ಬೆಂಗಳೂರು: ಬಿಪ್ಯಾಕ್ ಮತ್ತು ಎಂ.ಆರ್.ಪಿಎಲ್ ನಿಂದ 'ಹಸಿರು ಶಾಲೆ' ಉದ್ಘಾಟನೆ
ಬಿಪ್ಯಾಕ್ ಮತ್ತು ಎಂ.ಆರ್.ಪಿ.ಎಲ್ ಕಂಪೆನಿಗಳು ಜಂಟಿಯಾಗಿ 'ಹಸಿರು ಶಾಲೆ' ಎಂಬ ಅಭಿಯಾನವನ್ನು ಕೈಗೆತ್ತಿಕೊಂಡಿವೆ. ಅದರನ್ವಯ ಬೆಂಗಳೂರಿನ ಗುಟ್ಟಳ್ಳಿಯ ರಾಜಮಹಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮೊದಲ'ಹಸಿರು ಶಾಲೆ'ಯಾಗಿ ಬದಲಾಯಿಸಿವೆ.
ಬೆಂಗಳೂರು, ಫೆಬ್ರವರಿ 5: ಬಿಪ್ಯಾಕ್ ಮತ್ತು ಶೆಲ್ ಎಂ.ಆರ್.ಪಿ.ಎಲ್ ಕಂಪೆನಿಗಳು ಜಂಟಿಯಾಗಿ 'ಹಸಿರು ಶಾಲೆ' ಎಂಬ ಅಭಿಯಾನವನ್ನು ಕೈಗೆತ್ತಿಕೊಂಡಿವೆ. ಅದರನ್ವಯ ಬೆಂಗಳೂರಿನ ಗುಟ್ಟಳ್ಳಿಯ ರಾಜಮಹಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮೊದಲ 'ಹಸಿರು ಶಾಲೆ'ಯಾಗಿ ಬದಲಾಯಿಸಿವೆ.
ಬಿಪ್ಯಾಕ್ (Bangalore Political Action Committee-B.PAC) ಮತ್ತು 'ಶೆಲ್ ಎಂ.ಆರ್.ಪಿ.ಎಲ್ ಏವಿಯೇಷನ್ ಫ್ಯೂಯೆಲ್ ಆ್ಯಂಡ್ ಸರ್ವಿಸ್ ಲಿಮಿಟೆಡ್' ಜಂಟಿಯಾಗಿ ಗುಟ್ಟಳ್ಳಿ ಶಾಲೆಯನ್ನು 'ಹಸಿರು ಶಾಲೆ (Green School)'ಯಾಗಿ ಪರಿವರ್ತನೆ ಮಾಡಿವೆ. [ಸುಂಟಿಕೊಪ್ಪ ಸರಕಾರಿ ಶಾಲೆ ಅಂದರೆ ಓಪನ್ ಬಾರು, ಮಜಾ ಜೋರು!]
"ಹಸಿರು ಮತ್ತು ಸುರಕ್ಷಾ ಶಾಲೆ' ಎಂಬ ಆಶಯವನ್ನು ಎರಡೂ ಸಂಸ್ಥೆಗಳು ಕಾರ್ಯರೂಪಕ್ಕಿಳಿಸಿವೆ. ಈ ಮೂಲಕ ಶಾಲಾ ಪರಿಸರವನ್ನು ಸ್ವಚ್ಛತೆಯಿಂದಿಡುವುದು, ಸುರಕ್ಷಿತವಾಗಿಡುವುದು ಮತ್ತು ಶಾಲಾ ಆವರಣವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಜತೆಗೆ ಶಾಲೆಗಳಲ್ಲಿ ನಡೆಯುವ ದೌರ್ಜನ್ಯ, ಹಿಂಸೆಗಳನ್ನು ತಡೆಯುವ ಗುರಿಯನ್ನು ಇದರಲ್ಲಿ ಹಾಕಿಕೊಳ್ಳಲಾಗಿದೆ. [ಸರ್ಕಾರಿ ಶಾಲೆಯಂದ್ರೆ ಹಾಕತ್ತೂರು ಶಾಲೆಯಂತಿರಬೇಕು]
ಬದಲಾದ ಗುಟ್ಟಳ್ಳಿ ಶಾಲೆ
ಗುಟ್ಟಳ್ಳಿ ಶಾಲೆಯಲ್ಲಿ ಒಟ್ಟು 100 ವಿದ್ಯಾರ್ಥಿಗಳಿದ್ದಾರೆ. ಈ ಯೋಜನೆಯಡಿಯಲ್ಲಿ ಶಾಲೆಗೆ ಹಲವು ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಶಾಲೆ ಆವರಣದಲ್ಲಿ ಹೊಸ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಶಾಲೆಯ ಸೂರು ಸರಿಪಡಿಸಲಾಗಿದೆ. , ಶಾಲೆಯ ಕಿಟಕಿ ಬಾಗಿಲುಗಳನ್ನು ರಿಪೇರಿಯೂ ಮಾಡಲಾಗಿದೆ. ಸಣ್ಣ ಬಣ್ಣ ಬಳೆದು ಶಾಲೆಯನ್ನು ಅಂದಗೊಳಿಸಿದ್ದಾರೆ. ಡಿಜಿಟಲ್ ತರಗತಿಗಳನ್ನು ನಡೆಸಲು ಲ್ಯಾಪ್ ಟಾಪ್ ಮತ್ತು ಪ್ರೊಜೆಕ್ಟರ್ ವ್ಯವಸ್ಥೆ ಯನ್ನು ಶಾಲೆಯಲ್ಲಿ ಮಾಡಲಾಗಿದೆ. ಈ ಮೂಲಕ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ವ್ಯವಸ್ಥೆಗಳನ್ನು ಸಂಸ್ಥೆಯ ಕಡೆಯಿಂದ ಮಾಡಲಾಗಿದೆ.
ಶಾಲೆಯ ಮಕ್ಕಳಿಗೆ ನಿರಂತರ ಆರೋಗ್ಯ ತಪಾಸಣೆಯನ್ನೂ ಮಾಡಲಾಗುತ್ತಿದೆ. ಅಲ್ಲದೆ ವಿಶೇಷವಾಗಿ ಕಂಪ್ಯೂಟರ್ ಮತ್ತು ಇಂಗ್ಲಿಷ್ ತರಬೇತಿಗಳನ್ನೂ ನಡೆಸಲಾಗುತ್ತಿದೆ. ಈ ಮೂಲಕ ಸರಕಾರಿ ಶಾಲೆ ಮಕ್ಕಳು ಕಾನ್ವೆಂಟ್ ಶಾಲೆ ಮಕ್ಕಳಿಗಿಂತ ಹಿಂದುಳಿಯಬಾರದು ಎಂಬ ಆಶಯವನ್ನು ಜಾರಿಗೆ ತರಲಾಗಿದೆ.
ಶನಿವಾರ ನಡೆದ ಕಾರ್ಯಕ್ರಮದಲ್ಲಿ 'ಹಸಿರು ಶಾಲೆ'ಯನ್ನು ಮಲ್ಲೇಶ್ವರಂ ಶಾಸಕ ಡಾ ಅಶ್ವಥ್ ನಾರಾಯಣ್ ಉದ್ಘಾಟನೆ ಮಾಡಿದರು. ಬಿ ಪ್ಯಾಕ್ ನ ಪಾರ್ಥಸಾರಥಿ, ಗಾಂಧಿನಗರ ಕಾರ್ಪೊರೇಟರ್ ಹೇಮಲತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಿಗ್ ಬಾಸ್ ಕೊಡುಗೆ
ಇನ್ನು ಬಿಗ್ ಬಾಸ್ ರನ್ನರ್ ಅಪ್ ಕೀರ್ತಿ ಕೂಡಾ ಶಾಲೆಗೆ ತಮ್ಮದೇ ಆದ ಕೊಡುಗೆ ನೀಡಲಿದ್ದಾರೆ. ಶಾಲೆಗೆ ಲ್ಯಾಪ್ ಟಾಪ್ ಮತ್ತು ಗ್ರಂಥಾಲಯಕ್ಕೆ 10,000 ರೂಪಾಯಿಯ ಪುಸ್ತಕಗಳನ್ನು ಅವರು ನೀಡುವುದಾಗಿ ಹೇಳಿದ್ದಾರೆ.
ಗುಟ್ಟಳ್ಳಿ ಪೈಲಟ್ ಯೋಜನೆಯಾಗಿದ್ದು ಮುಂದಿನ ದಿನಗಳಲ್ಲಿ ಹಲವು ಶಾಲೆಗಳಲ್ಲಿ ಬಿ ಪ್ಯಾಕ್ ಇದೇ ರೀತಿಯ ಯೋಜನೆಗಳನ್ನು ಜಾರಿಗೆ ತರಲಿದೆ.