ಬೆಂಗಳೂರಿನಲ್ಲಿ 1.37 ಕೋಟಿ ಹಣದೊಂದಿಗೆ ಚಾಲಕ ಪರಾರಿ
ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದೊಂದಿಗೆ ಚಾಲಕ ಪರಾರಿಯಾಗಿದ್ದಾನೆ, ವಾಹನದಲ್ಲಿ ಒಂದು ಕೋಟಿ 37 ಲಕ್ಷದ ಹಣ ಇತ್ತು ಎಂದು ಮಾಹಿತಿ ಬಂದಿದೆ
ಬೆಂಗಳೂರು, ನವೆಂಬರ್, 23: ಒಂದು ಕೋಟಿಗೂ ಅಧಿಕ ಮೊತ್ತದ ಹಣವಿದ್ದ ವಾಹನದೊಂದಿಗೆ ಖಾಸಗಿ ಸಂಸ್ಥೆಯ ಸಿಬ್ಬಂದಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ವಾಹನದಲ್ಲಿ 2 ಸಾವಿರ ಹಾಗೂ 100ರೂ. ಮುಖಬೆಲೆಯ 1 ಕೋಟಿ 37 ಲಕ್ಷ ರೂ. ಮೊತ್ತದ ಹಣವಿತ್ತು ಎಂದು ತಿಳಿಸಲಾಗಿದೆ. ವಾಹನದಲ್ಲಿರುವ ಸಿಬ್ಬಂದಿಯು ವಿವಿಧ ಬ್ಯಾಂಕ್ ಗಳಿಂದ ಹಣ ಪಡೆದುಕೊಳ್ಳುತ್ತಿದ್ದರು.
ಈ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ರೂ.2 ಕೋಟಿ ಹಣ ಪಡೆದುಕೊಂಡಿದ್ದರು. ನಂತರ ಕೋಟಕ್ ಮಹೀಂದ್ರ ಬ್ಯಾಂಕ್ ನಿಂದ ರೂ. 7 ಲಕ್ಷ ಹಣ ವನ್ನು ವಾಹನಕ್ಕೆ ತುಂಬಿಸಿಲಾಗಿತ್ತು.
ಕೆ.ಜಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದಿಂದ ಹಣ ಪಡೆದುಕೊಳ್ಳಲು ವಾಹನ ನಿಲ್ಲಿಸಲಾಗಿತ್ತು. ಸೆಕ್ಯುರಿಟಿ ಗಾರ್ಡ್ ಮೂತ್ರ ವಿಸರ್ಜಜನೆಗೆ ಹೋಗಿದ್ದ ವೇಳೆ ವಾಹನ ಚಾಲಕ ಹಣ ಎಗರಿಸಿ ಪರಾರಿಯಾಗಿದ್ದಾನೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನುಚೇತನ್ ಹೇಳಿದ್ದಾರೆ.
Driver of a van carrying cash to an ATM flees away with Rs 1 crore 37 lakhs in KG Road (Bangalore). Investigation underway pic.twitter.com/8SKUFiMTfq
— ANI (@ANI_news) November 23, 2016
ಹಣ ಯಾವುದೇ ಬ್ಯಾಂಕ್ ಗೆ ಸೇರಿದ್ದಲ್ಲ. ಈ ಹಣವು ಲಾಜಿಕ್ಯಾಶ್ ಮ್ಯಾನೇಜ್ ಮೆಂಟ್ ಎಂಬ ಸಂಸ್ಥೆಗೆ ಸೇರಿದ್ದು, ಈ ಸಂಸ್ಥೆಯು ಬ್ಯಾಂಕ್ ಗಳಿಂದ ಹಣ ಪಡೆದುಕೊಂಡು ಎಟಿಎಂ ಘಟಕಗಳಿಗೆ ತುಂಬಿಸುತ್ತಿತ್ತು ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ನಮ್ಮ ಬ್ಯಾಂಕ್ ನಿಂದ ಆ ರೀತಿ ಯಾವುದೇ ಹಣ ಕಳವು ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಲಾಜಿಕ್ಯಾಶ್ ಸಂಸ್ಥೆಯ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ
ಹಣ ತುಂಬಿಸಲು ಸೆಕ್ಯೂರಿಟಿ ಟ್ರಾನ್ಸಿಟ್ ಕಂಪೆನಿಗೆ ಲಾಜಿಕ್ಯಾಶ್ ಸಂಸ್ಥೆ ಗುತ್ತಿಗೆ ನೀಡಿತ್ತು ಎಂಬ ಮಾಹಿತಿಯನ್ನು ಡಿ.ಸಿ.ಪಿ ಅನುಚೇತನ್ ತಿಳಿಸಿದರು.
It is not appropriate to release the details right now, investigation is still underway: Anucheth (DCP) pic.twitter.com/EAijIN3KAw
— ANI (@ANI_news) November 23, 2016
ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ರೂ. 2 ಕೋಟಿ ಹಣ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ನಿಂದ 7 ಲಕ್ಷ ರೂ. ಹಣವನ್ನು ಪಡೆದುಕೊಂಡು ವಾಹನದಲ್ಲಿ ತುಂಬಿಸಿದ್ದರು ಎಂದು ಅವರು ಹೇಳಿದರು.
ವಾಹನದಲ್ಲಿ 4 ಮಂದಿ ಸಿಬ್ಬಂದಿ ಇದ್ದರು. ಆರೋಪಿಗಳ ಪತ್ತೆಗಾಗಿ 4 ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ಸಂಬಂಧ ಲಾಜಿ ಕ್ಯಾಶ್ ಮ್ಯಾನೇಜ್ಮೆಂಟ್ ಸಂಸ್ಥೆಗೆ ನೋಟಿಸ್ ಜಾರಿಮಾಡಲಾಗಿದೆ. ಸಿಬ್ಬಂದಿ ಪರಾರಿಯಾಗಿರುವ ವಾಹನಕ್ಕೆ ಜಿಪಿಎಸ್ ಚಿಪ್ ಅಳವಡಿಸಿರಲಿಲ್ಲ ಎಂಬ ಮಾಹಿತಿಯನ್ನೂ ಸಹ ಡಿ.ಸಿ.ಪಿ ಅನುಚೇತನ್ ತಿಳಿಸಿದರು.
ಪರಾರಿಯಾಗಿರುವ ವಾಹನ ಚಾಲಕನ ಹೆಸರು ಡೊಮಿನಿಕ್. ಲಿಂಗರಾಜಪುರದ ನಿವಾಸಿಯಾಗಿರುವ ಡೊಮಿನಿಕ್ ಕಳೆದ 10 ದಿನಗಳಿಂದ ಕೆಲಸಕ್ಕೆ ಬಂದಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಕ್ಷಮಾಪಣೆ ಕೇಳಿ ಕಳೆದ ಎರಡು ದಿನಗಳಿಂದ ಕೆಲಸಕ್ಕೆ ಹಾಜರಾಗಿದ್ದ. ಎಲ್ಲವನ್ನೂ ಪ್ಲಾನ್ ಮಾಡಿಕೊಂಡೇ ಕೆಲಸಕ್ಕೆ ಹಾಜರಾಗಿದ್ದ ಅಂತ ಕಾಣುತ್ತೆ.