ಬೆಳ್ಳಂದೂರು ಕೆರೆ ಮಾಲಿನ್ಯ, ವಿಚಾರಣೆಗಿದ್ದ ತಡೆ ಸುಪ್ರೀಂನಿಂದ ತೆರವು
ನವದೆಹಲಿ, ಆಗಸ್ಟ್ 8: ನೊರೆಯುಗುಳುತ್ತಾ ದೇಶದಾದ್ಯಂತರ ಚರ್ಚೆಗೆ ಗ್ರಾಸವಾಗಿದ್ದ ಬೆಳ್ಳಂದೂರು ಕೆರೆ ಮಾಲಿನ್ಯ ಪ್ರಕರಣದ ವಿಚಾರಣೆ ಮುಂದುವರಿಸಲು ಸುಪ್ರಿಂ ಕೋರ್ಟ್ ಆದೇಶ ನೀಡಿದೆ.
ಬೆಂಗಳೂರಲ್ಲಿ ಮಳೆ: ಬೆಳ್ಳಂದೂರು ಕೆರೆಯಲ್ಲಿ ನೊರೆ!
ಈ ಪ್ರಕರಣದ ವಿಚಾರಣೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್ಜಿಟಿ) ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿತ್ತು. ಈ ತಡೆಯನ್ನು ಇಂದು ತೆರವುಗೊಳಿಸಿದ ಸುಪ್ರಿಂ ಕೋರ್ಟ್ ವಿಚಾರಣೆ ಮುಂದುವರೆಸುವಂತೆ ಸೂಚನೆ ನೀಡಿದೆ. ಇದರಿಂದ ನ್ಯಾಯಮಂಡಳಿಯಲ್ಲಿ ಮತ್ತೆ ವಿಚಾರಣೆ ಆರಂಭವಾಗಲಿದೆ.
ಹೈಕೋರ್ಟ್ ತಡೆ ಪ್ರಶ್ನಿಸಿ 'ನಮ್ಮ ಬೆಂಗಳೂರು ಫೌಂಡೇಶನ್' ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್. ರೋಹಿಂಗ್ಟನ್ ನಾರಿಮನ್ ಮತ್ತು ಕಿಶನ್ ಕೌಲ್ ಅವರಿದ್ದ ನ್ಯಾಯಪೀಠ "ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಪಟ್ಟ ವಿಷಯದಲ್ಲಿ ವಿಚಾರಣೆಗೆ ತಡೆಯಾಜ್ಞೆ ನೀಡುವುದು ಸೂಕ್ತ ಕ್ರಮವಲ್ಲ," ಎಂದು ಅಭಿಪ್ರಾಯಪಟ್ಟಿತು.
"ಬೆಳ್ಳಂದೂರು ಕೆರೆ ಮಾಲಿನ್ಯ ಪ್ರಕರಣವನ್ನು ಎನ್ಜಿಟಿ ಸರಿಯಾದ ರೀತಿಯಲ್ಲಿಯೇ ವಿಚಾರಣೆ ನಡೆಸುತ್ತಿತ್ತು," ಎಂದು ಹೇಳಿದ ಸುಪ್ರಿಂ ಕೋರ್ಟ್ ನ್ಯಾಯಪೀಠ ಹೈಕೋರ್ಟ್ ನೀಡಿದ್ದ ಆದೇಶವನ್ನು ವಜಾಗೊಳಿಸಿತು.