದ ರೇಷ್ಮೆ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ರಸ್ತೆಯ ಆಟೋ ಚಾಲಕರಾದ ಜಮೀರ್ ಖಾನ್(22), ಅಕ್ಮಲ್(22), ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ನಯಾಜ್(28), ತಬ್ರೇಜ್(24), ಖಾಜಾ ಮೊಹಿನುದ್ದಿನ್(22) ಮತ್ತು ಮುಸ್ತಕೀಂ(24)ರನ್ನ ಬಂಧಿಸಲಾಗಿದ್ದು, ಅವರಿಂದ ರೇಷ್ಮೆ ನೂಲಿನ ಮೂಟೆಗಳನ್ನು ಮತ್ತು ಮಾರುತಿ 800 ಕಾರನ್ನು ವಶಕ್ಕೆ ಪಡೆಯಲಾಗಿದೆ. [ಹೆಣ್ಣಿನ ಆಶೆಗೆ ಬಿದ್ದವರನ್ನು ಏನು ಮಾಡ್ತಿದ್ದರು ಗೊತ್ತಾ?]
ತಮಿಳುನಾಡಿನ ಸೇಲಂನಲ್ಲಿ ರೇಷ್ಮೆ ಉದ್ಯಮಿಯೊಬ್ಬರ ಗೋಡೌನ್ನಲ್ಲಿ ನಿಲ್ಲಿಸಿದ್ದ ಕಾರಿನಿಂದ ಕಳವು ಮಾಡಿದ್ದ ಹಣದ ಪೈಕಿ 5,58,000 ರು. ನಗದು ಹಣ, 150 ಕೆ.ಜಿ ತೂಕದ ರೇಷ್ಮೆ ನೂಲಿನ ಮೂಟೆಗಳನ್ನು ಹಾಗೂ ಈ ಕೃತ್ಯಕ್ಕೆ ಬಳಸಿದ್ದ ಒಂದು ಟಾಟಾ ಸುಮೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ನಕಲಿ ಸೀಲು ಸೃಷ್ಟಿಸಿ ವಂಚನೆ, ಇಬ್ಬರ ಬಂಧನ
ನಕಲಿ ಸೀಲುಗಳನ್ನು ಬಳಸಿ ಅಕ್ರಮವಾಗಿ ಭೂ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇವರು 412ಕ್ಕೂ ಹೆಚ್ಚು ನಕಲಿ ಸೀಲುಗಳನ್ನು ಸೃಷ್ಟಿಸಿಕೊಂಡು ವಿವಿಧ ಭೂ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಅವರಿಂದ ಅಪಾರ ಪ್ರಮಾಣದ ನಕಲಿ ಸೀಲುಗಳನ್ನು ಮತ್ತು ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. [ನಿಮ್ಮ ಒಡವೆ ಎಗರಿಸಿದ್ದು ಇವನೇನಾ? ವಸಿ ನೋಡಿ!]
ಲಗ್ಗೆರೆ ನಿವಾಸಿ ಬಾಸ್ಕರ ಸಿ.ವಿ. (45) ಮತ್ತು ಹೊನ್ನಿಗನಹಳ್ಳಿ (ತಾವರೆಕೆರೆ ಪೋಸ್ಟ್) ನಿವಾಸಿ ಮಾದೇಶ (33) ಬಂಧಿತರು. ಲಗ್ಗೆರೆಯ ಮುನೇಶ್ವರ ಲೇಔಟ್ ನಲ್ಲಿ ಆಡಿಟಿಂಗ್ ಹೆಸರಿನಲ್ಲಿ ಅಂಗಡಿಯನ್ನು ತೆರೆದು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದರು.
ಸುಮಾರು 412ಕ್ಕೂ ಹೆಚ್ಚು ಸರ್ಕಾರದ ವಿವಿಧ ಇಲಾಖೆಗಳ ನಕಲಿ ಸೀಲುಗಳನ್ನು ಸೃಷ್ಟಿಸಿ, ಅವುಗಳ ಸಹಾಯದಿಂದ ಖಾತೆ ಇಲ್ಲದ ಭೂಮಿಗಳಿಗೆ ನಕಲಿ ಖಾತೆಯನ್ನು ಸೃಸ್ಟಿಸುವುದು, ನಕಲಿ ನಕ್ಷೆಗಳನ್ನು ಸೃಷ್ಟಿಸುವುದು, ನಕಲಿ ಪ್ಲಾನ್ಗಳನ್ನು ಸೃಷ್ಟಿಸುವುದು, ಕೃಷಿ ಭೂಮಿಯನ್ನು ಕಮರ್ಷಿಯಲ್ ಭೂಮಿಯಾಗಿ ಪರಿವರ್ತನೆ ಮಾಡಿದ ನಕಲಿ ದಾಖಲೆಗಳನ್ನು ಸೃಷ್ಟಿಸುವುದು ಮತ್ತು ಇಂತಹ ನಕಲಿ ದಾಖಲೆಗಳನ್ನು ಬಳಸಿ ವಿವಿಧ ಬ್ಯಾಂಕ್ಗಳಿಂದ ಸಾಲಗಳನ್ನು ತಗೆದು ವಂಚಿಸುತ್ತಿದ್ದರು.
ಈ ರೀತಿ ನಕಲಿ ಸೀಲುಗಳನ್ನು ಬಳಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ನೀಡಿ ವಿವಿಧ ಬ್ಯಾಂಕ್ಗಳಿಂದ ಸಾಲ ಪಡೆದು ವಂಚಿಸಿರುವ ಬಗ್ಗೆ ತಿಳಿದು ಬಂದಿದೆ. [ಅತ್ತೆ ಜೊತೆಗಿನ ಪತಿಯ ಅನೈತಿಕ ಸಂಬಂಧ: ಬಲಿಯಾದಳು ಪತ್ನಿ!]