ಬೆಳ್ಳಂದೂರು ಕೆರೆಯಲ್ಲಿ ನೊರೆ: ಕರ್ನಾಟಕಕ್ಕೆ ಎನ್ ಜಿಟಿ ತರಾಟೆ
ಬೆಂಗಳೂರು, ಏಪ್ರಿಲ್ 18: ನಿನ್ನೆ(ಏಪ್ರಿಲ್ 17)ಯಷ್ಟೇ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಪ್ರತ್ಯಕ್ಷವಾಗಿ, ಪ್ರಯಾಣಿಕರ ಮುಖಕ್ಕೆ ದುರ್ಗಂಧಯುಕ್ತ ನೊರೆ ರಾಚುತ್ತಿರುವ ಕುರಿತು ಸುದ್ದಿಯಾಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್ ಜಿ ಟಿ) ಕರ್ನಾಟಕ ಸರ್ಕಾರವನ್ನು ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದ ಇತರೆ ವಿಭಾಗಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಕಳೆದ ವಾರವೇ ಬೆಳ್ಳಂದೂರು ಕೆರೆಯನ್ನು ಸ್ವಚ್ಛಗೊಳಿಸುವಂತೆ ಎನ್ ಜಿಟಿ ಆದೇಶ ನೀಡಿದ್ದರೂ, ತನ್ನ ಆದೇಶವನ್ನು ಜಾರಿಗೆ ತರುವಲ್ಲಿ ವಿಫಲವಾಗಿರುವ ಕರ್ನಾಟಕ ಕಾನೂನು ವಿಭಾಗ ಮತ್ತು ಇತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಇವರೆಲ್ಲರ ವಿರುದ್ಧ ಸಮನ್ ಜಾರಿಗೊಳಿಸಿದ್ದು, ಏಪ್ರಿಲ್ 19 ರಿಂದ ಪ್ರತಿದಿನ ಈ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ. [ಮುಖಕ್ಕೆ ರಾಚುತ್ತಿದೆ ಬೆಳ್ಳಂದೂರು ಕೆರೆಯ ದುರ್ಗಂಧಯುಕ್ತ ನೊರೆ]
ಎನ್ ಜಿ ಟಿ ಆದೇಶಗಳನ್ನು ಪಾಲಿಸುವುದಕ್ಕೆ ಸರ್ಕಾರಿ ಇಲಾಖೆಗಳೇಕೆ ಹಿಂದೇಟು ಹಾಕುತ್ತಿದೆ ಎಂದು ಕರ್ನಾಟಕ ಸರ್ಕಾರ ಮತ್ತು ಇತರೆ ವಿಭಾಗಗಳಾದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ(KSPCB), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (LDA) ಗಳನ್ನು ಎನ್ ಜಿಟಿ ಪ್ರಶ್ನಿಸಿದೆ.
ಬೆಳ್ಳಂದೂರು ಕೆರೆಗೆ ಹರಿದುಹೋಗುವ 800 ಮಿಲಿಯನ್ ಲೀಟರ್ ನಷ್ಟು ಸಂಸ್ಕರಿಸದ ಚರಂಡಿ ನೀರು ಈ ಭಾಗದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.