ನಿಮ್ಮ ಮುಂದೆ ತೆರೆದುಕೊಳ್ಳಲಿವೆ ಬೆಂಗಳೂರಿನ ಕಥೆಗಳು
ಬೆಂಗಳೂರು ಯಾರದೇ ಕಲ್ಪನೆಗೆ, ಹಿಡಿತಕ್ಕೆ, ಮಿಡಿತಕ್ಕೆ ಸಿಗಲಾರದಂತೆ ಅಗಾಧವಾಗಿ ಬೆಳೆಯುತ್ತಿದೆ. ಸಮುದ್ರದ ಆಳಅಗಲಗಳನ್ನು ಅಳೆಯಲು ಸಾಧ್ಯ. ಆದರೆ, ಬೆಂಗಳೂರನ್ನು ಅಳತೆಗೋಲಿನಲ್ಲಿ ಹಿಡಿದು ಇದು ಹೀಗೇ, ಇಷ್ಟೇ ಅಸಾಧ್ಯ.
ಬೆಂಗಳೂರಿನ ಮಿನಿಸ್ಟರುಗಳಿಗೆ ಕಾರ್ಪೋರೇಟರುಗಳು ಹೇಗೆ ಹಿಡಿತಕ್ಕೆ ಸಿಗುವುದಿಲ್ಲವೋ, ಬೆಂಗಳೂರಿನ ಜನತೆ ಕೂಡ ಕಾರ್ಪೋರೇಟರುಗಳಿಗಾಗಲಿ, ಮಂತ್ರಿಗಳಿಗಾಗಲಿ, ಪೊಲೀಸರಿಗಾಗಲಿ, ಬಿಪ್ಯಾಕ್ ನಂಥ ಶಿಸ್ತಿನ ಸಿಪಾಯಿಗಳಿಗಾಗಲಿ ಹಿಡಿತಕ್ಕೆ ಸಿಗುವುದಿಲ್ಲ.
ಬೆಂಗಳೂರಿನ ಮೂಲಭೂತ ಸೌಕರ್ಯಗಳನ್ನು ಬಿಬಿಎಂಪಿ ಮೊದಲು ಅಭಿವೃದ್ಧಿಪಡಿಸಲಿ ಎಂದು ಪೊಲೀಸ್ ಇಲಾಖೆ ಹೇಳುವುದು. ಪೊಲೀಸ್ ಇಲಾಖೆ ಕಟ್ಟುನಿಟ್ಟಿನಿಂದ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಲಿ ಎಂದು ಬಿಬಿಎಂಪಿಯವರು ಹೇಳುವುದು... ಅವರು ಇವರನ್ನು ತೆಗಳುವುದು, ಇವರು ಅವರನ್ನು ಹೀಗಳೆಯುವುದು...
ಇದೆಲ್ಲ ಇದ್ದಿದ್ದೆ. ಆದರೆ, ಬೆಂಗಳೂರಿನಲ್ಲಿ ಹಲವಾರು ಕಥೆಗಳಿವೆ. ಇವು ಶ್ರೀಸಾಮಾನ್ಯರ ಕಥೆಗಳು, ಪೊಲೀಸರ ಕಥೆಗಳು, ಟೆಕ್ಕಿಗಳ ಕಥೆಗಳು, ಕೆರೆಗಳ ಕಥೆಗಳು, ತಿಪ್ಪೆಯ ಕಥೆಗಳು, ರಸ್ತೆಯ ಕಥೆಗಳು, ಬಡಾವಣೆಯ ಕಥೆಗಳು, ಫ್ಲೈಓವರುಗಳ ಕಥೆಗಳು, ಅರಳಿಕಟ್ಟೆಯ ಹಿರಿಯಜ್ಜರ ಕಥೆಗಳು, ಪುಢಾರಿಗಳ ಕಥೆಗಳು.... ಹೀಗೆ ಹಲವಾರಿವೆ.
ಅವುಗಳನ್ನು ಒಂದೊಂದಾಗಿ ನಮಗೆ ತಿಳಿದಂತೆ, ಸುತ್ತಿಟ್ಟಿದ್ದ ಕಾರ್ಪೆಟ್ಟಿನ ಸುರುಳಿ ಬಿಚ್ಚಿಟ್ಟಂತೆ, ನಮ್ಮನಿಮ್ಮೆಲ್ಲರ ದಿನನಿತ್ಯ ಕೇಳುವ ಕಥೆಗಳಂತೆ ಬಿಡಿಸುತ್ತ ಹೋಗುವುದು ಈ ಪ್ರಯೋಗಾತ್ಮಕ ಬರಹಗಳ ಮೂಲ ಉದ್ದೇಶ. ಇದರಲ್ಲಿ ಉಪದೇಶವೂ ಇಲ್ಲ, ಬೆಂಗಳೂರು ಉದ್ಧಾರವಾಗಲಿ ಎಂಬ ಮಹತ್ವಾಕಾಂಕ್ಷೆಯೂ ಇಲ್ಲ.
ಇಷ್ಟವಾದರೆ ಬೆನ್ನುತಟ್ಟಿ, ಕಷ್ಟವಾದರೆ ಇದು ಹೀಗಿರಬಹುದಿತ್ತಲ್ಲ ಎಂದು ತಿದ್ದಿತೀಡಿ. ಇವು ನಿಮ್ಮವೇ ಅನ್ನಿಸಿದರೆ, ಇತರರಿಗೂ ಹೇಳಬೇಕೆಂನಿಸಿದರೆ ಸ್ನೇಹಿತರೆಲ್ಲರಿಗೂ ತಿಳಿಸಿ. ಇಲ್ಲ, ನನಗೂ ಬರೆಯಬೇಕು ಅಂತ ಅನ್ನಿಸಿದರೆ, ನಿಮ್ಮ ಬೆಂಗಳೂರಿನ ಕಥೆಗಳನ್ನು, ಅನುಭವಗಳನ್ನು ಹಂಚಿಕೊಳ್ಳಲು ಅಡ್ಡಿಯಿಲ್ಲ.