ಸರ್ಜಾಪುರ ರಸ್ತೆ ವಿಸ್ತರಣೆಗೆ ಸ್ಥಳೀಯರ ಆಕ್ರೋಶ
ಬೆಂಗಳೂರು, ಆಗಸ್ಟ್ 9 : ಸರ್ಜಾಪುರ ರಸ್ತೆಯನ್ನು ಈಗಿರುವ 24 ಮೀಟರ್ ನಿಂದ 45 ಮೀಟರ್ ಗೆ ವಿಸ್ತರಿಸುವ ಬೆಂಗಳೂರು ಮಹಾನಗರ ಪಾಲಿಕೆಯ ಯೋಜನೆ ಈ ಭಾಗದ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳನ್ನು ಬೀದಿಗೆ ತಳ್ಳಲಿದೆ ಎಂದು ಸರ್ಜಾಪುರದ ನಿವಾಸಿ ಹಾಗೂ ಮಾಜಿ ಶಾಸಕ ರಾಮಚಂದ್ರ ರೆಡ್ಡಿ ಹೇಳಿದ್ದಾರೆ.
ದಶಕಗಳಿಂದ ಹಾಗೂ ಐಟಿ ಉಚ್ಛ್ರಾಯ ಸ್ಥಿತಿಗೆ ಬರುವ ಮುಂಚಿನಿಂದಲೂ ನಾವು ಆ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಈ ಹಿಂದಿನಿಂದಲೂ ಸರ್ಜಾಪುರ ರಸ್ತೆಯ ನಿವಾಸಿಗಳಾಗಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇವೆ. ಆದರೆ ಈಗ ಬಿಬಿಎಂಪಿ ರಸ್ತೆ ವಿಸ್ತರಣೆ ಯೋಜನೆ ನಮ್ಮ ಕನಸಿಗೂ ತಣ್ಣೀರೆರಚಿದೆ ಎಂದಿದ್ದಾರೆ.
ರಸ್ತೆ ವಿಸ್ತರಣೆ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿರುವ ಬಿಬಿಎಂಪಿ ಅದಕ್ಕೆ ಸರಿಯಾದ ಪರಿಹಾರ ನೀಡಲು ಮಾತ್ರ ಮುಂದಾಗಿಲ್ಲ. ಇದು ಶೋಚನೀಯ. ಈ ಹಿನ್ನಲೆಯಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಬೇಕಾಗಿರುವುದ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಬಿಬಿಎಂಪಿಯ ರಸ್ತೆ ವಿಸ್ತರಣೆ ಯೋಜನೆಯು ಕೇಂದ್ರ ಸರಕಾರದ ಭೂ ಸ್ವಾಧೀನ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಒಂದು ಸಾರ್ವಜನಿಕ ಉಪಯುಕ್ತ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಕಾಯ್ದೆ ಪ್ರಕಾರ ಅದರ ಸಾಮಾಜಿಕ ಪರಿಣಾಮಗಳನ್ನು ಅಧ್ಯಯನ ಮಾಡುವುದು ಕಡ್ಡಾಯ.
ಆದರೆ, ಬಿಬಿಎಂಪಿ ಪ್ರಕಟಿಸಿರುವ ಪ್ರಸ್ತಾವನೆಯಲ್ಲಿ ಈ ಅಧ್ಯಯನಗಳ ವಿವರಗಳನ್ನೇ ನೀಡದಿರುವುದು ಪ್ರಶ್ನಾರ್ಹವಾಗಿದೆ. ಜತೆಗೆ ಈ ಯೋಜನೆಯ ಡಿಪಿಆರ್ ನಲ್ಲೂ ಸಮಸ್ಯೆಯಿದೆ ಎಂದು ಸರ್ಜಾಪುರ ಭಾಗದ ಸಮಾಜ ಸೇವಕ ಭಗತ್ ರೆಡ್ಡಿ ಹೇಳಿದರು.
ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಗತ್ಯವಾದ ಹಣವೇ ಇಲ್ಲದೆ ಹೇಗೆ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯ. ಬಿಬಿಎಂಪಿ ಕೇವಲ 80 ಕೋಟಿಯನ್ನು ಈ ಯೋಜನೆಗೆ ನೀಡಿದೆ. ಆದರೆ ಭೂ ಸ್ವಾಧೀನಕ್ಕೆ 1000 ಕೋಟಿ ರುಪಾಯಿ ಬೇಕಾಗಿದೆ. ಹಣಕಾಸಿನ ಮೂಲವನ್ನೇ ತೋರಿಸದೆ ಯೋಜನೆಯನ್ನು ಪ್ರಕಟಿಸಿರುವುದು ಅನುಮಾನ ಎಂದು ಆರೋಪಿಸಲಾಯಿತು.
ಸರ್ಜಾಪುರ ರಸ್ತೆಯ ನಿವಾಸಿಗಳು ಈಗ ಒಗ್ಗಟ್ಟಾಗಿ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಸರಕಾರ ಮತ್ತು ಬಿಬಿಎಂಪಿ ಸರ್ಜಾಪುರ ಮೂಲ ನಿವಾಸಿಗಳಿಗೆ ಅನ್ಯಾಯವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ ಎನ್ನುವ ಆಶಾವಾದವನ್ನೂ ಹೊಂದಿದ್ದಾರೆ. ಕೆಲವು ಪ್ರಭಾವಿಗಳ ಮನವೊಲಿಕೆ ಹಾಗು ಲಾಭಕ್ಕಾಗಿ ನೂರಾರು ಕುಟುಂಬಗಳನ್ನು ಬೀದಿಗೆ ತಳ್ಳುವುದು ಸರಿಯಲ್ಲ. ಆದ್ದರಿಂದ ಕೂಡಲೇ ಈ ಪ್ರಕಟಣೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.