ಬಿಬಿಎಂಪಿ ಹೈ ಡ್ರಾಮಾ: ಯಾರು, ಏನು ಹೇಳಿದರು?
ಬೆಂಗಳೂರು, ಆಗಸ್ಟ್. 29: ಬಿಬಿಎಂಪಿ ಗಾದಿ ಏರಲು ಮೂರು ರಾಜಕೀಯ ಪಕ್ಷಗಳು ತಂತ್ರ ಆರಂಭಿಸಿದ್ದರೆ , ಅತ್ತ ಕಾರ್ಪೋರೇಟರ್ ಗಳು ಕೇರಳಕ್ಕೆ ತೆರಳಿದ್ದರೆ ಇತ್ತ ಬೆಂಗಳೂರಿಗೆ ಸೀಮಿತವಾಗಿದ್ದ ರಾಜಕಾರಣದ ಚಟುವಟಿಕೆಗಳು ನಿಧಾನವಾಗಿ ರಾಜ್ಯವನ್ನು ನಿಧಾನವಾಗಿ ವ್ಯಾಪಿಸತೊಡಗಿವೆ.
ಕಾಂಗ್ರೆಸ್ ನಾಯಕರೇ ತೆರೆಮರೆಯಲ್ಲಿ ಪಕ್ಷೇತರರನ್ನು ಕೇರಳಕ್ಕೆ ಕಳುಹಿಸಿದ್ದು ಸಚಿವರೊಬ್ಬರ ಆಪ್ತರ ರೆಸಾರ್ಟ್ ನಲ್ಲಿ ಇದ್ದಾರೆ ಎಂದು ಮಾಹಿತಿಯೂ ಲಭ್ಯವಾಗಿದೆ. ವಿವಿಧ ಪಕ್ಷಗಳ ರಾಜಕೀಯ ನಾಯಕರು ತಮ್ಮದೇ ಆದ ದೃಷ್ಟಿಕೋನದಲ್ಲಿ ರಾಜಕೀಯ ಬದಲಾವಣೆಗಳನ್ನು ವಿಶ್ಲೇಷಣೆ ಮಾಡುತ್ತಿದ್ದಾರೆ.[ಎಲ್ಲರಿಗೂ ಬೇಕಾದ 6 ಪಕ್ಷೇತರ ಕಾರ್ಪೋರೇಟರ್ ಗಳು ಯಾರ್ಯಾರು?]
ಮುಖ್ಯಮಂತ್ರಿ, ಸಚಿವರು, ಆರ್ ಅಶೋಕ್, ಕುಮಾರಸ್ವಾಮಿ ದೇವೇಗೌಡರು ಅವರವರ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಶನಿವಾರ ನಾಯಕರು ಏನು ಹೇಳಿದರು ಎಂದು ನೋಡಿಕೊಂಡು ಬರೋಣ.
ನನ್ನ ಗಮನಕ್ಕೆ ಬಂದಿಲ್ಲ
ಈ ಬಗೆಯ ಮಾತುಕತೆಗಳು ನನ್ನ ಗಮನಕ್ಕೆ ಬಂದಿಲ್ಲ. ಜೆಡಿಎಸ್ ನಲ್ಲಿ ಎಲ್ಲವೂ ಸಸೂತ್ರವಾಗಿದ್ದು ನಮ್ಮ ಕಾರ್ಪೋರೇಟರ್ ಗಳಿಗೆ ಸೂಚನೆ ನೀಡಿದ್ದೇವೆ. ಎಲ್ಲ ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಕುಮಾರಸ್ವಾಮಿ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ.
ಬಿಜೆಪಿಗೆ ಬೆಂಬಲವಿಲ್ಲ
ಯಾವ ಕಾರಣಕ್ಕೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ದೇವೇಗೌಡರು ಇರುವವರೆಗೂ ಅದು ಸಾದ್ಯವೇ ಇಲ್ಲ. ಕೋಮವಾದಿಗಳನ್ನು ಅಧಿಕಾರದಿಂದ ದೂರವಿಡಲು ಒಂದಾದರೆ ತಪ್ಪೇನು ಎಂದು ಜೆಡಿಎಸ್ ಶಾಸಕ ಜಮೀರ್ ಅಹಮದ್ ಪ್ರಶ್ನೆ ಮಾಡಿದ್ದಾರೆ
ಜನಾದೇಶ ಗೌರವಿಸಲಿ
ಜನರು ನೀಡಿರುವ ಆದೇಶವನ್ನು ಗೌರವಿಸುವುದನ್ನು ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಅನುಸರಿಸಬೇಕು. ಕಾಂಗ್ರೆಸ್ ನ ಕುತಂತ್ರ ಸಲಹಿಸಲು ಸಾಧ್ಯವಿಲ್ಲ. ಚುನಾವಣಾ ಆಯೋಗ ಕೂಡಲೇ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಮೀಸಲು ಪ್ರಕಟ ಮಾಡಬೇಕು ಎಂದು ಕೇಂದ್ರ ಸಚಿವ ಅನಂತ ಕುಮಾರ್ ಬೆಂಗಳೂರಿನಲ್ಲಿ ಹೇಳಿದ್ದಾರೆ
ಯಾರೊಂದಿಗೂ ಮೈತ್ರಿ ಇಲ್ಲ
ಕಾಂಗ್ರೆಸ್ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ಈ ಬಗ್ಗೆ ಇಲ್ಲಿಯವರೆಗೆ ಮಾತುಕತೆ ನಡೆದಿರುವುದು ನನಗೆ ಗೊತ್ತಿಲ್ಲ. ಅಂಥ ಬೆಳವಣಿಗೆ ನಡೆದರೆ ಹೈ ಕಮಾಂಡ್ ಜತೆ ಮಾತನಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಲ್ಲಿ ಹೇಳಿದ್ದಾರೆ.
ಎಲ್ಲ ಮಾರ್ಗಗಳು ತೆರೆದಿದೆ
ನಾವು ಎಲ್ಲ ಮಾರ್ಗಕ್ಕೂ ಸಿದ್ಧರಿದ್ದೇವೆ. ಜನರು ನಮಗೆ ಆದೇಶ ನೀಡಿದ್ದು ಕಾಂಗ್ರೆಸ್ ನ ತಂತ್ರವನ್ನು ಸಹಿಸಲ್ಲ. ಈ ಬಗ್ಗೆ ಹಿರಿಯ ನಾಯಕರೊಂದಿಗೆ ಕುಳಿತು ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಆರ್ ಅಶೋಕ್ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಮಾತುಕತೆ ನಡೆದಿರಬಹುದು
ಕೋಮವಾದಿಗಳನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಮಾರತುಕತೆ ನಡೆದಿರಬಹುದು. ಹಿಂದೆಯೂ ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸಿದ್ದವು ಎಂದು ಸಚಿವ ಸತೀಶ್ ಜಾರಕಿಹೊಳಿ ಮೈಸೂರಿನಲ್ಲಿ ಹೇಳಿದ್ದಾರೆ.
ಕ್ಷೇತ್ರ ಬಿಟ್ಟು ತೆರಳದಂತೆ ಸೂಚಿಸಲಾಗಿದೆ
ಮೇಯರ್ ಆಯ್ಕೆ ಪ್ರಕ್ರಿಯೆ ಮುಗಿಯುವವರೆಗೆ ನಮ್ಮ ಪಕ್ಷದ ಕಾರ್ಪೋರೇಟರ್ ಗಳಿಗೆ ಕ್ಷೇತ್ರ ಬಿಟ್ಟು ತೆರಳದಂತೆ ಸೂಚಿಸಲಾಗಿದೆ. ಮೈತ್ರಿ ಚಟುವಟಿಕೆ ನಡೆದರೆ ಕುಳಿತು ಚರ್ಚಿಸಿ ತೀರ್ಮಾನ ತೆಗೆದುಲೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.