ಬಿಬಿಎಂಪಿ ಚುನಾವಣೆ ಮುಂದಕ್ಕೆ, ನೀತಿ ಸಂಹಿತೆ ರದ್ದು
ಬೆಂಗಳೂರು, ಜು. 05: ಜುಲೈ 28 ಕ್ಕೆ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆ ಮುಂದಕ್ಕೆ ಹೋಗಿದ್ದು ಅಧಿಕೃತವಾಗಿದೆ. ಚುನಾವಣೆ ನಡೆಸಲು ಸುಪ್ರೀಂಕೋರ್ಟ್ 8 ವಾರಗಳ ಕಾಲಾವಕಾಶ ನೀಡಿದ ಮರುದಿನವೇ ರಾಜ್ಯ ಚುನಾವಣಾ ಆಯೋಗ ತಾನು ಹೊರಡಿಸಿದ್ದ ಬಿಬಿಎಂಪಿ ಚುನಾವಣಾ ವೇಳಾಪಟ್ಟಿಯನ್ನು ಹಿಂಪಡೆದಿದೆ.
ಇದರೊಂದಿಗೆ ಮಾದರಿ ನೀತಿ ಸಂಹಿತೆಯನ್ನು ಹಿಂದಕ್ಕೆ ಪಡೆಯಲಾಗಿದ್ದು ಕುಂಠಿತ ಕಾಮಗಾರಿಗಳು ಮತ್ತೆ ಆರಂಭವಾಗಲಿದೆ. ಚುನಾವಣಾ ನೀತಿ ಸಂಹಿತೆ ರದ್ದಾಗಿರುವುದರಿಂದ ಬಿಬಿಎಂಪಿಯ ಸುಮಾರು 1 ಸಾವಿರ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮತ್ತೆ ಆರಂಭವಾಗಲಿದೆ.[ಬಿಬಿಎಂಪಿ ಚುನಾವಣೆ ಸುಪ್ರೀಂ ತೀರ್ಪು, ಮುಂದೇನು?]
ಬಿಬಿಎಂಪಿ ಚುನಾವಣೆ ಗೊಂದಲದ ಗೂಡಾಗಿ ಮಾರ್ಪಟ್ಟಿತ್ತು. ಸರ್ಕಾರ, ಸುಪ್ರೀಂ ಕೋರ್ಟ್ ಮತ್ತು ವಿಪಕ್ಷಗಳ ನಡುವಿನ ಹಗ್ಗ ಜಗ್ಗಾಟಕ್ಕೆ ಸಾಕ್ಷಿಯಾಗಿತ್ತು. ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಹೊರಡಿಸಿ ನೀತಿ ಸಂಹಿತೆ ಜಾರಿ ಮಾಡಿತ್ತು.[ಬಿಬಿಎಂಪಿ ವಿಭಜನೆ ಹೇಗೆ?]
ಹೊಸ ವೇಳಾಪಟ್ಟಿಯನ್ನು ಸದ್ಯದ್ಲಲೇ ಬಿಡುಗಡೆ ಮಾಡಲಾಗುವುದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಸುಪ್ರೀಂಕೋರ್ಟ್ ಶುಕ್ರವಾರ ನೀಡಿದ ತೀರ್ಪಿನಲ್ಲಿ ನಿಗದಿಪಡಿಸಿರುವ ಕಾಲಮಿತಿಯೊಳಗೆ ಬಿಬಿಎಂಪಿ ಚುನಾವಣೆಯನ್ನು ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ನಂತರ ಹೊರಡಿಸಲಾಗುವುದು ಎಂದು ತಿಳಿಸಿದೆ.