ಗೂಗಲ್ ಮ್ಯಾಪ್ ನಲ್ಲಿ 'ಬೆಳ್ಳಂದೂರು ಲೇಕ್' ಹುಡುಕಬೇಡಿ!
ಬೆಂಗಳೂರು, ನವೆಂಬರ್, 26: ಗೂಗಲ್ ಮ್ಯಾಪ್ ಗೆ ಹೋಗಿ 'ಬೆಳ್ಳಂದೂರು ಲೇಕ್ ಬೆಂಗಳೂರು' ಎಂದು ಸರ್ಚ್ ಮಾತ್ರ ಮಾಡಬೇಡಿ. ಹಾಗೇನಾದರೂ ಮಾಡಿದ್ದೇ ಆದಲ್ಲಿ ಮಹಾನಗರಿಯ ಮರ್ಯಾದೆ ಮೂರಾಬಟ್ಟೆಯಾಗಿರುವುದು ನಿಮ್ಮ ಕಣ್ಣಿಗೆ ಬೀಳುತ್ತದೆ.
ರಾಸಾಯನಿಕ ನೊರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಪರಿಶೀಲನೆ ನಡೆಸಿ ಕೆರೆ ಸ್ವಚ್ಛ ಮಾಡಲು ಆದೇಶ ನೀಡಿದ್ದರೂ ಪರಿಸ್ಥಿತಿಯಲ್ಲಿ ಯಾವ ಬದಲಾವಣೆ ಆಗಿಲ್ಲ.[ಮಹಾನಗರದ ಮಾಲಿನ್ಯದ ಕತೆ ಹೇಳುವ ಬೆಳ್ಳಂದೂರು ಕೆರೆ ವ್ಯಥೆ]
ಕೆರೆ ಸಂಪೂರ್ಣ ಸ್ವಚ್ಛ ಮಾಡಲು 5 ವರ್ಷ ಬೇಕು ಎಂದು ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ಟಿ.ಎಂ. ವಿಜಯ್ ಭಾಸ್ಕರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅಂದರೆ ಮುಂದಿನ 5 ವರ್ಷ ಸುತ್ತಲಿನ ನಿವಾಸಿಗಳ ಸ್ಥಿತಿ?
ಗೂಗಲ್ ಮ್ಯಾಪ್ ನಲ್ಲಿ ನೊರೆ ತುಂಬಿದ ಕೆರೆಯನ್ನು ನೋಡಿ ಮರುಕಪಡಬಹುದೇ ವಿನಃ ಸಾಮಾನ್ಯರು ಮತ್ತಿನ್ನೇನು ಮಾಡಲು ಸಾಧ್ಯ? ಕೆರೆ ವಿಷದ ಒಡಲಾಗಲು ಕಾರಣ ಹುಡುಕುತ್ತ ಹೋದರೆ ನಮ್ಮನ್ನು ನಾವೇ ಬೈದುಕೊಳ್ಳಬೇಕಿದೆ. ಆದರೂ ನೀವು ಒಮ್ಮೆ ಗೂಗಲ್ ಮ್ಯಾಪ್ ಗೆ ಹೋಗಿ ಕೆರೆ ದುರವಸ್ಥೆ ನೋಡಿಕೊಂಡು ಬನ್ನಿ...
ಗೂಗಲ್ ಮ್ಯಾಪ್ ನಲ್ಲಿ ಮಾನ ಹರಾಜು
ಇದು ಗೂಗಲ್ ಮ್ಯಾಪ್ ನಲ್ಲಿ ನಿಮಗೆ ಕಂಡುಬರುವ ಚಿತ್ರ. ಉಪಗ್ರಹದ ಕಣ್ಣಿಗೆ ಬಿದ್ದಿರುವ ಬೆಳ್ಳಂದೂರು ಕೆರೆಯ ವಾಸ್ತವದ ಸ್ಥಿತಿ.
ಪ್ರತಿಭಟನೆಗೆ ಬೆಲೆ ಇಲ್ಲ
ಕೆರೆಯಲ್ಲಿ ರಾಸಾಯನಿಕ ಪ್ರತಿದಿನ ಏರಿಕೆಯಾಗುತ್ತಿದೆ, ನಮಗೆ ಸ್ವಚ್ಛ ವಾತಾವರಣ ಕಲ್ಪಿಸಿ ಎಂದು ಸ್ಥಳೀಯರು ಮಾಡಿದ್ದ ಪ್ರತಿಭಟನೆಗೆ ಸರ್ಕಾರಗಳು ಇಲ್ಲಿಯವರೆಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.
ಸಹಿ ಸಂಗ್ರಹ ಅಭಿಯಾನ
ನೊರೆ ಉಪಟಳದಿಂದ ಬೇಸತ್ತ ಸ್ಥಳೀಯ ನಿವಾಸಿ ಗೃಹಿಣಿ ಸಂಚಿತಾ ಝಾ ರಾಸಾಯನಿಕ ಮಿಶ್ರಿತ ನೊರೆ ಸಮಸ್ಯೆಗೆ ಬೇಸತ್ತು ಸಹಿ ಸಂಗ್ರಹ ಅಭಿಯಾನಕ್ಕೆ ಇಳಿದಿದ್ದಾರೆ. 26 ವರ್ಷದ ಝಾ 'ಕ್ಲೀನ್ ಅಪ್ ಬೆಳ್ಳಂದೂರು ಲೇಕ್' ಎಂಬ ಹೆಸರಿನಲ್ಲಿ ಅಭಿಯಾನ ಆರಂಭ ಮಾಡಿದ್ದಾರೆ. ಅಭಿಯಾನಕ್ಕೆ 36 ಸಾವಿರ ಜನ ಸಹಿ ಮಾಡಿದ್ದಾರೆ.
ಪರಿಹಾರವೇ ಇಲ್ಲವೇ?
ಕೆರೆ ಶುದ್ಧ ಮಾಡುವುದು ಒಂದು ದಿನಕ್ಕೆ ಮುಗಿಯುವ ಕೆಲಸವಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ ಕಾರ್ಖಾನೆಗಳೂ ಹೊರಚೆಲ್ಲುವ ರಾಸಾಯನಿಕಗಳನ್ನು ನೇರವಾಗಿ ಬಿಡುವುದನ್ನು ನಿಲ್ಲಿಸುವುದಕ್ಕಾದರೂ ಕ್ರಮ ತೆಗೆದುಕೊಳ್ಳಬಹುದಿತ್ತಲ್ಲವೇ? ಎಂಬುದು ಸ್ಥಳೀಯರ ಪ್ರಶ್ನೆ.